ಕಾರ್ಕಳ : ಮೇ 9ರಂದು ಯಕ್ಷ ರಂಗಾಯಣ ಕಾರ್ಯ ಆರಂಭೋತ್ಸವ
ಕಾರ್ಕಳ : ಕರ್ನಾಟಕ ಸರಕಾರ ಹೊಸದಾಗಿ ಕಾರ್ಕಳದಲ್ಲಿ ಸ್ಥಾಪಿಸಿದ ಯಕ್ಷ ರಂಗಾಯಣ ಇದರ ಚಟುವಟಿಕೆಯ ಆರಂಭೋತ್ಸವವು ಮೇ 9 ರಂದು ಪೂ. 9 ಗಂಟೆಗೆ ಕಾರ್ಕಳ ಕೋಟಿ ಚೆನ್ನಯ ಥೀಂ ಪಾರ್ಕ್ ಆವರಣದಲ್ಲಿ ಆರಂಭಗೊಳ್ಳಲಿದೆ.
ಯಕ್ಷ ರಂಗಾಯಣದ ಕಾರ್ಯಾಲಯವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ.ಸುನಿಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಬಳಿಕ ಯಕ್ಷರಂಗಾಯಣದ ಪ್ರಥಮ ಕಾರ್ಯಕ್ರಮವಾಗಿ "ಚಿಣ್ಣರಮೇಳ " ಮಕ್ಕಳ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಲಿದೆ.
ಸಚಿವರಾದ ವಿ.ಸುನಿಲ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವರವರು ಚಿಣ್ಣರಮೇಳವನ್ನು ಉದ್ಘಾಟಿಸಲಿದ್ದಾರೆ.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಣಿರಾಜ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷರಾದ ಸುಮಾ ಕೇಶವ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ| ಎಂ.ಎಲ್.ಸಾಮಗ, ಕಾರ್ಕಳ ವರ್ಧಮಾನ ವಿದ್ಯಾ ಸಂಸ್ಥೆಯ ಸಂಚಾಲಕರಾದ ಶಶಿಕಲಾ ಕೆ.ಎಸ್ ಮತ್ತು ಪ್ರಸಿದ್ಧ ಜಾದೂಗಾರ ಕುದ್ರೋಳಿ ಗಣೇಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸುಮಾರು 200 ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಯಕ್ಷ ರಂಗಾಯಣ ನಿರ್ದೇಶಕರಾದ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.