ಭಟ್ಕಳ: ಉದ್ಯಮಿ ಮನೆಗೆ ಕನ್ನ; ನಗ-ನಗದು ಕಳವು

Update: 2023-06-23 18:19 GMT

ಭಟ್ಕಳ: ಭಟ್ಕಳದ ಖ್ಯಾತ ಉದ್ಯಮಿ ಹಾಗೂ ರಿಬ್ಕೋ ಮಾಲಕ ಅಬ್ದುಲ್ ರಹಮಾನ್ ಶಾಬಂದ್ರಿ ಅಲಿಯಾಸ್ ಸಾಯಿಬ್ ಸಾಹಿಬ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ರೂ.7ಲಕ್ಷ ನಗದು,1800 ರಿಯಾಲ್, 3300 ದಿನಾರ್, 4409 ಡಾಲರ್, ಸುಮಾರು 110 ಗ್ರಾಂ ಚಿನ್ನಾಭರಣ ಹಾಗೂ ಎರಡು ವಾಚ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಲೂಕಿನ ವೆಂಕಟಾಪುರ ಪ್ರದೇಶದಲ್ಲಿರುವ ಮನೆಯಲ್ಲಿ ಯಾರೂ ಇಲ್ಲದ್ದನ್ನೂ ಖಚಿತಪಡಿಸಿಕೊಂಡಿರುವ ಕಳ್ಳರು, ಮನೆಯ ಬೀಗ ಮುರಿದು ಒಳ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಹಣ ಮತ್ತು ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.

ಮನೆಯ ಮಾಲಿಕರು ಜೂನ್ 21ರಂದು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು ಎನ್ನಲಾಗಿದ್ದು, ಶುಕ್ರವಾರ ಬೆಳಗ್ಗೆ ಅವರ ಕಾರು ಚಾಲಕ ಮನೆಗೆ ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಮಾಹಿತಿ ತಿಳಿದ ತಕ್ಷಣ ವೃತ್ತ ನಿರೀಕ್ಷಕ ಚಂದನ್ ಗೋಪಾಲ್, ಗ್ರಾಮೀಣ ಠಾಣೆಯ ಪಿಎಸ್ ಐ ಶ್ರೀಧರ್ ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ವಿವರ ಪಡೆದು ತನಿಖೆ ಆರಂಭಿಸಿದ್ದಾರೆ.

ವೆಂಕಟಾಪುರ ಪ್ರದೇಶದಲ್ಲಿರುವ ಈ ಮನೆಯ ಸುತ್ತಮುತ್ತ ಹೆಚ್ಚಿನ ಜನಸಂದಣಿ ಇಲ್ಲ, ಸುತ್ತಲೂ ಅಂತಹ ಕಟ್ಟಡಗಳಾಗಲಿ, ಸಿಸಿಟಿವಿ ಕ್ಯಾಮರಾಗಳಾಗಲಿ ಇಲ್ಲ. ಇಡೀ ಕಾಂಪೌಂಡ್ ಗೋಡೆಯ ಮೇಲೆ ಗಾಜು ಒಡೆದಿದ್ದು, ಕಾಂಪೌಂಡ್ ಒಳಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ, ಆದರೆ ವಾರದ ಹಿಂದೆ ಟಿಪ್ಪರ್ ಲಾರಿಯಿಂದ ಪ್ರವೇಶ ದ್ವಾರಕ್ಕೆ ಹಾನಿಯಾಗಿದೆ ಇದರಿಂದಾಗಿ ಗೇಟ್ ತೆರೆದುಕೊಂಡಿದೆ. ಇದನ್ನು ಅರಿತ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಮನೆಯ ಬಾಗಿಲಿನ ಹಿಡಿಕೆ ಹಾಗೂ ಬೀಗ ಮುರಿದು ಒಳ ನುಗ್ಗಿದ ಕಳ್ಳರು, ಒಳಬಾಗಿಲುಗಳನ್ನೂ ಮುರಿದು ಸುಮಾರು ಏಳು ಲಕ್ಷ ರೂಪಾಯಿ, 1800 ರಿಯಾಲ್, 3300 ದಿನಾರ್, 4409 ಡಾಲರ್, ಸುಮಾರು 110 ಗ್ರಾಂ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿನ್ನಾಭರಣ ಹಾಗೂ ಎರಡು ವಾಚ್‌ಗಳನ್ನು ದೋಚಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರವಾರದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದೊಂದಿಗೆ ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News