ಹಿಜಾಬ್ ವಿವಾದ ಬಿಜೆಪಿ ಸರಕಾರಕ್ಕೆ ಲಾಭ: ಸಿಪಿಐಎಂ
ಉಡುಪಿ, ಫೆ.3: ಉಡುಪಿ ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಆರಂಭ ವಾದ ಸ್ಕಾರ್ಫ್ ಧರಿಸುವ ವಿವಾದ ಜಿಲ್ಲೆಯ ಬೇರೆ ಬೇರೆ ಕಾಲೇಜುಗಳಿಗೆ ವಿಸ್ತಾರವಾಗುತ್ತಿರುವುದರಿಂದ ಬಿಜೆಪಿ ಸರಕಾರಕ್ಕೆ, ಪ್ರವಾಹದಲ್ಲಿ ತೇಲುತ್ತಿರುವವ ನಿಗೆ ದಿಣ್ಣೆಯೊಂದು ಸಿಕ್ಕಂತಾಗಿದೆ’ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಟೀಕಿಸಿದೆ.
ಬೆಲೆ ಏರಿಕೆ, ನಿರುದ್ಯೋಗ, ಆದಾಯ ಕುಸಿತ, ಶಾಲಾ ಶುಲ್ಕ ಹೆಚ್ಚಳ ಇತ್ಯಾದಿಗಳಿಂದ ಜನರ ಜೀವನ ದುಸ್ತರವಾಗಿದೆ. ಕೋವಿಡ್ ಸನ್ನಿವೇಶದಲ್ಲಿಯೂ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳ ನೀತಿಗಳಿಂದ ಜನರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂಬುದು ದಿನ ಕಳೆದಂತೆ ಅರ್ಥವಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿಯೂ ಬಿಜೆಪಿಯ ಪ್ರಭಾವ ಕುಂಠಿತವಾಗುತ್ತಿದೆ. ಆದರೆ ಹಿಜಾಬ್ ವಿವಾದವು ಬಿಜೆಪಿಯ ಜನಪ್ರತಿನಿಧಿಗಳಿಗೆ ಮರುಭೂಮಿಯಲ್ಲಿ ಸಿಕ್ಕ ನೀರಿನಂತಾ ಗಿದೆ ಎಂದು ಸಿಪಿಎಂ ತಿಳಿಸಿದೆ.
ಕುಂದಾಪುರದ ಎರಡೂ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದಿ ನಿಂದಲೂ ಸ್ಕಾರ್ಫ್ ಧರಿಸುತ್ತಿದ್ದರು. ಆದರೆ ಬಿಜೆಪಿಗೆ ಸೇರಿದ ಸಂಘಟನೆಗಳು ವಿದ್ಯಾರ್ಥಿಗಳನ್ನು ಧರ್ಮದ ಆಧಾರದಲ್ಲಿ ಪ್ರಚೋದಿಸುತ್ತಿದ್ದಾರೆ. ಶೈಕ್ಷಣಿಕ ವರ್ಷ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ವಾರ್ಷಿಕ ಪರೀಕ್ಷೆಯನ್ನು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಎದುರಿಸಬೇಕಾಗಿದೆ. ಆದ್ದರಿಂದ ವಿದ್ಯಾಲಯಗಳಲ್ಲಿ ಶಾಂತಿಯ ವಾತಾವರಣ ಕಾಪಾಡಬೇಕು. ಎಲ್ಲಾ ಪೋಷಕರು ಮತ್ತು ನಾಗರಿಕರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.