ಕುಂದಾಪುರ: ಮಾರಾಟಕ್ಕೆ ತಂದಿದ್ದ 22.56 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಸ್ನೇಹಿತ!

Update: 2023-06-27 08:07 GMT

ಸಾಂದರ್ಭಿಕ ಚಿತ್ರ- PTI

ಕುಂದಾಪುರ, ಜೂ.27: ಮಾರಾಟಕ್ಕಾಗಿ ತಂದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಜೊತೆಗಿದ್ದ ಸ್ನೇಹಿತನೇ ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ರಾಜಸ್ಥಾನ ಮೂಲದ ಸದ್ಯ ಮಂಗಳೂರು ಅತ್ತಾವರ ಕಾಪ್ರಿಗುಡ್ಡೆ ನಿವಾಸಿ ರಮೇಶ್ ಕುಮಾರ್(26) ಎಂಬವರು ಮುಹಮ್ಮದ್ ಶಹಾಬುದ್ದಿನ್ ಮಾಲಕತ್ವದ ಹಾಜಿ ಗೋಲ್ಡ್ ಆ್ಯಂಡ್ ಡೈಮೆಂಡ್ ಎಂಬ ಜ್ಯುವೆಲ್ಲರಿ ಹೋಲ್ ಸೇಲ್ಸ್ ಮಾರಾಟ ಅಂಗಡಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದರು.

ರಮೇಶ್ ಕುಮಾರ್ ಜೂ.10ರಂದು 421.380 ಮಿಲಿ ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಜಿ ಗೋಲ್ಡ್ ಎಂಡ್ ಡೈಮೆಂಡ್ ಅಂಗಡಿಯಿಂದ ಮಾರಾಟ ಮಾಡಲು ಹೊರಟಿದ್ದು, ಇವರಿಗೆ ಮಧ್ಯಾಹ್ನ ಅವರ ಸ್ನೇಹಿತ ರಾಜಸ್ಥಾನದ ಪಾಲಿ ಜಿಲ್ಲೆಯ ರಾಮ್ ಎಂಬವರು ಮಂಗಳೂರಿನ ಪಂಪ್ವೇಲ್ ಬಳಿ ಸಿಕ್ಕಿದ್ದರು.

ಇವರಿಬ್ಬರು ಬಸ್ ನಲ್ಲಿ ಹೊರಟು ಸಂಜೆ ಉಪ್ಪುಂದದ ಅಶೋಕ್ ಜ್ಯುವೆಲ್ಲರಿಗೆ ಹೋಗಿ 14 ಗ್ರಾಂ ಚಿನ್ನಾಭರಣ ಮಾರಾಟ ಮಾಡಿ ಅಲ್ಲಿಂದ 14 ಗಾಂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ವಾಪಸು ಮಂಗಳೂರಿಗೆ ಹೊರಟಿದ್ದರು. ಇವರು ಕುಂದಾಪುರ ತಲುಪುವಾಗ ಸಂಜೆ 7 ಆಗಿರುವುದರಿಂದ ಇವರಿಬ್ಬರು ಕುಂದಾ ಪುರದ ಹರಿಪ್ರಸಾದ ಹೊಟೇಲ್ನಲ್ಲಿ ರೂಮ್ ಮಾಡಿ ಉಳಿದುಕೊಂಡರು.

ರಾತ್ರಿ 10:30ರ ಸುಮಾರಿಗೆ ರಮೇಶ್ ಕುಮಾರ್ ಮಲಗುವ ಮಂಚದ ನಡುವೆ ಚಿನ್ನಾಭರಣ ಇರುವ ಬ್ಯಾಗ್ ಇಟ್ಟು ಮಲಗಿದ್ದು, ಜೂ.11ರಂದು ಬೆಳಗ್ಗಿನ ಜಾವ 3 ಗಂಟೆಗೆ ನೀರು ಕುಡಿಯಲು ಎದ್ದಾಗ ಜೊತೆಗಿದ್ದ ರಾಮ್ ರೂಮ್ನಲ್ಲಿ ಇರಲಿಲ್ಲ. ಅಲ್ಲದೆ ಜೊತೆಯಲ್ಲಿದ್ದ ಚಿನ್ನಾಭರಣ ಇದ್ದ ಬ್ಯಾಗ್ ಕೂಡ ಕಳವಾಗಿರುವುದು ಕಂಡುಬಂತು. ನಂತರ ರೂಮ್ನ ಬಾಗಿಲನ್ನು ತೆರೆಯಲು ಹೋದಾಗ ಹೊರಗಿನಿಂದ ಚಿಲಕ ಹಾಕಿತ್ತು ಎನ್ನಲಾಗಿದೆ.

ರಾಮ್ ಬ್ಯಾಗಿನಲ್ಲಿಟ್ಟಿದ್ದ 43 ಜೊತೆ ಚಿನ್ನದ ಸಾನಿಯಾ ಬಾಲಿ, 153 ಫೀಸ್ ಚಿನ್ನದ ಮೂಗುತಿ, 44 ಫೀಸ್ ಚಿನ್ನದ ಜೆ ಬಾಲಿ, 158 ಜೊತೆ ಚಿನ್ನದ ಕಿವಿ ಯೋಲೆ, 60 ಜೊತೆ ಕಿವಿಯ ಚಿನ್ನದ ಟಾಪ್ಸ್, 14 ಗ್ರಾಂ ಚಿನ್ನದ ಗಟ್ಟಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 22,56,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News