ವಿದ್ಯುತ್ ಆಘಾತ: ಸೆಂಟ್ರಿಂಗ್ ಕಾರ್ಮಿಕ ಮೃತ್ಯು
ಹೆಬ್ರಿ, ಜ.9: ಕಬ್ಬಿಣದ ರಾಡ್ ಟ್ರಾನ್ಸ್ಫಾರಂಗೆ ತಾಗಿ ವಿದ್ಯುತ್ ಆಘಾತಕ್ಕೆ ಒಳಗಾದ ಪರಿಣಾಮ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ನಾಡ್ಪಾಲು ಗ್ರಾಮದ ಸೊಮೇಶ್ವರ ಎಂಬಲ್ಲಿ ಜ.8ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಎಣ್ಣೆಹೊಳೆಯ ರವಿ ಪೂಜಾರಿ(38) ಎಂದು ಗುರುತಿಸಲಾಗಿದೆ. ಇವರು ಇತರರೊಂದಿಗೆ ದೈವದ ಗುಡಿಯ ಸೆಂಟ್ರಿಂಗ್ ಕೆಲಸವನ್ನು ಮಾಡುತ್ತಿದ್ದು, ಈ ವೇಳೆ ರವಿ ಪೂಜಾರಿ ಕಬ್ಬಿಣದ ಗುಜಿಯನ್ನು ಕೈಯಿಂದ ಹಿಡಿದು ರಭಸವಾಗಿ ಎಳೆದಾಗ ಅದು ನಿಯಂತ್ರಣ ತಪ್ಪಿಸಮೀಪದಲ್ಲಿದ್ದ ವಿದ್ಯುತ್ ಟ್ರಾನ್ಸ್ಫಾರಂಗೆ ತಾಗಿತ್ತೆನ್ನಲಾಗಿದೆ. ಇದರ ಪರಿಣಾಮ ಅದರಲ್ಲಿದ್ದ ವಿದ್ಯುತ್ ಕಬ್ಬಿಣದ ಗುಜಿಯ ಮೂಲಕ ರವಿ ಪೂಜಾರಿ ಮೈ ಮೇಲೆ ಹರಿಯಿತು. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡು ಕುಸಿದು ಬಿದ್ದ ಅವರು, ಹೆಬ್ರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಈ ಘಟನೆಯು ದೈವದ ಗುಡಿಯ ಕೆಲಸ ಮಾಡಿಸುವ ವಿ.ಆರ್.ಪೈ ಮತ್ತು ಸೆಂಟ್ರಿಂಗ್ ಕೆಲಸ ಮಾಡಿಸುವ ಮಹೇಶ್ ಪೂಜಾರಿಯವರು ಕೆಲಸಗಾರರ ಸುರಕ್ಷತೆಯ ಬಗ್ಗೆ ಯಾವುದೇ ಮುಂಜಾಗತ್ರಾ ಕ್ರಮವನ್ನು ತೆಗೆದುಕೊಳ್ಳದೆ ತೀರಾ ನಿರ್ಲಕ್ಷತನ ತೋರಿರುವುದರಿಂದ ನಡೆದಿದೆ ಎಂದು ದೂರಲಾಗಿದೆ.
ಅದರಂತೆ ಅವರಿಬ್ಬರ ವಿರುದ್ಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.