ಪ್ರಮೋದ್ ಬಿಜೆಪಿಗೆ ಬರುವುದಕ್ಕೆ ನಮ್ಮದು ವಿರೋಧ ಇಲ್ಲ: ಸುರೇಶ್ ನಾಯಕ್ ಕುಯಿಲಾಡಿ
Update: 2021-11-15 15:58 GMT
ಉಡುಪಿ, ನ.15: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾದರೆ ನಮ್ಮದು ಯಾವುದೇ ವಿರೋಧ ಇಲ್ಲ. ಆದರೆ ನಮ್ಮ ವರಿಷ್ಠರ ಒಪ್ಪಿಗೆ ಹಾಗೂ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಒಪ್ಪಿಗೆ ಇಲ್ಲದೆ ಏಕಾಏಕಿ ಪಕ್ಷಕ್ಕೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಮೋದ್ ಮಧ್ವರಾಜ್ ಕೊನೆಗೂ ಬಿಜೆಪಿ ನಾಯಕರ ಒಳ್ಳೆಯ ವಿಚಾರ ಗಳನ್ನು ಸ್ವೀಕರಿಸಲು ಆರಂಭಿಸಿದ್ದಾರೆ. ಇದು ಉತ್ತಮ ಬೆಳವಣಿಗೆ. ಅವರು ಬಿಜೆಪಿ ಪಕ್ಷಕ್ಕೆ ಬರುವ ವಿಚಾರದಲ್ಲಿ ನಮಗೆ ಎರಡು ಮೂರು ಬಾರಿ ಕಹಿ ಅನುಭವ ಆಗಿದೆ. ಅವರ ಮಾನಸಿಕತೆ ಏನು ಎಂಬುದು ಅರ್ಥ ಆಗುವುದಿಲ್ಲ. ನಮ್ಮ ಪಕ್ಷ ಸಿದ್ಧಾಂತ ಒಪ್ಪಿಕೊಂಡು ಬರುವುದಾದರೆ ನಾವೆಲ್ಲ ಖಂಡಿತ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.