ದ.ಕ. ಮತ್ತು ಉಡುಪಿ ಜಿಲ್ಲೆ; ವಿಧಾನ ಪರಿಷತ್ ಚುನಾವಣೆ : ಕಣದಲ್ಲಿ ಬಿಜೆಪಿ, ಕಾಂಗ್ರೆಸ್, ಎಸ್ಡಿಪಿಐ ಅಭ್ಯರ್ಥಿಗಳು
ಮಂಗಳೂರು, ನ. 26: ದ.ಕ. ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಚುನಾಯಿತ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಡಿ.10ರಂದು ನಡೆಯುವ ಚುನಾವಣೆಗೆ ಸಲ್ಲಿಕೆಯಾಗಿದ್ದ 7 ಮಂದಿಯ ನಾಮಪತ್ರಗಳ ಪೈಕಿ ನಾಲ್ವರು ಪಕ್ಷೇತರರು ವಾಪಸ್ ಪಡೆದಿದ್ದಾರೆ. ಹಾಗಾಗಿ ಬಿಜೆಪಿ, ಕಾಂಗ್ರೆಸ್, ಎಸ್ಡಿಪಿಐ ಅಭ್ಯರ್ಥಿಗಳು ಮಾತ್ರ ಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ನಡೆಯಲಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಒಟ್ಟು 8 ಮಂದಿ ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ಪಕ್ಷೇತರ ಅಭ್ಯರ್ಥಿ ಸುಪ್ರೀತ್ ಕುಮಾರ್ ಪೂಜಾರಿಯ ನಾಮಪತ್ರ ತಿರಸ್ಕೃತಗೊಂಡಿತ್ತು. ನಾಮಪತ್ರ ವಾಪಸ್ಗೆ ಶುಕ್ರವಾರ ಕೊನೆಯ ದಿನವಾಗಿತ್ತು. ಅದರಂತೆ ಪಕ್ಷೇತರರಾದ ಬೆಳುವಾಯಿಯ ಕೌಶಿಕ್ ಡಿ.ಶೆಟ್ಟಿ, ಬೆಟ್ಟಂಪಾಡಿಯ ನವೀನ್ ಕುಮಾರ್ ರೈ, ಮಂಗಳೂರಿನ ನಿತಿನ್ ಕುಮಾರ್, ಮೂಡುಬಿದಿರೆಯ ಶಶಿಧರ ಎಂ. ನಾಮಪತ್ರ ವಾಪಸ್ ಪಡೆದಿದ್ದಾರೆ.
ಹಾಗಾಗಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ನ ಮಂಜುನಾಥ್ ಭಂಡಾರಿ, ಎಸ್ಡಿಪಿಐಯ ಇಸ್ಮಾಯೀಲ್ ಶಾಫಿ ಕೆ., ಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿವೆ.