ಬೇಕಲ: 6 ಲಕ್ಷ ರೂ. ಕಳ್ಳತನ, ಚಿತ್ರದುರ್ಗದ ದಂಪತಿ ಬಂಧನ

Update: 2022-07-10 05:11 GMT

ಕಾಸರಗೋಡು : ಬೇಕಲ ರೆಸಾರ್ಟ್ ನಿಂದ ಸುಮಾರು ಆರು ಲಕ್ಷ ರೂ . ಕಳವುಗೈದ ಪ್ರಕರಣಕ್ಕೆ  ಸಂಬಂಧಪಟ್ಟಂತೆ  ರೆಸಾರ್ಟ್ ನ ಸಿಬಂದಿಗಳಾಗಿದ್ದ ಚಿತ್ರದುರ್ಗ ನಿವಾಸಿಗಳಾದ ದಂಪತಿಯನ್ನು ಬೇಕಲ ಠಾಣಾ ಪೊಲೀಸರು  ಬಂಧಿಸಿದ್ದಾರೆ.

ಚಿತ್ರದುರ್ಗದ ಪ್ರದೀಪ್ ( 25) ಮತ್ತು ಪತ್ನಿ ನಿವೇದಿತಾ ( 25) ಬಂಧಿತರು.

ಬೇಕಲ  ಕಾಫಿಲ್ ಬೀಚ್ ರಸ್ತೆಯ  ಬೇಕಲ ಹೋಂ ಸ್ಟೇ  ರೆಸಾರ್ಟ್ ನಿಂದ ನಗದು ಕಳವುಗೈದಿದ್ದರು.  ರೆಸಾರ್ಟ್ ನ ರಿಶಿಪ್ಸನ್ ಕೊಠಡಿಯ ಕಪಾಟಿನಲ್ಲಿರಿಸಲಾಗಿದ್ದ   ನಗದು ಮೊತ್ತ  ದಿನಗಳ ಹಿಂದೆ  ಕಳವಾಗಿತ್ತು. ಈ ಬಗ್ಗೆ ಬೇಕಲ ಠಾಣಾ ಪೊಲೀಸರಿಗೆ ರೆಸಾರ್ಟ್ ಮಾಲಕ  ಕೆ . ಕೆ ಪ್ರದೀಪ್ ದೂರು ನೀಡಿದ್ದರು. ಸಿಬಂದಿಗಳೇ ಈ ಕಳವು ನಡೆಸಿರಬಹುದು ಎಂದು   ಸಂಶಯಿಸಲಾಗಿತ್ತು . ಈ ನಡುವೆ   ಈ ಇಬ್ಬರು  ರೆಸಾರ್ಟ್ ನಿಂದ ತಲೆ ಮರೆಸಿಕೊಂಡಿದ್ದರು .   ಬೇಕಲ ಠಾಣಾ ಸಬ್  ಇನ್ಸ್ ಪೆಕ್ಟರ್  ಎಂ . ರಜನೀಶ್ ಹಾಗೂ ಎ. ಎಸ್ . ರಾಜನ್ ನೇತೃತ್ವದಲ್ಲಿ ನಡೆಸಿದ ತನಿಖೆಯಿಂದ ಚಿತ್ರದುರ್ಗದಿಂದ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳವು ಬಳಿಕ ಊರಿಗೆ ಪರಾರಿಯಾಗಿದ್ದ  ಇವರನ್ನು ಮೊಬೈಲ್ ಲೊಕೇಶನ್  ಮೂಲಕ ಪತ್ತೆ ಹಚ್ಚಿ ಬಂಧಿಸಲಾಯಿತು.

ಕಳವುಗೈದ ಆರು ಲಕ್ಷ ರೂ . ಗಳಲ್ಲಿ 2.10 ಲಕ್ಷ ರೂ . ನಿಂದ  ಒಂದು ಹೊಸ ಬೈಕ್ ಹಾಗೂ ಎರಡು ಮೊಬೈಲ್ ಫೋನ್ ನ್ನು ಖರೀದಿಸಿದ್ದರು. ತನಿಖಾ ತಂಡ  ವಶಪಡಿಸಿಕೊಂಡ  ಬೈಕ್ ನ್ನು  ಚಿತ್ರದುರ್ಗ ಪೊಲೀಸ್ ಠಾಣೆ  ಯ ಕಸ್ಟಡಿ ಯಲ್ಲಿರಿಸಲಾಗಿದೆ.

 ಇಬ್ಬರನ್ನು  ಬೇಕಲ ಪೊಲೀಸರು  ವಿಚಾರಣೆ ನಡೆಸುತ್ತಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News