ನೂರಕ್ಕೆ ನೂರರಷ್ಟು ಯತ್ನಾಳ್ ಉಚ್ಚಾಟನೆ ರದ್ದಾಗುತ್ತದೆ‌ : ರಮೇಶ್ ಜಾರಕಿಹೊಳಿ

Update: 2025-03-27 19:26 IST
ನೂರಕ್ಕೆ ನೂರರಷ್ಟು ಯತ್ನಾಳ್ ಉಚ್ಚಾಟನೆ ರದ್ದಾಗುತ್ತದೆ‌ : ರಮೇಶ್ ಜಾರಕಿಹೊಳಿ
  • whatsapp icon

ಬೆಳಗಾವಿ : ‌ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಚಾಟನೆ ನೂರಕ್ಕೆ ನೂರರಷ್ಟು ರದ್ದಾಗುತ್ತದೆ. ಯತ್ನಾಳ್​ ಬಿಜೆಪಿಯಲ್ಲೇ ಗಟ್ಟಿಯಾಗಿ ಮುಂದುವರಿಯುತ್ತಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸನಗೌಡ ಪಾಟೀಲ್‌ ಯತ್ನಾಳ್​ ‌ಬಿಜೆಪಿ ಪಕ್ಷ ಮತ್ತು ಸಮುದಾಯದ ದೊಡ್ಡ ನಾಯಕ. ಇವತ್ತಿಗೂ ಅವರು ಯತ್ನಾಳ್​ ನಾಯಕ. ಅದೇ ರೀತಿ ಪಕ್ಷದ‌ ನಿರ್ಣಯ ಪ್ರಶ್ನಿಸುವ ದೊಡ್ಡ ಮನುಷ್ಯನೂ ನಾನಲ್ಲ.‌ ಅಲ್ಲದೆ, ಯತ್ನಾಳ್​ ಉಚ್ಚಾಟನೆ ವಿಚಾರ ಒಂದು ತಿಂಗಳು‌ ಮೊದಲೇ ನನಗೆ ಗೊತ್ತಿತ್ತು. ಉಚ್ಚಾಟನೆ ತಡೆಹಿಡಿಯುತ್ತಾರೆ ಅಂದುಕೊಂಡಿದ್ದೆವು ಎಂದು ಹೇಳಿದರು.

ಯತ್ನಾಳ್​ ಅವರಿಂದ ಕೇಂದ್ರದ ಶಿಸ್ತುಸಮಿತಿಗೆ ಪತ್ರ ಬರೆಸಿ, ಪುನರ್‌ ಪರಿಶೀಲನೆ ‌ಮಾಡುವಂತೆ ಬಿಜೆಪಿ ವರಿಷ್ಠರ ಬಳಿ ಮನವಿ ಮಾಡಿಕೊಳ್ಳುತ್ತೇವೆ. ನಮ್ಮಿಂದಲೂ ತಪ್ಪು ಆಗಿರಬಹುದು. ನಮ್ಮಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಂಡು ಪಕ್ಷದಲ್ಲಿ ಮುಂದುವರಿಯುತ್ತೇವೆ. ಈ ರೀತಿ ಹೈಕಮಾಂಡ್ ಯಾಕೆ ನಿರ್ಣಯ ತೆಗೆದುಕೊಂಡಿದೆ ಎಂಬ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಸಭೆ ಸೇರುತ್ತೇವೆ. ಯತ್ನಾಳ್​​ ಕೂಡ ‌ಬೆಂಗಳೂರಿಗೆ ಬರುತ್ತಾರೆ. ನಾವೆಲ್ಲರೂ ಸೇರಿ ಈ ಬಗ್ಗೆ ಚರ್ಚಿಸುತ್ತೇವೆ ಎಂದು ಮಾಹಿತಿ ನೀಡಿದರು.

ನಮ್ಮ ಪಕ್ಷದ ನಾಯಕರು ಯತ್ನಾಳ್‌ ಅವರ‌ನ್ನು ಬಳಸಿಕೊಳ್ಳಬೇಕಿತ್ತು. ಯಾರ ಕಡೆಯಿಂದ ತಪ್ಪಾಗಿದೆ ಎಂಬುದನ್ನು ನೋಡಿಕೊಂಡು, ತಿಳಿಹೇಳುತ್ತೇವೆ. ಆದಷ್ಟು ಬೇಗನೇ ಉಚ್ಚಾಟನೆ ಆದೇಶ ಹಿಂಪಡೆಯುತ್ತಾರೆ ಎಂದು ನೂರಕ್ಕೆ ನೂರು ವಿಶ್ವಾಸವಿದೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News