ಇತಿಹಾಸದ ಅಪರೂಪದ ಬಜೆಟ್: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Update: 2023-07-07 15:06 GMT

ಉಡುಪಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ರಾಜ್ಯದ ಕಾಂಗ್ರೆಸ್ ಸರಕಾರದ 2023-24ನೇ ಸಾಲಿನ ಬಜೆಟ್ ಇತಿಹಾಸ ದಲ್ಲೇ ಅತ್ಯಪರೂಪದ್ದು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಕಾಂಗ್ರೆಸ್ ಧ್ಯೇಯ ಬಜೆಟ್‌ನಲ್ಲಿ ಪ್ರತಿಬಿಂಬಿತವಾಗಿದೆ.

ಪ್ರಾದೇಶಿಕವಾಗಿ ನೋಡಿದರೂ, ಇಲಾಖಾವಾರು ನೋಡಿದರೂ ಎಲ್ಲ ದೃಷ್ಟಿಯಿಂದಲೂ ಬಜೆಟ್ ಅತ್ಯಂತ ಸಮತೋಲಿತವಾಗಿದೆ. ಎಲ್ಲಾ ಜಿಲ್ಲೆಗಳಿಗೂ, ಎಲ್ಲಾ ಇಲಾಖೆಗಳಿಗೂ ಹೇರಳವಾಗಿ ಹಣ ಒದಗಿಸಲಾಗಿದೆ. ರಾಜ್ಯದ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ರೀತಿಯಲ್ಲಿ ಬಜೆಟ್ ರೂಪಿಸಲಾಗಿದೆ. ಕೃಷಿ, ನೀರಾವರಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಆದ್ಯತೆ ನೀಡಲಾಗಿದೆ. ಯಾರಿಗೂ ಅಸಮಧಾನವಾಗದಂತೆ, ಎಲ್ಲರಲ್ಲೂ ವಿಶ್ವಾಸ ಮೂಡಿಸುವಂತೆ ಮುಖ್ಯಮಂತ್ರಿಗಳು ಬಜೆಟ್ ತಯಾರಿಸಿದ್ದಾರೆ.

-ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ.

ಬೆಳಕೇ ಇಲ್ಲದ ಕತ್ತಲೆ ಹಾದಿಗೆ...

ಸಿಎಂ ಸಿದ್ದರಾಮಯ್ಯ ಬಜೆಟ್ ಪುಸ್ತಕದಲ್ಲಿ ಹೊಸ ಸಂಪ್ರದಾಯವನ್ನು ತುರುಕಿದ್ದಾರೆ. ಹಿಂದಿನ ಸರಕಾರ ಹಾಗೂ ಕೇಂದ್ರ ಸರಕಾರದ ನಿಂದನೆಗೆ ನೀಡಿದಷ್ಟು ಸ್ಥಳಾವಕಾಶವನ್ನು ಹೊಸ ಯೋಜನೆಗಳ ಪ್ರಕಟಣೆಗೆ ನೀಡಿಲ್ಲ. ಈ ಬಜೆಟ್‌ನಲ್ಲಿ ಆರ್ಥಿಕ ಮುನ್ನೋಟಕ್ಕಿಂತ ರಾಜಕೀಯ ಹಿನ್ನೋಟವೇ ಜಾಸ್ತಿ ಇದೆ. ಸಿದ್ದರಾಮಯ್ಯ ಬೆಳಕೇ ಇಲ್ಲದ ಕನಸು ಕಾಣುವುದಕ್ಕೂ ಅನರ್ಹವಾದ ಕತ್ತಲೆಯ ಹಾದಿಗೆ ರಾಜ್ಯವನ್ನು ಎಳೆದೊಯ್ಯುವ ಪ್ರಯತ್ನ ನಡೆಸಿದ್ದಾರೆ.

-ವಿ.ಸುನಿಲ್ ಕುಮಾರ್, ಕಾರ್ಕಳ ಶಾಸಕ.

"ಕರಾವಳಿ ಜಿಲ್ಲೆ ಬಗ್ಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯ ಈ ಬಜೆಟ್‌ನಲ್ಲೂ ಕಾಣಿಸಿದೆ. ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆಯ ಬಜೆಟ್ ಇದಾಗಿದೆ. ತನ್ನ ಗ್ಯಾರಂಟಿ ಅನುಷ್ಠಾನದ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ತೆರಿಗೆ ಏರಿಕೆ ಮಾಡಿದೆ ಹಾಗೂ ರಾಜ್ಯದ 224 ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಯನ್ನು ಕಡೆಗಣಿಸಿದೆ".

-ಯಶಪಾಲ್ ಸುವರ್ಣ, ಉಡುಪಿ ಶಾಸಕ.

"ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯಲ್ಲಿ ಹೊಸ ದಾಖಲೆ ಏನೋ ಮಾಡಿದ್ದಾರೆ. ಆದರೆ ಚುನಾವಣಾ ಕಾಲದಲ್ಲಿ ನೀಡಿದ ಗ್ಯಾರಂಟಿಗೆ ಹಣ ತುಂಬಿಸುವುದರಲ್ಲಿ ಸುಸ್ತಾಗಿ ಹೋಗಿದ್ದಾರೆ ಅನ್ನುವುದು ಈ ಸಲದ ಬಜೆಟ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ತೆರಿಗೆ ಹೆಚ್ಚಳ ಜನಸಾಮಾನ್ಯರ ದಿನ ನಿತ್ಯದ ಬದುಕಿನ ಮೇಲೆ ನೇರ ಪರಿಣಾಮ ಬೀರುವುದು ಸತ್ಯ. ಹೀಗಾಗಿ ಉಚಿತವಾಗಿ ನೀಡಿದ ಗ್ಯಾರಂಟಿಯ ಫಲವಾಗಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ತಟ್ಟಿದರೂ ಆಶ್ಚರ್ಯವಿಲ್ಲ".

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ನಿವೃತ್ತ ಪ್ರಾಧ್ಯಾಪಕ ಉಡುಪಿ.

"ಕೆಲವು ವರ್ಷಗಳಿಂದ ಕ್ರೈಸ್ತರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿರುವ ಕ್ರೈಸ್ತ ನಿಗಮ ಮಂಡಳಿಯನ್ನು ಘೋಷಿಸಿದ ಸಿಎಂ ಸಿದ್ಧರಾಮಯ್ಯ ಅವರನ್ನು ಸಮಸ್ತ ಕ್ರೈಸ್ತ ಬಂಧುಗಳ ಪರವಾಗಿ ಭಾರತೀಯ ಕ್ರೈಸ್ತ ಒಕ್ಕೂಟ ಅಭಿನಂದಿಸುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ನುಡಿದಂತೆ ನಡೆದು ಇಂದು ಕ್ರೈಸ್ತ ಅಭಿವೃದ್ಧಿ ನಿಗಮದ ಘೋಷಣೆ ಮಾಡಿದೆ".

-ಪ್ರಶಾಂತ್ ಜತ್ತನ್ನ, ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ.

"ಆರ್ಥಿಕ ಶಿಸ್ತನ್ನು ಕಾಯ್ದುಕೊಂಡು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾ ಗಿದೆ. 100 ಕೋಟಿ ವೆಚ್ಚದಲ್ಲಿ ಕೃಷಿ ಯೋಜನೆ ಮರುಜಾರಿ ಯೊಂದಿಗೆ ಕೃಷಿಗೆ ಪೂರಕವಾದ ಹಲವಾರು ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಲಾ ಗಿದೆ. ಬೆಂಗಳೂರು ಬ್ರಾಂಡ್ ನಿರ್ಮಾಣಕ್ಕಾಗಿ ಹೆಚ್ಚಿನ ಅನುದಾನ ನೀಡುವುದರೊಂದಿಗೆ 3.27 ಲಕ್ಷ ಕೋಟಿ ರೂ. ವೆಚ್ಚದ ಸಿದ್ದರಾಮಯ್ಯನವರ 14ನೇ ಬಜೆಟ್ ಮಂಡನೆ ಹೊಸ ದಾಖಲೆ ನಿರ್ಮಿಸಿದೆ".

-ಅಶೋಕ್‌ ಕುಮಾರ್ ಕೊಡವೂರು, ಅಧ್ಯಕ್ಷರು ಉಡುಪಿ ಜಿಲ್ಲಾ ಕಾಂಗ್ರೆಸ್

"ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2023-24ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಯಾವ ಯೋಜನೆಗಳಿಲ್ಲದೆ, ಕೇವಲ ಕಾಂಗ್ರೆಸ್ ಅಧಿಕಾರಕ್ಕೆ ಬರಲೆಂದೇ ಘೋಷಿಸಿದ್ದ ನಕಲಿ ಗ್ಯಾರಂಟಿಗಳಿಗಾಗಿ ರಾಜ್ಯದ ಹಿತ ಮರೆತು ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುವ ನಿರಾಶಾದಾಯಕ ಚುನಾವಣಾ ಗಿಮಿಕ್ ಬಜೆಟ್".

-ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ.

"ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ರಾಜ್ಯದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಟ್ಟೊಟ್ಟಿಗೆ ಮುನ್ನಡೆಸುವಲ್ಲಿ ರಾಜ್ಯ ಸರಕಾರದ ಬಜೆಟ್ ಸಫಲವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಾಪನೆ, ಕೃಷಿ ಭಾಗ್ಯ ಯೋಜನೆ, ಬೆಂಗಳೂರು ಬ್ರಾಂಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನಗಳು, ಕೈಗಾರಿಕೆಗಳನ್ನು ಉತ್ತೇಜಿಸಲು ಕಾನೂನಿನ ಸರಳೀಕರಣ ಸಿದ್ದರಾಮಯ್ಯರ ಬಜೆಟ್‌ನ ವೈಶಿಷ್ಠಗಳು"

-ಭಾಸ್ಕರರಾವ್ ಕಿದಿಯೂರು, ವಕ್ತಾರರು ಉಡುಪಿ ಜಿಲ್ಲಾ ಕಾಂಗ್ರೆಸ್

"ರಾಜ್ಯ ಸರಕಾರದ ಬಜೆಟ್‌ನ ಅಂಕಿ ಅಂಶಗಳಲ್ಲಿ ಗ್ಯಾರಂಟಿ ಯೋಜನೆಗೆ ಸಿಂಹಪಾಲು. ಸರ್ವರಿಗೂ ಸಮಪಾಲು, ಸಮಬಾಳು ಘೋಷಣೆಗೆ ಸೀಮಿತ. ಇದೊಂದು ಟೀಕಾರ್ಹ, ತೆರಿಗೆ ಏರಿಕೆ ಮಾಡುವ ಬಜೆಟ್. ನಮ್ಮ ಕರಾವಳಿ ಜಿಲ್ಲೆಗೆ ಏನೂ ಇಲ್ಲದ ಬಜೆಟ್"

-ಯೋಗೇಶ್ ವಿ.ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ.

"ಹಿಂದಿನ ಸರಕಾರದ ಎಲ್ಲಾ ಯೋಜನೆಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಎಳ್ಳು ನೀರು ಬಿಡಲಾಗಿದೆ. ರಾಜ್ಯದಲ್ಲಿ ಉಡುಪಿ, ದ.ಕ. ಜಿಲ್ಲೆಗಳು ಇವೆ ಎಂಬು ದನ್ನು ಸರಕಾರ ಮರೆತಂತಿದೆ. ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದುಗೊಳಿಸಿದ ಪರಿಣಾಮವಾಗಿ ಕೈಗಾರಿಕೆಗಳ ಬೆಳವಣಿಗೆ ಕುಂಠಿತವಾಗಲಿದೆ. ಜಿಲ್ಲೆಗೊಂದು ಗೋಶಾಲೆ ರದ್ದು ಮಾಡಿ ಗೋವಿನ ರಕ್ಷಣೆಗೆ ಈಗಿನ ಸರಕಾರ ಇಲ್ಲ ಎಂಬುದನ್ನು ಸಾಬೀತು ಪಡಿಸಿದೆ.ಗ್ಯಾರಂಟಿ ಯೋಜನೆಗಳಿಗೆ ಹಣ ಜೋಡಿಸುವ ಭರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳಲಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರವನ್ನು ಕಡೆಗಣಿಸಿರುವ ತೀರಾ ನಿರಾಶದಾಯಕ ಬಜೆಟ್".

-ಕೆ.ಉದಯಕುಮಾರ್ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗದ ಪ್ರಭಾರಿ.

"ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ಹಿಂದಿನ ಸರಕಾರದ ನೀತಿಗಳಿಗೆ ಪ್ರತೀಕಾರ ತೀರಿಸಿದ ರೀತಿಯಲ್ಲಿದ್ದು, ರಾಜ್ಯದ ಜನತೆಗೆ ಮತ್ತಷ್ಟು ಸಾಲದ ಹೊರೆಯನ್ನುಂಟು ಮಾಡಲಿದೆ. ಅಬಕಾರಿ, ಆಸ್ತಿ, ವಿದ್ಯುಚ್ಛಕ್ತಿ ಎಲ್ಲದರ ತೆರಿಗೆಯನ್ನು ಹೆಚ್ಚಿಸಿ ಬಡವರನ್ನು ಮತ್ತು ಮಧ್ಯಮ ವರ್ಗದವರನ್ನು ಲೂಟಿ ಮಾಡಿ ಗ್ಯಾರಂಟಿಗಳ ಮೂಲಕ ಬಡವರನ್ನು ವಂಚಿಸಿದ ಬಜೆಟ್ ಇದಾಗಿದೆ".

-ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಅಧ್ಯಕ್ಷ ಕರಾವಳಿ ಅಭಿವೃದ್ಧಿ ಪ್ರಾಧಿಕಾರ.

"ರಾಜ್ಯ ಜನತೆಯ ನಿರೀಕ್ಷೆ, ಅಪೇಕ್ಷೆಗೆ ತಕ್ಕಂತೆ ಅಭಿವೃದ್ಧಿ ಪೂರಕವಾದ ಬಜೆಟ್. ಬಡವರ ಅನುಕೂಲಕ್ಕಾಗಿ ಜನರಿಗೆ ಕೊಟ್ಟ ಐದು ಭರವಸೆಗಳನ್ನು ಈಡೇರಿಸಿದ ಸಿದ್ಧರಾಮಯ್ಯ ಬಜೆಟ್. ಸರ್ವರಿಗೂ ಸಮಪಾಲು, ಸಮಬಾಳು ಎಂಬ ಮೂಲಮಂತ್ರದ ಕರ್ನಾಟಕ ಮಾದರಿಯ ಆಡಳಿತವನ್ನು ನೀಡುವ ಪ್ರಯತ್ನದಲ್ಲಿ ಮಂಡಿಸಿದ ಪೂರಕ ಬಜೆಟ್.

-ಕೆ.ಕೃಷ್ಣಮೂರ್ತಿ ಆಚಾರ್ಯ, ಉಡುಪಿ ಕ್ಷೇತ್ರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ.

"ಸಿದ್ಧರಾಮಯ್ಯ ಮಂಡಿಸಿದ ದಾಖಲೆಯ 14ನೇ ಬಜೆಟ್, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಏಳಿಗೆ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಹಾಗೂ ಸಮಾನ ಅವಕಾಶಗಳಿಗೆ ಒತ್ತು ನೀಡಿದ ಉತ್ತಮ ಬಜೆಟ್".

- ಯು.ಶಬ್ಬೀರ್ ಅಹ್ಮದ್, ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News