ರಾಜ್ಯ, ಕೇಂದ್ರದ ನಾಯಕರಿಂದ ಕ್ರಿಯಾಶೀಲ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜೂ.24: ನಳಿನ್ ಕುಮಾರ್ ಕಟೀಲ್ ಒಂದು ಅವಧಿಗೆ ಮೀರಿ ರಾಜ್ಯಾಧ್ಯಕ್ಷ ಹುದ್ದೆಯನ್ನು ನಿರ್ವಹಿಸಿದ್ದಾರೆ. ಹಿರಿಯರಿಗೆ ಅವಧಿ ಮುಗಿದಿದೆ ಎಂದು ತಿಳಿಸುವ ಸಂಪ್ರದಾಯ ಇದೆ. ಬಿಜೆಪಿ ಅಧ್ಯಕ್ಷ ಆಗಬೇಕು ಎಂದು ಯಾರಾದರು ಆಸೆ ಪಟ್ಟರೆ ತಪ್ಪಲ್ಲ. ಹಿರಿಯ ಮುಖಂಡರು ಹೈಕಮಾಂಡ್ ಅಪೇಕ್ಷಿತರು ಯಾರೆಂದು ಗಮನಿಸುತ್ತದೆ. ರಾಜ್ಯ, ಕೇಂದ್ರದ ನಾಯಕರು ಒಟ್ಟಾಗಿ ಒಂದಾಗಿ ಕ್ರಿಯಾಶೀಲ ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ರಾಜ್ಯದ ನೂತನ ಶಾಸಕರಿಗೆ ತರಬೇತಿ ಶಿಬಿರದಿಂದ ರವಿಶಂಕರ್ ಗುರೂಜಿ- ಕರ್ಜಗಿ ಯನ್ನು ಕೈ ಬಿಟ್ಟಿರುವುದು ಖಂಡನೀಯ. ಈ ಇಬ್ಬರ ಹೆಸರನ್ನ ಪುನರ್ ಪರಿಶೀಲನೆ ಮಾಡಬೇಕು. ಎಡಪಂಥೀಯರು ಹೇಳಿದರು ಎಂದು ಪಠ್ಯ ಪುಸ್ತಕ ಪರಿಷ್ಕರಣೆ, ಗೋ ಹತ್ಯೆ ನಿಷೇಧ, ಮತಾಂತರ ಕಾಯ್ದೆ ವಾಪಾಸ್ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.
10 ಕೆಜಿ ಅಕ್ಕಿ ಕೊಡುವ ವಿಚಾರದಲ್ಲಿ ರಾಜ್ಯ ಸರಕಾರದಿಂದ ಲೋಪವಾಗಿದೆ. ಕೇಂದ್ರ ಸರಕಾರದ ಮೇಲೆ ಸುಳ್ಳು ಆಪಾದನೆ ಹೊರಿಸುವುದು ಖಂಡನೀಯ. ದೇಶದ 80 ಕೋಟಿ ಜನಕ್ಕೆ ಕೇಂದ್ರ ಉಚಿತ ಅಕ್ಕಿ ವಿತರಿಸುತ್ತಿದೆ. ಕರ್ನಾಟಕದ 4 ಕೋಟಿ ಜನಕ್ಕೆ ಐದು ಕೆಜಿ ಉಚಿತ ಅಕ್ಕಿ ಕೊಡುತ್ತಿದೆ. 5 ಕೆಜಿಯ ಸಂಪೂರ್ಣ ವೆಚ್ಚ ಕೇಂದ್ರ ಸರಕಾರ ಭರಿಸುತ್ತದೆ. ಕನ್ನಡಿಗರು ಪಡೆಯುತ್ತಿರುವ ಅಕ್ಕಿ ನೇರವಾಗಿ ಮೋದಿ ಸರಕಾರ ನೀಡುತ್ತಿರುವುದು. ರಾಜ್ಯ ಸರಕಾರ ನೀಡುವ 10 ಕೆ.ಜಿ ಅಕ್ಕಿಯನ್ನು ಸದನ ಆರಂಭವಾಗುವ ಮೊದಲು ಕೊಡಬೇಕು ಎಂದು ಅವರು ಹೇಳಿದರು.