ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ ಹೆಸರಿನಲ್ಲಿ ನಕಲಿ ಅಪ್ಲಿಕೇಷನ್‌: ಪೊಲೀಸ್ ಇಲಾಖೆ ಎಚ್ಚರಿಕೆ

Update: 2023-07-16 11:12 GMT

ಉಡುಪಿ, ಜು.16: ಕರ್ನಾಟಕ ಸರಕಾರದ ಉಚಿತ ಯೋಜನೆಗಳಾದ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಾರ್ವಜನಿಕ ಜಾಲತಾಣ ಗಳಲ್ಲಿ ನಕಲಿ ಅಪ್ಲಿಕೇಷನ್‌ ಗಳು ಕಾರ್ಯಾಚರಿಸುತ್ತಿದ್ದು, ಈ ಬಗ್ಗೆ ಜಾಗೃತೆ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ಈ ರೀತಿಯ ನಕಲಿ ಅಪ್ಲಿಕೇಷನ್‌ಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ಸೈಬರ್ ಕಳ್ಳರು ಮೆಸೇಜ್ ಮೂಲಕ ಹಾಗೂ ವಾಟ್ಸಾಪ್ ಮೂಲಕ ಈ ಬಗ್ಗೆ ನೀಡುವ ಯಾವುದೇ ಲಿಂಕ್‌ನ್ನು ಬಳಸಬಾರದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.

ಈ ರೀತಿಯಾದ ಲಿಂಕ್ ಕ್ಲಿಕ್ ಮಾಡಿದಾಗ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಬಹುದು. ಯಾವುದೇ ಹೆಲ್ಪ್ ಡೆಸ್ಕ್‌ನಿಂದ ಕರೆ ಮಾಡಿ ನೀವು ಈ ಯೋಜನೆಗೆ ಆಯ್ಕೆಯಾಗಿದ್ದಿರಿ, ನಿಮ್ಮ ವೈಯುಕ್ತಿಕ ವಿವರಗಳನ್ನು ನೀಡುವಂತೆ ತಿಳಿಸಿದ್ದಲ್ಲಿ ಕೂಡ ಯಾವುದೇ ಮಾಹಿತಿ ನೀಡಬಾರದು.

ಸಾರ್ವಜನಿಕರು ಇಂತಹ ನಕಲಿ ‌ಅಪ್ಲಿಕೇಷನ್‌ ಗಳ ಮೂಲಕ ತಮ್ಮ ವೈಯಕ್ತಿಕ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ನೀಡಿ ಮೋಸ ಹೋಗಬಾರದು. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸರಕಾರವು ಇದುವರೆಗೂ ಯಾವುದೇ ಅಂಡ್ರಾಯ್ಡ್ ಅಪ್ಲಿಕೇಷನ್‌ ಅನ್ನು ಬಿಡುಗಡೆ ಮಾಡಿರುವುದಿಲ್ಲ. ಈ ಯೋಜನೆ ಗಳ ನೋಂದಣಿಗಾಗಿ ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News