ಮಂಗಳೂರು: ಅಲ್ಪಸಂಖ್ಯಾತರ ಮೇಲಿನ ದಾಳಿ ಖಂಡಿಸಿ ಸಿಪಿಎಂ ಪ್ರತಿಭಟನೆ

Update: 2021-12-03 15:26 GMT

ಮಂಗಳೂರು, ಡಿ.3: ಅಲ್ಪಸಂಖ್ಯಾತರ ಮೇಲಿನ ದಾಳಿ ಖಂಡಿಸಿ ಮತ್ತು ಸಂವಿಧಾನಬದ್ದ ರಕ್ಷಣೆ ನೀಡಲು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ದಿಗೆ ಒತ್ತಾಯಿಸಿ ಸಿಪಿಎಂ ಕೇಂದ್ರ ಸಮಿತಿ ಕರೆಯ ಮೇರೆಗೆ ಸಿಪಿಎಂ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ಜಂಟಿ ಆಶ್ರಯದಲ್ಲಿ ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಕೋಮು ದ್ವೇಷ ಹಬ್ಬಿಸುವ ಬಿಜೆಪಿ-ಸಂಘಪರಿವಾರದ ವಿರುದ್ದ ಸಿಪಿಎಂ ಕಾರ್ಯಕರ್ತರು ಘೋಷಣೆಗಳನ್ನು ಮೊಳಗಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲೇ ಕೋಮುದ್ವೇಷವನ್ನು ಹಬ್ಬಿಸಿ ತನ್ನ ನೀಚ ರಾಜಕೀಯವನ್ನು ಪ್ರದರ್ಶಿಸಿದ್ದ ಆರೆಸ್ಸೆಸ್ಸ್‌ಗೆ ದೇಶದ ಜನತೆ ಅಂದೇ ಸರಿಯಾದ ಪಾಠ ಕಲಿಸಿದ್ದರೂ ಬುದ್ಧಿ ಬಂದಿಲ್ಲ. ಕಳೆದ 3 ದಶಕಗಳಿಂದ ಸಂಘಪರಿವಾರವು ವ್ಯವಸ್ಥಿತ ಸಂಘಟನಾ ಜಾಲದಿಂದಾಗಿ ದೇಶದ ಜಾತ್ಯತೀತ ತತ್ವಕ್ಕೆ ತಿಲಾಂಜಲಿಯನ್ನಿಡಲು ಹೊರಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ಸರ್ವಾಧಿಕಾರಿ ಫ್ಯಾಸಿಸ್ಟ್ ನಡೆಯತ್ತ ದೇಶ ಹೋಗುತ್ತಿರುವುದು ಗಂಭೀರ ವಿಚಾರವಾಗಿದೆ ಎಂದರು.

ದೇಶದ ಪ್ರತಿಯೊಂದು ಸಮಸ್ಯೆಗಳಿಗೆ ಅಲ್ಪಸಂಖ್ಯಾತರೇ ಕಾರಣವೆಂಬ ಸುಳ್ಳನ್ನು ಸಾವಿರ ಬಾರಿ ಹೇಳಿ ಕೋಮುಭಾವನೆ ಕೆರಳಿಸಿ ಅಲ್ಪಸಂಖ್ಯಾತರ ಮೇಲೆ ಅವ್ಯಾಹತವಾಗಿ ದಾಳಿ, ದಬ್ಬಾಳಿಕೆ ಹತ್ಯೆಗಳನ್ನು ನಡೆಸಲಾಗುತ್ತಿದೆ. ಇಂತಹ ದುಷ್ಕ್ರತ್ಯಗಳನ್ನು ತಡೆ ಯಲು ದೇಶದ ಜನತೆ ಒಂದಾಗಬೇಕಾಗಿದೆ ಎಂದು ಯಾದವ ಶೆಟ್ಟಿ ಕರೆ ನೀಡಿದರು.

ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಮಾತನಾಡಿ ಮತಾಂತರದ ನೆಪ ಒಡ್ಡಿ, ಕ್ರೈಸ್ತರ ಧಾರ್ಮಿಕ ಆರಾಧನಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ, ಈ ದಾಳಿಗಳಲ್ಲಿ ಹಿಂಸೆಗೆ ಒಳಗಾದ ಬಹುತೇಕ ಜನರು ಆದಿವಾಸಿಗಳು ಮತ್ತು ದಲಿತರಾಗಿದ್ದಾರೆ. ಗೋರಕ್ಷಣೆ, ಲವ್‌ ಜಿಹಾದ್‌ಗಳೆಂಬ ದುಷ್ಕೃತ್ಯದ ಹೆಸರಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲಿನ ಹಿಂಸಾಚಾರ ಪ್ರಕರಣಗಳು ಮುಂದುವರಿಯುತ್ತಿವೆ. ಮಸೀದಿಗಳನ್ನು ಹಾಳುಗೆಡವುತ್ತಿದ್ದಾರೆ, ಬೀದಿ ಬದಿ ವ್ಯಾಪಾರಿಗಳನ್ನು ಬೆದರಿಸಲಾಗುತ್ತಿದೆ, ಶಿಕ್ಷಣ ಸಂಸ್ಥೆಗಳಲ್ಲಿ ಸಹ ಹೊಸ,ಹೊಸ ಸಮಸ್ಯೆಗಳನ್ನು ಬೇಕೆಂದೇ ಸೃಷ್ಟಿಸಲಾಗುತ್ತಿದೆ ಎಂದರು. ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು.

ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್‌ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಎಂ ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ಮುಖಂಡರಾದ ಬಶೀರ್ ಅಹ್ಮದ್, ದಯಾನಂದ ಶೆಟ್ಟಿ, ಬಿ.ಕೆ.ಇಮ್ತಿಯಾಝ್, ನವೀನ್ ಕೊಂಚಾಡಿ, ಅಶೋಕ್ ಶ್ರೀಯಾನ್, ಕೃಷ್ಣ ತಣ್ಣೀರುಬಾವಿ, ಪ್ರಮೀಳಾ ಶಕ್ತಿನಗರ, ಶ್ರೀನಾಥ್ ಕಾಟಿಪಳ್ಳ, ದಿನೇಶ್ ಶೆಟ್ಟಿ, ಭಾರತಿ ಬೋಳಾರ, ಮುಸ್ತಫಾ, ಇಕ್ಬಾಲ್, ಸಾಮಾಜಿಕ ಹೋರಾಟಗಾರ ಜೆರಾಲ್ಡ್ ಟವರ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News