ಮೂಲಭೂತ ಸೌಕರ್ಯ ಒದಗಿಸುವುದಷ್ಟೇ ಅಭಿವೃದ್ಧಿಯಲ್ಲ: ಎಸ್.ಜನಾರ್ದನ್ ಮರವಂತೆ

Update: 2023-06-26 13:46 GMT

ಉಪ್ಪುಂದ: ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವುದೇ ಅಭಿವೃದ್ಧಿ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಶಿಕ್ಷಣ, ಆರೋಗ್ಯ ಮತ್ತು ತಲಾ ಆದಾಯದ ಅಂಶಗಳನ್ನು ಒಟ್ಟು ಸೇರಿಸಿ ಮಾಡಲಾಗುವ ಅಪೇಕ್ಷಿತ ಮಾರ್ಪಾಡುಗಳು ನೈಜ ಅಭಿವೃದ್ಧಿ ಎನಿಸಿಕೊಳ್ಳುತ್ತದೆ ಎಂದು ರಾಜ್ಯ ಪಂಚಾಯತ್‌ ರಾಜ್‌ನ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ದನ ಮರವಂತೆ ಹೇಳಿದ್ದಾರೆ.

ಉಪ್ಪುಂದದ ದೇವಕಿ ಬಿ.ಆರ್. ಸಭಾಂಗಣದಲ್ಲಿ ಕುಂದಾಪ್ರ ಡಾಟ್ ಕಾಂ ವತಿಯಿಂದ ಆಯೋಜಿಸಲಾದ‘ಮಿಷನ್ ಬೈಂದೂರು-೨೦೩೩’ ಕಾರ್ಯಕ್ರಮ ಉದ್ಘಾಟಿಸಿ, ಅಭಿವೃದ್ಧಿಯ ಪರಿಕಲ್ಪನೆ ಎಂಬ ವಿಷಯದ ಬಗ್ಗೆ ಅವರು ವಿಚಾರ ಮಂಡನೆ ಮಾಡಿ ಮಾತನಾಡುತಿದ್ದರು.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಜಾಗತಿಕವಾಗಿ ಮಾತ್ರವಲ್ಲದೇ ಪ್ರತಿ ದೇಶದ ಮಾನವ ಅಭಿವೃದ್ಧಿಯ ಸೂಚ್ಯಂಕವನ್ನು ಜನರ ಮುಂದಿಡುತ್ತದೆ. ಸದ್ಯ ಜಾಗತಿಕವಾಗಿ ಮಾನವ ಅಭಿವೃದ್ಧಿಯ ಅಂತಿಮ ಹಂತ ‘ಸುಖೀ ಜೀವನ’ ಎಂದು ಕಂಡುಕೊಳ್ಳಲಾಗಿದೆ. ಇದರಲ್ಲಿ ಶಿಕ್ಷಣ, ಆರೋಗ್ಯ, ತಲಾ ಆದಾಯ ಹೆಚ್ಚಳ ಸೇರಿದಂತೆ ಹಲವು ಅಂಶಗಳೂ ಸೇರಿಕೊಂಡಿವೆ. ಪ್ರಸ್ತುತ ಹಲವು ದೇಶಗಳಲ್ಲಿ ಹ್ಯಾಪಿನೆಸ್ ಇಂಡೆಕ್ಸ್ ಅಳೆಯಲಾಗುತ್ತದೆ ಎಂದರು.

ದೇಶದಲ್ಲಿ ಮಾನವ ಅಭಿವೃದ್ಧಿ ಸೂಕ್ಯಂಕವನ್ನು ಅಳತೆ ಮಾಡಿದ ಎರಡನೇ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಜಿಲ್ಲಾ ಮಟ್ಟದ ಅಭಿವೃದ್ಧಿ ಸೂಕ್ಯಂಕ ಸಿದ್ದಪಡಿಸಿದ್ದ ಉಡುಪಿ ಜಿಲ್ಲೆಗೆ ಪ್ರಥಮ ಬಹುಮಾನ ಬಂದಿತ್ತು. ಉಡುಪಿ ಜಿಲ್ಲೆಯಲ್ಲಿ ಗ್ರಾಮಪಂಚಾಯತ್ ಮಟ್ಟದಲ್ಲಿ ಮಾನವ ಅಭಿವೃದ್ಧಿಯ ಅಧ್ಯಯನ ನಡೆದಿದ್ದವು. ಇಂತಹ ಅಧ್ಯಯನವನ್ನು ಆಧರಿಸಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು ಬಹುಮುಖ್ಯ ಎಂದರು.

ಅಭಿವೃದ್ಧಿಯ ಕನಸು ಹಾಗೂ ಸವಾಲುಗಳು ಎಂಬ ವಿಷಯವಾಗಿ ಕೇಂದ್ರ ರೈಲ್ವೆ ಬೋರ್ಡ್‌ನ ಮಾಜಿ ಸದಸ್ಯ ಕೆ.ವೆಂಕಟೇಶ ಕಿಣಿ ಅವರು ಮಾತನಾಡಿ, ಬೈಂದೂರು ಕ್ಷೇತ್ರವೆಂಬುದು ದೈವದತ್ತ ಕೊಡುಗೆ.ಧಾರ್ಮಿಕ, ಬೀಚ್ ಹಾಗೂ ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಪ್ರದೇಶವಿದು. ಬೈಂದೂರಿನ ಭೌಗೋಳಿಕ ಹಿನ್ನೆಲೆ ಗಮನಿಸಿದರೆ, ಇಲ್ಲಿ ಪ್ರವಾಸೋದ್ಯದಿಂದ ಮಾತ್ರ ಊರಿನ ಅಭಿವೃದ್ಧಿ ಸಾಧ್ಯವಿದೆ. ಆದರೆ ಪರಿಸರವನ್ನು ಹಾಳು ಮಾಡಿ, ಜನರನ್ನು ಒಕ್ಕಲೆಬ್ಬಿಸಿ ಯಾವ ಕೆಲಸವನ್ನೂ ಮಾಡಬಾರದು ಎಂದರು.

ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಮಿಷನ್ ಬೈಂದೂರು ವೇದಿಕೆ ಮೂಲಕ ತಾಲೂಕಿನ ಅಭಿವೃದ್ಧಿ ಚರ್ಚೆಆರಂಭವಾಗಿದೆ. ಚರ್ಚೆ ನಡೆದಾಗಲೇ ಉತ್ತಮ ವಿಚಾರಗಳು ಹೊರಬರುತ್ತವೆ. ನಾನು ನಿಮ್ಮ ಕನಸುಗಳ ಬುಟ್ಟಿಯೂ ಹೌದು, ಬಂಡಿಯೂ ಹೌದು, ತೋಟವೂ ಹೌದು. ಜನ ಊರಿನ ಬಗ್ಗೆ ಏನು ಕನಸು ಕಂಡಿದ್ದಾರೋ ಅದನ್ನು ಸಾಕರಾಗೊಳಿಸುವ ಜವಾಬ್ದಾರಿಯೂ ನನ್ನದು ಎಂದರು.

ಕುಂದಾಪ್ರ ಡಾಟ್ ಕಾಂನ ಪ್ರವರ್ತಕ ಸುನಿಲ್ ಹೆಚ್.ಜಿ ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉದಯ ಮರವಂತೆ ವಂದಿಸಿದರು. ಬೈಂದೂರು ರೋಟರಿ ನಿಯೋಜಿತ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News