ವಿಪರೀತ ಮಳೆ: ಕಲ್ಲಾಪುವಿನಲ್ಲಿ ಮನೆಗಳು ಜಲಾವೃತ

Update: 2023-07-04 18:21 GMT

ಉಳ್ಳಾಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಕಡಲ್ಕೊರೆತ ತೀವ್ರಗೊಂಡಿದ್ದು ಉಳ್ಳಾಲ ಸೀಗ್ರೌಂಡ್ ನಲ್ಲಿ ಕಡಲ್ಕೊರೆತಕ್ಕೆ ಕೆಲವು ಮರಗಳು ಸಮುದ್ರ ಪಾಲಾಗಿವೆ. ಮನೆಗಳು ಸಮುದ್ರಕ್ಕಿಂತ ಸ್ವಲ್ಪ ದೂರ ಇದ್ದ ಕಾರಣ ಯಾವುದೇ ಅಪಾಯ ಸಂಭವಿಸದಿದ್ದರೂ ಆತಂಕದಿಂದ ಬದುಕುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂದರ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಮುಕಚೇರಿ, ಹಿಲರಿಯನಗರ, ಕೈಕೋ, ಮೊಗವೀರ ಪಟ್ಣ, ಕೋಡಿ,ಕೋಟೆಪುರದಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು ತಡೆಗೋಡೆ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿದ ಬಗೆ ವರದಿಯಾಗಿಲ್ಲ. ಈ ಪ್ರದೇಶದ ಜನರಲ್ಲಿ ಆತಂಕ ಸೃಷ್ಟಿಸಿದೆ.ಯಾವುದೇ ಘಟನೆ ನಡೆದರೂ ತಕ್ಷಣ ಮಾಹಿತಿ ನೀಡಿ, ತಕ್ಷಣ ಸ್ಪಂದನ ಮಾಡುವುದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಮನೆಮಂದಿಗೆ ಭರವಸೆ ನೀಡಿದ್ದಾರೆ.

ಬಟ್ಟಪ್ಪಾಡಿ ಯಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರ ಸೂಚನೆ ಮೇರೆಗೆ ಹಾಕಲಾದ ತಾತ್ಕಾಲಿಕ ತಡೆಗೋಡೆ ಕಾಮಗಾರಿ ದಾಟಿ ರಂಜಿತ್ ರವರ ಮನೆ ಕಾಂಪೌಂಡ್ ಗೆ ಸಮುದ್ರ ದ ಅಲೆ ಬಡಿಯುತ್ತಿದೆ. ಬಾಕಿ. ಉಳಿದಿದ್ದ ಅರ್ಧ ರಸ್ತೆ , ಸಭೆ ನಡೆಸುವ ಮೈದಾನ ಸಮುದ್ರ ಪಾಲಾಗಿದೆ.

ಕಳೆದ ಬಾರಿ ಸಮುದ್ರ ಪಾಲಾದ ರಾಜೀವಿ ಅವರ ಮನೆಯ ಪಕ್ಕದ ಮನೆ ಅಪಾಯದಂಚಿಲ್ಲಿದ್ದು, ಸುತ್ತಲಿರುವ ಮನೆ ಮಂದಿಯಲ್ಲಿ ಆತಂಕ ಸೃಷ್ಟಿಯಾಗಿದೆ. ಅಪಾಯದಂಚಿನಲ್ಲಿರುವ ಒಂದು ಮನೆಯ ಕುಟುಂಬ ವನ್ನು ಬೇರೆಡೆಗೆ ಸ್ಥಳಾಂತರ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತಾಡಿ, ತಹಶೀಲ್ದಾರ್ ಪ್ರಭಾಕರ್ , ತಹಶೀಲ್ದಾರ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲ್ಲಾಪು ಬಳಿ ಆರು ಮನೆಗಳು ಜಲಾವೃತ ಗೊಂಡಿದ್ದು, ಎರಡು ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಒಂದು ಕುಟುಂಬ ತಾತ್ಕಾಲಿಕ ವಾಗಿ ಕುಟುಂಬದ ಮನೆಗೆ ಸ್ಥಳಾಂತರ ಗೊಂಡಿದೆ. ಕೆಲವು ಮನೆಗಳ ಬಳಿ ಕೃತಕ ನೆರೆ ಆವರಿಸಿದೆ. ಸೇವಂತಿ ಗುಡ್ಡೆ ಯಲ್ಲಿ ಮನೆಯ ಕಾಂಪೌಂಡ್ ಜರಿದು ಬಿದ್ದಿದ್ದು ,ಅಪಾಯದಂಚಿನಲ್ಲಿದೆ. ಈ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಕುಟುಂಬ ವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಗೊಳಿಸಲಾಗಿದೆ.

ಮನೆಗಳ ನೀರನ್ನು ಖಾಲಿ ಮಾಡಲು ನಗರ ಸಭೆ , ಬಂದರ್ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಉಳ್ಳಾಲ ನಗರ ಸಭೆ ಹಿಟಾಚಿ ಮೂಲಕ ಕಸಗಳನ್ನು ಸ್ವಚ್ಛ ಗೊಳಿಸುವ ಕಾರ್ಯಾಚರಣೆ ಯಲ್ಲಿ ನಿರತವಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ಶೇಖರಣೆ ಆಗದಂತೆ ತುರ್ತು ಕ್ರಮ ಕೈಗೊಂಡಿದೆ.

ಚೆಂಡು ಗುಡ್ಡೆ ಯಿಂದ ತೊಕ್ಕೊಟ್ಟು ಕಡೆ ಹೋಗುವ ರಸ್ತೆ ಬದಿಯ ಚರಂಡಿ ಬ್ಲಾಕ್ ಆಗಿ ನೀರು ರಸ್ತೆಯಲ್ಲೇ ಹರಿದು ಹೋಗಿದ್ದು, ಕೆಲವು ಅಂಗಡಿಗಳಿಗೆ , ಎಟಿಎಂ ಗೆ ನೀರು ನುಗ್ಗಿದೆ.

ಘಟನಾ ಸ್ಥಳಕ್ಕೆ ಪಿಡಬ್ಲ್ಯೂಡಿ ಇಂಜಿನಿಯರ್ ದಾಸ್ ಪ್ರಕಾಶ್, ಪೌರಾಯುಕ್ತ ವಾಣಿ ಆಳ್ವ, ಕೌನ್ಸಿಲರ್ ಬಾಜಿಲ್ ಡಿಸೋಜ, ಶಶಿ ಕಲಾ ಮುಹಮ್ಮದ್ ಮುಕಚೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಂಜಿನಿಯರ್ ಅವರ ಸೂಚನೆ ಮೇರೆಗೆ ನೀರು ಹರಿದು ಹೋಗಲು ತಾತ್ಕಾಲಿಕ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಕೋಟೆಪುರದಲ್ಲಿ ರುಕಿಯ ಎಂಬವರ ಮನೆ ಕುಸಿದು ಬಿದ್ದು ಭಾಗಶಃ ಹಾನಿಯಾಗಿದೆ.

"ಬಟ್ಟಪ್ಪಾಡಿ ಯಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು ಒಂದು ಮನೆ ಅಪಾಯದಲ್ಲಿದೆ. ಈ ಮನೆಯಲ್ಲಿ ವಾಸವಿರುವ ಕುಟುಂಬಕ್ಕೆ ಪ್ರತ್ಯೇಕ ಸ್ಥಳ ನೀಡಲು ವ್ಯವಸ್ಥೆ ಮಾಡಲಾಗುವುದು. ಮನೆ ನಿರ್ಮಾಣಕ್ಕೆ ಪರಿಹಾರ ವ್ಯವಸ್ಥೆ ಮಾಡಲಾಗುವುದು. ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ".

-ಮತಾಡಿ, ಮುಖ್ಯಾಧಿಕಾರಿ, ಸೋಮೇಶ್ವರ ಪುರಸಭೆ

"ಸೀಗ್ರೌಂಡ್ ,ಕೋಟೆಪುರ ದಲ್ಲಿ ಕಡಲ್ಕೊರೆತ ತೀವ್ರ ಗೊಂಡಿದ್ದು, ಬಂದರ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲಾಪುವಿನ ಸಮಸ್ಯೆ ಗೆ ಸಂಬಂಧಿಸಿದಂತೆ ಶಾಸಕ ರ ಜೊತೆ ಮಾತನಾಡಿದ್ದೇವೆ. ಬಂದರ್ ಇಲಾಖೆ ಅಧಿಕಾರಿಗಳು ಮೇಲಧಿಕಾರಿಗಳಿಗೆ ವರದಿ ನೀಡಿದ್ದಾರೆ. ತೊಕ್ಕೋಟ್ಟು ಚರಂಡಿ ಸಮಸ್ಯೆ ಗಳಿಗೆ ಸಂಬಂಧಿಸಿ ಹೆದ್ದಾರಿ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಘಟನಾ ಸ್ಥಳಕ್ಕೆ ಪಿಡಬ್ಲ್ಯೂಡಿ ಇಂಜಿನಿಯರ್ ದಾಸ್ ಪ್ರಕಾಶ್ ಭೇಟಿ ನೀಡಿ ತಾತ್ಕಾಲಿಕ ಚರಂಡಿ ವ್ಯವಸ್ಥೆ ಮಾಡಿದ್ದಾರೆ.ಯಾವುದೇ ಕುಟುಂಬ ಗಳಿಗೆ ತೊಂದರೆ ಆಗದಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು"

- ವಾಣಿ ಆಳ್ವ, ಪೌರಾಯುಕ್ತ, ಉಳ್ಳಾಲ ನಗರಸಭೆ

ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ‌ ಪಿಲಾರು ಎಂಬಲ್ಲಿ ಮನೆ ಸಂಪರ್ಕದ ಮೋರಿ‌ ದಾಟುವ ಸಂದರ್ಭ ವ್ಯಕ್ತಿಯೋರ್ವರು ಆಯ ತಪ್ಪಿ ಬಿದ್ದು ಮಳೆ ನೀರಿಗೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News