ಕೊಲ್ಲೂರಿನಲ್ಲಿ ವ್ಯವಸ್ಥಿತ ಆರ್ಥಿಕ ಚಟುವಟಿಕೆಗೆ ಯೋಜನೆ ರೂಪಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್

Update: 2021-12-20 15:04 GMT

ಉಡುಪಿ, ಡಿ.20: ಕೊಲ್ಲೂರು ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ಜನರ ಆರ್ಥಿಕ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ರೂಪಿಸು ವುದರೊಂದಿಗೆ, ನಿಗದಿತ ಕಾಲಾವಧಿಯೊಳಗೆ ಅವುಗಳನ್ನು ಅನುಷ್ಠಾನ ಗೊಳಿಸುವಂತೆ ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್‌ಹಾಲ್‌ನಲ್ಲಿ ಸೋಮವಾರ ನಡೆದ, ಕೊಲ್ಲೂರು ದೇವಸ್ಥಾನ ವ್ಯಾಪ್ತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಲ್ಲಿ ಕಿರು ಉದ್ಯಮಗಳ ಸ್ಥಾಪನೆ ಕುರಿತ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೇಂದ್ರ ಸರಕಾರದ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಅಭಿವೃದ್ಧಿ ಮಂತ್ರಾಲಯದ ವತಿಯಿಂದ ದೇಶದ ಪ್ರತಿಷ್ಠಿತ ಆರು ದೇವಸ್ಥಾನ ನಗರಗಳಲ್ಲಿ ಸಣ್ಣ ಉದ್ದಿಮೆಗಳನ್ನು ಉತ್ತೇಜಿಸಲು ಹಾಗೂ ಮೇಲ್ವಿಚಾರಣೆ ನಡೆಸಲು ಮುಂದಾಗಿದ್ದು, ಅವುಗಳಲ್ಲಿ ಹರಿದ್ವಾರ, ಬುದ್ದಗಯಾ, ಪಂಡರಾಪುರ, ಪುರಿ, ವಾರಣಾಸಿ ದೇವಸ್ಥಾನಗಳೂ ಸೇರಿದಂತೆ, ಜಿಲ್ಲೆಯ ಕೊಲ್ಲೂರು ದೇವಸ್ಥಾನವು ಸೇರಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕೊಲ್ಲೂರು ದೇವಸ್ಥಾನಕ್ಕೆ ಪ್ರತಿವರ್ಷ ದೇಶದ ಅನೇಕ ರಾಜ್ಯಗಳಿಂದ ಅಸಂಖ್ಯಾತ ಭಕ್ತಾಧಿಗಳು ಬರುವುದರಿಂದ ಧಾರ್ಮಿಕ ಪ್ರವಾಸಿ ಕೇಂದ್ರವಾಗಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗುವ ಆರ್ಥಿಕ ಚಟುವಟಿಕೆಗಳು ಇಲ್ಲಿ ವ್ಯವಸ್ಥಿತ ರೀತಿಯಲ್ಲಿ ನಡೆಯುವ ಹಾಗೆ ಉತ್ತೇಜಿಸಬೇಕು ಎಂದರು.

ಕೊಲ್ಲೂರು ದೇವಸ್ಥಾನ ಪ್ರದೇಶ ವ್ಯಾಪ್ತಿಯು, ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಅರಣ್ಯ ವಲಯಗಳಲ್ಲಿ ಬರಲಿದ್ದು, ಇಲ್ಲಿನ ಪರಿಸರಕ್ಕೆ ಧಕ್ಕೆಯಾಗದ ರೀತಿಯಲ್ಲಿ, ಪರಿಸರ ಸ್ನೇಹಿಯಾಗಿ ಸ್ಥಳೀಯವಾಗಿ ಸಿಗುವ ಕಚ್ಚಾವಸ್ತುಗಳು ಹಾಗೂ ಕೃಷಿ ಉತ್ಪನ್ನಗಳ ಬಳಕೆಯೊಂದಿಗೆ, ಸಿದ್ಧ ವಸ್ತುಗಳನ್ನು ತಯಾರಿಸಬೇಕು. ಅವುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವಂತಹ ಯೋಜನೆಗಳನ್ನು ರೂಪಿಸು ವುದರೊಂದಿಗೆ, ಜನರಿಗೆ ಪ್ರೋತ್ಸಾಹ ನೀಡಿ ಉತ್ಪನ್ನ ಚಟುವಟಿಕೆಗಳನ್ನು ಪ್ರಾರಂಬಿಸಲು ಉತ್ತೇಜಿಸಬೇಕು ಎಂದರು.

ತರಬೇತಿ ಹಾಗೂ ಅರಿವು ಕಾರ್ಯಕ್ರಮಗಳನ್ನು ಭಾಗೀದಾರರಿಗೆ ನೀಡುವಾಗ ಪ್ರಾಯೋಗಿಕ ಚಟುವಟಿಕೆಗಳೊಂದಿಗೆ ವೈಯಕ್ತಿಕ ಅಥವಾ ಗುಂಪು ಯೋಜನೆಗಳ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಅವರುಗಳು ಬ್ಯಾಂಕ್‌ಗಳಿಂದ ಆರ್ಥಿಕ ಸೌಲಭ್ಯ ಪಡೆಯುವ ಬಗ್ಗೆ ಮಾಹಿತಿಯನ್ನು ಒದಗಿಸುವುದು ಸೂಕ್ತ ಎಂದರು.

ಯೋಜನೆ ರೂಪಿಸುವಾಗ ಸ್ಥಳೀಯ ಗ್ರಾಮ ಪಂಚಾಯತ್‌ಗಳ ಮತ್ತು ಈ ವ್ಯಾಪ್ತಿಯಲ್ಲಿ ಬರುವ ವಿವಿಧ ಇಲಾಖೆಗಳ ಸಹಕಾರ ಪಡೆದು ಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಆಂಚಲ್ ದಮಾ, ಕೊಲ್ಲೂರು ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳನ್ನು ಕೇಂದ್ರವಾಗಿರಿಸಿಕೊಂಡು ಆರ್ಥಿಕ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಕಿರು ಉದ್ಯಮ ಸ್ಥಾಪನೆ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗದೀಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸೆಂಟ್ರಲ್ ಇಂಡಸ್ಟ್ರಿಯಲ್ ಎಕ್ಸ್‌ಟೆನ್ಷನ್‌ನ ಅಧಿಕಾರಿ ಶ್ರೀಪರ್ಣಾ ಭರೂಹಾ, ನರೇಂದ್ರ ಗಿರಿಡಿ, ವೈಶಾಲಿ ಅಪರಾಜಿತ್ ಮತ್ತಿತರರು ವರ್ಚುವಲ್ ಸಭೆಯಲ್ಲಿ ಭಾಗವಹಿಸಿ, ಯೋಜನೆಯ ಬಗ್ಗೆ ಮಾಹಿತಿಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News