ಉನ್ನತ ಶಿಕ್ಷಣದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಬೆಂಗಳೂರು ವಿವಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Update: 2023-10-17 21:11 IST
ಉನ್ನತ ಶಿಕ್ಷಣದಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಬೆಂಗಳೂರು ವಿವಿ: ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್
  • whatsapp icon

ಬೆಂಗಳೂರು, ಅ.17: ಬೆಂಗಳೂರು ವಿಶ್ವವಿದ್ಯಾನಿಲಯವು ಭಾರತದ ಆಧುನಿಕತೆ, ಇತಿಹಾಸ, ಸಂಸ್ಕೃತಿ ಮತ್ತು ನಾಗರಿಕತೆಯೊಂದಿಗೆ ಸಂಪರ್ಕ ಹೊಂದಿದೆ. ಮಾನವಿಕ, ಸಮಾಜ ವಿಜ್ಞಾನ, ಕಾನೂನು, ವಾಣಿಜ್ಯ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಮತ್ತು ಮಹತ್ವದ ಕೊಡುಗೆಗಳನ್ನು ನೀಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿರುವ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಿವಿಯ 58ನೆ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಪ್ರಮುಖ ರಾಜ್ಯವಾಗಿದೆ. ಇಲ್ಲಿ ಅನೇಕ ವಿಶ್ವ ದರ್ಜೆಯ ಸಂಶೋಧನಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿವೆ. ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವೂ ಒಂದಾಗಿದೆ ಎಂದರು.

2023ರಲ್ಲಿ ನ್ಯಾಕ್ ನಿಂದ ಎ++ ಗ್ರೇಡ್ ಅನ್ನು ನೀಡಲಾಗಿದೆ. ಇದು ವಿಶ್ವವಿದ್ಯಾಲಯದ ದೊಡ್ಡ ಸಾಧನೆಯಾಗಿದೆ. ವಿದ್ಯಾರ್ಥಿಗಳು ‘ನವ ಭಾರತ ಶ್ರೇಷ್ಠ ಭಾರತ’ ಮತ್ತು ‘ಸ್ವಾವಲಂಬಿ ಭಾರತ’ ನಿರ್ಮಾಣದಲ್ಲಿ ಭಾಗವಹಿಸಬೇಕು. ಯಶಸ್ವಿ ಉದ್ಯಮಿಯಾಗುವ ಕನಸನ್ನು ಪಾಲಿಸಬೇಕು. ಉದ್ಯೋಗಕ್ಕಾಗಿ ಇತರರ ಕಡೆಗೆ ನೋಡಬೇಡಿ, ನೀವೇ ಇತರರಿಗೆ ಉದ್ಯೋಗದಾತರಾಗಬೇಕು ಎಂದು ಕರೆ ನೀಡಿದರು.

ಶಿಕ್ಷಣವು ನಮಗೆ ತಾಂತ್ರಿಕ ಮತ್ತು ಉನ್ನತ ಕೌಶಲದ ಜ್ಞಾನವನ್ನು ಹಾಗೂ ವಿಚಾರಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಯುವಕರು ನಮ್ಮ ದೇಶದ ಭವಿಷ್ಯ ಹಾಗೂ ದೇಶದ ಅಭಿವೃದ್ಧಿಯ ಪ್ರಮುಖ ಭಾಗವಾಗಿದ್ದಾರೆ. ಯುವಕರನ್ನು ನುರಿತರನ್ನಾಗಿ ಮಾಡುವ ಮೂಲಕ ಮಾತ್ರ, ನಾವು ವೋಕಲ್ ಫಾರ್ ಲೋಕಲ್ ದಿಕ್ಕಿನಲ್ಲಿ ಮುನ್ನಡೆಯಬಹುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಝರೋಧ ಸಂಸ್ಥೆಯ ಸಹ ಸಂಸ್ಥಾಪಕ ನಿಖಿಲ್ ಕಾಮತ್, ಕುಲಪತಿ ಡಾ.ಜಯಕರ್ ಎಸ್.ಎಂ. ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.‌

ದೇವೇಗೌಡರಿಗೆ ಗೌರವ ಡಾಕ್ಟರೇಟ್ ಪ್ರದಾನ

ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಆಕ್ಸ್‌ ಫರ್ಡ್ ವಿಜ್ಞಾನ ಮತ್ತು ಕಲಾ ಕಾಲೇಜಿನ ವಿದ್ಯಾರ್ಥಿನಿ ವಿನುತಾ ಜೆ., ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ಉದಯ ಕುಮಾರ ಮುರಗೋಡ ಅವರಿಗೆ ತಲಾ 8 ಚಿನ್ನದ ಪದಕಗಳನ್ನು, ಜ್ಞಾನಭಾರತಿ ಆವರಣದ ಭೌತಶಾಸ್ತ್ರ ವಿದ್ಯಾರ್ಥಿನಿ ಅಸ್ಮಾ ಬಾನು ಡಬ್ಲ್ಯೂ. ಅವರಿಗೆ 7 ಚಿನ್ನದ ಪದಕ ಸೇರಿದಂತೆ ಒಟ್ಟು 24 ವಿದ್ಯಾರ್ಥಿಗಳಿಗೆ 147 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News