ಭಟ್ಕಳದ ಸಾಲುಮರದ ತಿಮ್ಮಕ್ಕ ಉದ್ಯಾನದಲ್ಲಿ “ವನಮೋಹತ್ಸವ ಸಪ್ತಾಹ”ಕ್ಕೆ ಚಾಲನೆ ನೀಡಿದ ಸಚಿವ ಮಾಂಕಾಳ ವೈದ್ಯ

Update: 2023-07-01 16:32 GMT

ಭಟ್ಕಳ: ರಾಜ್ಯದ್ಯಂತ ಜು.1ರಿಂದ ಒಂದು ವಾರ ಕಾಲ ಆಚರಿಸುವ ರಾಜ್ಯ ಸರ್ಕಾರದ ಬಹು ಉದ್ದೇಶಿತ “ವನಮಹೋತ್ಸವ ಸಪ್ತಾಹ” ವನ್ನು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯದ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಮಾಂಕಾಳ್ ವೈದ್ಯ ಇಲ್ಲಿನ ಸಾಗರ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.೩೩ರಷ್ಟು ಅರಣ್ಯವಿದ್ದರೆ, ನಮ್ಮ ಜಿಲ್ಲೆಯಲ್ಲಿ ಶೆ.೮೦ರಷ್ಟು ಅರಣ್ಯ ಇದೆ, ಅದನ್ನು ನಾವು ಕಾಯ್ದು ಕೊಂಡು ಬರಬೇಕಾಗಿದೆ, ನಮ್ಮ ಜಿಲ್ಲೆಯಲ್ಲಿ ಇರುವ ಅರಣ್ಯವನ್ನು ಉಳಿಸಿಕೊಳ್ಳುವಲ್ಲಿ ನಮ್ಮ ಜಿಲ್ಲೆಯ ಜನತೆಯೇ ಕಾಳಜಿ ವಹಿಸಿದ್ದರಿಂದಲೇ ಇಲ್ಲಿಯ ತನಕ ಕಾಡು ಉಳಿದುಕೊಂಡು ಬಂದಿದೆ. ಜಿಲ್ಲೆಯಲ್ಲಿ ಅತಿಕ್ರಮಣವಾಗಿದ್ದರೆ ಅದು ಅನಿವಾರ್ಯ ಪ್ರಸಂಗದಲ್ಲಿ ಮಾತ್ರ ಆಗಿದ್ದು ಅತಿಕ್ರಮಣದಾರರೂ ಕೂಡಾ ಅರಣ್ಯ ಉಳಿಸಿ ಬೆಳೆಸುವಲ್ಲಿ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ. ಅಧಿಕಾರಿಗಳೇನಿದ್ದರೂ ನಮ್ಮ ಅರಣ್ಯವನ್ನು ನೋಡಿಕೊಳ್ಳಲು ಮಾತ್ರ ಸಾಕು ಎಂದ ಅವರು ಜಿಲ್ಲೆಯ ಜನತೆಯ ಅರಣ್ಯ ಕಾಳಜಿಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಮುಂದಿನ 7 ದಿನಗಳಲ್ಲಿ 41 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅರಣ್ಯದ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಎಲ್ಲರೂ ಮಾಡುವಂತೆ ಕರೆ ನೀಡಿದರು.

ಉಪಸ್ಥಿತರಿದ್ದ ಹೊನ್ನಾವರದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಅವರು ಮಾತನಾಡಿ ನಮ್ಮ ರಾಜ್ಯದಲ್ಲಿ ಇರುವ ಶೇ.21 ಅರಣ್ಯವನ್ನು ಶೇ.33ಕ್ಕೆ ಹೆಚ್ಚಿಸುವ ಕುರಿತು ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಒಂದು ವಾರದಲ್ಲಿ ರಾಜ್ಯದಲ್ಲಿ ಇಲಾಖೆಯು ಸಾರ್ವಜನಿಕ ಸಹಭಾಗಿತ್ವದೊಂದಿಗೆ 1 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾದವರಿಗೆ, ವಿವಿಧ ರೀತಿಯಲ್ಲಿ ಸಂತ್ರಸ್ತರಾದವರಿಗೆ ಇಲಾಖೆಯ ವತಿಯಿಂದ ಪರಿಹಾರದ ಸಚಿವರು ಚೆಕ್ ವಿತರಣೆ ಮಾಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಬೋರಯ್ಯ ಸಹಕರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಅಧಿಕಾರಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News