ಉಳ್ಳಾಲ: ಎರಡು ಕಂಟೈನರ್ ಲಾರಿಗಳ ನಡುವೆ ಸಿಲುಕಿ ಲಾರಿ ಚಾಲಕ ಮೃತ್ಯು

Update: 2023-06-23 14:40 GMT

ಉಳ್ಳಾಲ: ಎರಡು ಕಂಟೈನರ್ ಲಾರಿಗಳ ನಡುವೆ ಸಿಲುಕಿ ಲಾರಿ ಚಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಲಪಾಡಿ ಟೋಲ್ ಗೇಟ್ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದೆ.

ಹರ್ಯಾಣ ಮೂಲದ ಶಮೀಮ್ (38) ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ.

ಹರಿಯಾಣದಿಂದ ಕೇರಳ ಕಡೆಗೆ ಒಂದೇ ಸಂಸ್ಥೆಗೆ ಸೇರಿದ ಚಾಲಕರು ಎರಡು ಕಂಟೈನರ್ ಲಾರಿಗಳಲ್ಲಿ ಕೇರಳ ಕಡೆಗೆ ಸರಕು ಸಾಗಾಟ ನಡೆಸುತ್ತಿದ್ದರು. ತಲಪಾಡಿ ಟೋಲ್ ಸಮೀಪ ಒಂದು ಕಂಟೈನರ್ ಲಾರಿಯನ್ನು ಚಾಲಕ ಶಮೀಮ್ ಚಹಾ ಕುಡಿಯಲೆಂದು ನಿಲ್ಲಿಸಿದ್ದರು. ಇದೇ ಸಂದರ್ಭ ಅದೇ ಸಂಸ್ಥೆಗೆ ಸೇರಿದ ಇನ್ನೊಂದು ಲಾರಿಯ ಚಾಲಕ, ಶಮೀಮ್ ಅವರ ಸಂಬಂಧಿಯೇ ಆಗಿರುವ ಅಕ್ರಮ್ ಮೊದಲಿಗೆ ನಿಲ್ಲಿಸಲಾಗಿದ್ದ ಲಾರಿಯ ಮುಂದೆ ಹೋಗಿ ಲಾರಿಯನ್ನು ನಿಲ್ಲಿಸಿದ್ದರು. ಶಮೀಮ್ ತಾನು ನಿಲ್ಲಿಸಿದ್ದ ಲಾರಿ ಮುಂದೆ ನಿಂತು ಲಾರಿಯ ಗ್ಲಾಸ್ ಒರೆಸುತ್ತಿದ್ದ ಸಂದರ್ಭ, ಎದುರಿನಲ್ಲಿ ನಿಲ್ಲಿಸಿದ್ದ ಲಾರಿ ಏಕಾಏಕಿ ಹಿಂದೆ ಚಲಿಸಿದೆ.ಇದರಿಂದ ಶಮೀಮ್ ಎರಡು ಲಾರಿಗಳ ನಡುವೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News