ಪದ್ಮಶ್ರೀಗಿಂತ ಮಿಗಿಲಾದ ಆಸ್ತಿ ಬೇರೆ ಏನಿದೆ: ಹರೇಕಳ ಹಾಜಬ್ಬ

Update: 2021-11-09 07:09 GMT

ಮಂಗಳೂರು : ದೇಶದ ಪ್ರಧಾನ ಮಂತ್ರಿ ಎದುರು ರಾಷ್ಟ್ರಪತಿಯವರು ನೀಡಿದ ಈ ಪದ್ಮಶ್ರೀಗಿಂತ ಮಿಗಿಲಾದ ಆಸ್ತಿ ಬೇರೇನಿದೆ?
ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ನಿನ್ನೆ ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ ಇಂದು ಮಂಗಳೂರಿಗೆ ಆಗಮಿಸಿದ ಹರೇಕಳ ಹಾಜಬ್ಬ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಡಳಿತದ ಸನ್ಮಾನ ಸ್ವೀಕರಿಸಿ ಮಾಧ್ಯಮದವರ ಪ್ರಶ್ನೆಗೆ ನೀಡಿದ ಭಾವುಕ ಉತ್ತರವಿದು.

ಸರಕಾರದಿಂದ ನಿಮ್ಮದೇನಾದರೂ ಬೇಡಿಕೆ ಇದೆಯೇ ? ನಿಮಗೇನಾದರೂ ಸಹಾಯದ ಅಗತ್ಯವಿದೆಯೇ ಎಂಬ ಸುದ್ದಿಗಾರರ ಪದೇ ಪದೇ ಪ್ರಶ್ನೆಗೂ ಹಾಜಬ್ಬರ ಸರಳ ಉತ್ತರ ಇದೇ ಆಗಿತ್ತು.

ಪಿಯು ಶಾಲೆಗಾಗಿ ನೀವು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೀರಲ್ಲ ಎಂಬ ಪ್ರಶ್ನೆಗೆ, ಆ ಬೇಡಿಕೆ ಯಾವತ್ತೂ ಇದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅವರೂ ಒಂದು ಕೋಟಿ ರೂ. ನೀಡುವ ಭರವಸೆ ನೀಡಿದ್ದಾರೆ ಎಂದರು.

ಕಿತ್ತಳೆ ಹಣ್ಣು ಸಾಲ ಪಡೆದು ಮಾರಿದ ವ್ಯಕ್ತಿಗೆ ಇಂತಹ ಅತ್ಯುನ್ನತ ಪ್ರಶಸ್ತಿ ಪಡೆಯಲು ಅವಕಾಶ ಮಾಡಿದ ಎಲ್ಲರಿಗೂ ನಾನು ಶಿರಬಾಗಿ ನಮಿಸುತ್ತೇನೆ ಎಂದು ಹೇಳಿದ ಹರೇಕಳ ಹಾಜಬ್ಬ, ತಮ್ಮ ಮಾತುಗಳುದ್ದಕ್ಕೂ ಜಿಲ್ಲಾಧಿಕಾರಿ, ಲೋಕಸಭಾ ಸದಸ್ಯರನ್ನು ಸ್ಮರಿಸಿಕೊಂಡರು.

ಪ್ರಶಸ್ತಿ ಸ್ವೀಕರಿಸಲು ಹೊಸದಿಲ್ಲಿಗೆ ಹೋಗಬೇಕಾದ ಸಂದರ್ಭ ಜಿಲ್ಲಾಧಿಕಾರಿ 5 ಗಂಟೆಗೆ ಕಾರು ಕಳುಹಿಸಿ ಕೋವಿಡ್ ಟೆಸ್ಟ್ ಮಾಡಿಸಿ, ಇಂದು ಅಲ್ಲಿಂದ ಹಿಂತಿರುಗುವರೆಗೂ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಸಿದ್ದಾರೆ. ಸಾಮಾನ್ಯ ಬಡ ವ್ಯಕ್ತಿಯೊಬ್ಬನನ್ನು ಈ ಜಿಲ್ಲೆಯಿಂದ ದೇಶದ ರಾಜಧಾನಿಯ ರಾಷ್ಟ್ರಪತಿ ಭವನಕ್ಕೆ ಕಳುಹಿಸಲು ಸಹಕರಿಸಿದ್ದಾರೆ ಎಂದು ತಮ್ಮ ಮಾತಿನುದ್ದಕ್ಕೂ ಜಿಲ್ಲಾಧಿಕಾರಿಯವರನ್ನು ಸ್ಮರಿಸಿದರು.

ಪದ್ಮಶ್ರೀ ಪದಕ, ಪ್ರಶಸ್ತಿ ಪತ್ರವನ್ನು ತೆರೆದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಕೈಗಿತ್ತು ಅದನ್ನು ತೆರೆದು ನೋಡುವಂತೆ ಹಾಜಬ್ಬರವರು ತಿಳಿಸಿದರು.

ಹಾಜಬ್ಬರವರಿಂದ ಪದ್ಮಶ್ರೀ ಪದಕವನ್ನು ನೋಡುವ ಅವಕಾಶ ನಮಗೂ ದೊರಕಿದೆ. ಅವರ ಸರಳತೆ, ಅವರ ಆದರ್ಶ ಹಾಗೂ ಅದಕ್ಕಿಂತಲೂ ಮುಖ್ಯವಾಗಿ ತನಗಾಗಿ ಏನೂ ಬಯಸದೆ, ತಾನು ದುಡಿದ ಹಣವನ್ನು ಶಾಲೆಗಾಗಿ ಮುಡಿಪಿಟ್ಟ ಸರಳ ವ್ಯಕ್ತಿತ್ವಕ್ಕೆ ದೊರಕಿದ ಗೌರವ ಇಡೀ ಜಿಲ್ಲೆ ಮತ್ತು ರಾಜ್ಯಕ್ಕೆ ಸಂದ ಗೌರವವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅಭಿಪ್ರಾಯಿಸಿದರು.

ಈ ಸಂದರ್ಭ ಕಸಪಾ ಜಿಲ್ಲಾಧ್ಯಕ್ಷ ನಗರಾಭಿವೃದ್ಧಿ ಕೋಶದ ಉಪ ನಿರ್ದೇಶಕಿ ಗಾಯತ್ರಿ ನಾಯಕ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು.

ಸರಳ ಹಾಜಬ್ಬರೆದುರು ಸರಳತೆ ಮೆರೆದ ಜಿಲ್ಲಾಧಿಕಾರಿ

ನಿನ್ನೆ ಹೊಸದಿಲ್ಲಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಬಳಿಕ ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಪದ್ಮಶ್ರೀ ಹರೇಕಳ ಹಾಜಬ್ಬರವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಊರಿನವರು ಹಾರ, ತುರಾಯಿಯೊಂದಿಗೆ ಸೇರಿದ್ದರು.

ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ಜನರನ್ನು ಕಂಡ ಪದ್ಮಶ್ರೀ ಹಾಜಬ್ಬ ಗಲಿಬಿಲಿಗೊಳಗಾದರು. ನನಗೆ ಯಾವುದೇ ಸನ್ಮಾನ ಬೇಡ ಎನ್ನುತ್ತಾ, ಎಲ್ಲರಿಗೂ ಕೈಮುಗಿಯುತ್ತಾ ತಮಗಾಗಿ ಜಿಲ್ಲಾಡಳಿತದಿಂದ ಕಳುಹಿಸಲಾಗಿದ್ದ ಕಾರಿನತ್ತ ಧಾವಿಸಿ ಕಾರು ಹತ್ತಿದರು.

ಅಲ್ಲಿಂದ ಅವರನ್ನು ಸರ್ಕ್ಯೂಟ್ ಹೌಸ್ ಅತಿಥಿ ಗೃಹಕ್ಕೆ ಕರೆದೊಯ್ದು ಸ್ವಲ್ಪ ಹೊತ್ತು ಸಾವರಿಸಿಕೊಳ್ಳಲು ಅವಕಾಶ ನೀಡಲಾಯಿತು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.ಯವರು ಸರ್ಕ್ಯೂಟ್ ಹೌಸ್‌ಗೆ ತೆರಳಿ ಅಲ್ಲಿಂದ ಅವರನ್ನು ಸ್ವಾಗತಿಸಿ, ಅವರ ಜತೆ ಕಾರಿನಲ್ಲಿ ಕಚೇರಿಗೆ ಆಗಮಿಸುವ ಮೂಲಕ ಸರಳ ಹಾಜಬ್ಬರ ಜತೆ ತಾನೂ ಸರಳರಾದರು.

ಪ್ರಧಾನಿ ನನ್ನ ಕೈ ಮುಟ್ಟಿದರು!

‘‘ಪ್ರಶಸ್ತಿ ಸ್ವೀಕರಿಸಿದ ಬಳಿಕ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಚಹಾಕೂಟದಲ್ಲಿ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಿದ್ದರು. ಅಲ್ಲಿ ಎಲ್ಲರ ಜತೆ ಕುಶಲೋಪಹರಿ ಮಾತನಾಡುತ್ತಾ ನನ್ನ ಬಳಿಗೆ ಬಂದ ಪ್ರಧಾನಿ ನನ್ನ ಕೈ ಮುಟ್ಟಿದರು. 131 ಕೋಟಿ ಜನರಲ್ಲಿ ಕಡು ಬಡವನಾದ ನಾನು ದೇಶದ ರಾಷ್ಟ್ರಪತಿ, ಪ್ರಧಾನಿ ಮುಂದೆ ನಿಂತ ಸೌಭಾಗ್ಯ ನನ್ನದು. ಮೂರು ದಿನಗಳ ಹಿಂದೆ ಜಿಲ್ಲಾಡಳಿತದ ವತಿಯಿಂದ ನನ್ನ ಮನೆಗೆ ಆರ್‌ಟಿಪಿಸಿಆರ್ ಪರೀಕ್ಷಾಗಾಗಿ ಆರೋಗ್ಯ ಸಿಬ್ಬಂದಿಯನ್ನು ಕಳುಹಿಸಲಾಗಿತ್ತು. ಅವರಿಗೆ ಸೀಯಾಳ ಕತ್ತರಿಸಲು ಹೋದ ಸಂದರ್ಭ ಕತ್ತಿ ನನ್ನ ಎಡಗೈಯ ಹೆಬ್ಬೆರಳಿಗೆ ತಾಗಿತ್ತು. ತಕ್ಷಣ ನನಗೆ ಸಮೀಪದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಬ್ಯಾಂಡೇಜ್ ಹಾಕಲಾಗಿತ್ತು. ಅದೇ ಬ್ಯಾಂಡೇಜ್‌ನೊಂದಿಗೆ ನಾನು ನಿನ್ನೆ ಹೊಸದಿಲ್ಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದೇನೆ’’ ಎಂದು ತಮ್ಮ ಕೈಬೆರಳನ್ನು ತೋರಿಸಿದರು.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಡಳಿತದ ಸನ್ಮಾನ ಸ್ವೀಕರಿಸುವ ಸಂದರ್ಭದಲ್ಲೂ ತಮ್ಮ ಚಪ್ಪಲಿಯನ್ನು ಕಳಚಿಟ್ಟು ಜಿಲ್ಲಾಧಿಕಾಯವರಿಂದ ಪೇಟ, ಹೂಮಾಲೆ, ಶಾಲು ಹಾಕಿಸಿಕೊಂಡರು ನಮ್ಮ ಸರಳ ಹರೇಕಳ ಹಾಜಬ್ಬನವರು.

ಹಾಜಬ್ಬ ತಿಂಡಿ ತಿನ್ನಲು ನಾವು ತಿನ್ನಲಾರೆವು ಎನ್ನಬೇಕಾಯಿತು!

‘‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೇರಿದ್ದ ಜನರನ್ನು ಕಂಡು ನನಗೆ ಯಾವುದೇ ರೀತಿಯ ಸನ್ಮಾನ ಏನೂ ಬೇಡ ಎನ್ನುತ್ತಾ ನಮ್ಮ ಜತೆ ಕಾರು ಏರಿದ್ದರು ಹಾಜಬ್ಬನವರು. ಸರ್ಕ್ಯೂಟ್ ಹೌಸ್‌ನಲ್ಲಿ ಅವರಿಗೆ ಸ್ವಲ್ಪ ವಿಶ್ರಾಂತಿಗೆ ಅವಕಾಶ ನೀಡಿ ಚಹಾ ತಿಂಡಿ ನೀಡಿದಾಗ ನಿರಾಕರಿಸಿದರು. ನಾವು ತಿನ್ನಬೇಕೆಂದರು. ಕೊನೆಗೆ ನಾನು ನೀವು ತಿನ್ನದಿದ್ದರೆ ನಾನು ತಿನ್ನುವುದಿಲ್ಲ ಎಂದಾಗ ಸ್ವಲ್ಪ ತಿಂಡಿ ತಿಂದರು’’ ಎಂದು ತಹಶೀಲ್ದಾರ್ ಗುರುಪ್ರಸಾದ್‌ರವರು ಹಾಜಬ್ಬರ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News