ಭಟ್ಕಳ: ಪದ್ಮಶ್ರೀ ಪುರಸ್ಕೃತ ತುಳಸಿ ಗೌಡರಿಗೆ ಗಡಿಭಾಗದಲ್ಲಿ ಜಿಲ್ಲಾಡಳಿತದಿಂದ ಸ್ವಾಗತ
ಭಟ್ಕಳ: ಪದ್ಮಶ್ರೀ ಪುರಸ್ಕೃತರಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸುತ್ತಿದ್ದ ಅಂಕೋಲದ ಪದ್ಮಶ್ರೀ ತುಳಸಿ ಗೌಡ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಜಿಲ್ಲಾಡಳಿತದ ಪರವಾಗಿ ಭಟ್ಕಳ ಉಪ ವಿಭಾಗದ ಉಪ ವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್. ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಸಮಾಜ ಸೇವೆ ಹಾಗೂ 30 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದಕ್ಕಾಗಿ ಪದ್ಮಶ್ರೀ ಪುರಸ್ಕಾರಕ್ಕೆ ಅಂಕೋಲಾದ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರನ್ನು ಆಯ್ಕೆ ಮಾಡಲಾಗಿತ್ತು. ತುಳಸಿ ಗೌಡ ಅವರು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅತ್ಯಂತ ಸರಳವಾಗಿ ಪದ್ಮಶ್ರೀ ಪುಸ್ಕಾರವನ್ನು ಪಡೆದು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಬಂದು ಜಿಲ್ಲೆಯ ಪ್ರವೇಶ ಮಾಡುವ ಸಂದರ್ಭದಲ್ಲಿ ಅವರನ್ನು ಜಿಲ್ಲಾಡಳಿತ ಸ್ವಾಗತಿಸಿದೆ.
ಈ ಸಂದರ್ಭದಲ್ಲಿ ತಹಶೀಲ್ದಾರ ರವಿಚಂದ್ರ ಎಸ್., ಶಿರೂರು ಟೋಲ್ ಮೆನೇಜರ್ ಜ್ಯೋತಿರಾಮ್ ಬೋಸ್ಲೆ, ಶಿರೂರು ಗ್ರಾ.ಪಂ ಸದಸ್ಯ ಬಾಬು ಮೊಗೇರ್ ಅಳ್ವೆಗದ್ದೆ, ದೀಪಕ್ ಕುಮಾರ್ ಶೆಟ್ಟಿ ಹಾಗೂ ಟೋಲ್ ಸಿಬಂದಿಗಳು ಹಾಜರಿದ್ದರು.