ಕೇಂದ್ರ ಸಚಿವರ ಹೇಳಿಕೆಗೆ ಎಸ್ಡಿಪಿಐ ಖಂಡನೆ
ಮಂಗಳೂರು,ಮೇ 8: ದ.ಕ.ಜಿಲ್ಲೆಯನ್ನು ಪಾಕಿಸ್ತಾನಕ್ಕೆ ಹೋಲಿಸಿ ಸಂಬಂಧ ಕಲ್ಪಿಸಿ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಎಸ್ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ದೇಶದ ಭಾಗವೊಂದರ ಜನರನ್ನು ಪಾಕಿಸ್ತಾನದ ಭಯೋತ್ಪಾದಕರಂತೆ ಚಿತ್ರೀಕರಿಸಿದ ಸಚಿವರ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಬುದ್ದಿವಂತರ ಜಿಲ್ಲೆ ಎಂದೇ ಖ್ಯಾತಿ ಹೊಂದಿದ ದ.ಕ.ಜಿಲ್ಲೆಯು ಶಾಂತಿ ಸೌಹಾರ್ದತೆಗೂ ಹೆಸರುವಾಸಿಯಾಗಿದೆ. ಸಂಘ ಪರಿವಾರ ಮತ್ತು ಬಿಜೆಪಿಯು ಇಲ್ಲಿನ ಜನರಲ್ಲಿ ಕೋಮು ವಿಷಬೀಜ ಬಿತ್ತಿ ಕೋಮು ಪ್ರಯೋಗ ಶಾಲೆಯನ್ನಾಗಿಸಿದರು. ಗೋವಾ ಬಾಂಬ್ ಸ್ಪೋಟದ ರೂವಾರಿ ಸಂಘ ಪರಿವಾರದ ಕಾರ್ಯಕರ್ತ ಕಡಬ ಮೂಲದ ಜಯಪ್ರಕಾಶ್, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸಂಚುಗಾರರಂತಹ ಕ್ರಿಮಿನಲ್ಗಳನ್ನು ಸಂಘಪರಿವಾರ ಹುಟ್ಟುಹಾಕಿರುವುದು ಜಿಲ್ಲೆಗೆ ಕಪ್ಪುಚುಕ್ಕೆಯನ್ನು ತಂದಿದೆ. ಇಂತಹ ಸಂಘಟನೆಗಳನ್ನು ಹತ್ತಿಕ್ಕುವ ಬದಲು ಮುಸ್ಲಿಮರ ವಿರುದ್ಧವಾಗಿ ರಾಜಕೀಯ ಪ್ರೇರಿತ ಹೇಳಿಕೆ ಕೊಡುವುದರ ಹಿಂದೆ ಮುಸ್ಲಿಂ ದ್ವೇಷವೇ ಹೊರತು ಜಿಲ್ಲೆಯ ಬಗೆಗಿನ ಒಲವು ಅಲ್ಲ ಎಂದು ಅಬೂಬಕರ್ ಕುಳಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.