ಕೆಆ‌ರ್‌ʼಎಸ್ ನ ಬೀಗ ನಮ್ಮ ಕೈಯಲ್ಲಿ ಇಲ್ಲ; ಅದು ಕೇಂದ್ರ ಸರಕಾರದ ಕೈಯಲ್ಲಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-08-16 15:20 GMT

ಬೆಂಗಳೂರು, ಆ.16: ಕೆಆರ್‍ಎಸ್ ಅಣೆಕಟ್ಟಿನ ಬೀಗ ನಮ್ಮ ಕೈಯಲ್ಲಿ ಇಲ್ಲ. ಅದು ಕೇಂದ್ರ ಸರಕಾರದ ಕೈಯಲ್ಲಿದೆ. ಈ ಕಾನೂನು ಬಗ್ಗೆ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೆ? ರಾಜಕಾರಣ ಯಾವ ವಿಚಾರದಲ್ಲಿ ಮಾಡಬೇಕೊ ಅದರಲ್ಲಿ ಮಾಡಬೇಕು, ಎಲ್ಲ ವಿಚಾರದಲ್ಲೂ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ನಗರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಿಕ್ಷಣ ಕ್ಷೇತ್ರಕ್ಕೆ ಸಿಎಸ್‍ಆರ್ ಅನುದಾನ ಸದ್ಬಳಕೆ ಕುರಿತ ಸಭೆ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸರಕಾರ ರಾಜ್ಯದ ರೈತರ ಹಿತ ಮರೆತು ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ ಎಂಬ ಮಾಜಿ ಸಿಎಂ ಬೊಮ್ಮಾಯಿ ಹಾಗೂ ಬಿಜೆಪಿ ನಾಯಕರ ಟೀಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಮಿಳುನಾಡಿಗೆ ನೀರು ಬಿಡುವವರು ನಾವಲ್ಲ. ಅದರ ಅಧಿಕಾರ ಕೇಂದ್ರ ಸರಕಾರದ ಬಳಿ ಇದೆ. ಈ ಬಗ್ಗೆ ಬೊಮ್ಮಾಯಿ ಅವರಿಗೆ ಗೊತ್ತಿಲ್ಲವೇ? ಎಂದು ತಿರುಗೇಟು ನೀಡಿದರು.

ರಾಜ್ಯದ ರೈತರ ಹಿತ ಕಾಪಾಡುವುದಕ್ಕೆ ನಮ್ಮ ಸರಕಾರ ಬದ್ಧವಾಗಿದೆ. ಈ ಕಾರಣಕ್ಕೆ ಈಗಾಗಲೇ ನಾನು ಸಚಿವನಾದ ಬಳಿಕ 2 ಬಾರಿ ಬೆಳೆಗಳಿಗೆ ನೀರು ಹರಿಸಲು ಅನುಮತಿ ನೀಡಿದ್ದೇನೆ. ತಮಿಳುನಾಡಿನವರು 27 ಟಿಎಂಸಿ ನೀರು ಕೇಳಿದ್ದಾರೆ, ಅವರು ಕೇಳಿದಷ್ಟು ನೀರು ಕೊಟ್ಟಿಲ್ಲ. ನಾವು ನಮಗೆ ಇಚ್ಛೆ ಬಂದಂತೆ ವರ್ತಿಸಿದರೆ ಕೋರ್ಟ್ ಕೇಳಬೇಕಲ್ಲ ಎಂದು ಶಿವಕುಮಾರ್ ಹೇಳಿದರು.

ತಮಿಳುನಾಡು ಇತ್ತೀಚೆಗೆ ನಡೆದ ಕಾವೇರಿ ಟ್ರಿಬ್ಯುನಲ್ ಸಭೆಯನ್ನು ಬಹಿಷ್ಕರಿಸಿ ಹೋಗಿದ್ದಾರೆ. ಹೀಗೆ ಸಂಘರ್ಷ ಮಾಡಿಕೊಂಡು ಇರಲು ಆಗುತ್ತದೆಯೇ? ಸರಕಾರ ನಡೆಸುವವರು ಎಲ್ಲ ರೀತಿಯಲ್ಲೂ ಆಲೋಚನೆ ಮಾಡಬೇಕು. ನಾವು ಕಾನೂನು ತಜ್ಞರ ಸಲಹೆ ಕೇಳಿ ಅದರ ಅನುಗುಣವಾಗಿ ಹೆಜ್ಜೆ ಇಡಬೇಕಿದೆ. ಇಲ್ಲದಿದ್ದರೆ ಇನ್ನಷ್ಟು ದೊಡ್ಡ ನಷ್ಟವನ್ನು ನಾವು ಅನುಭವಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ರೈತರು ಪ್ರತಿಭಟನೆಗೆ ಮುಂದಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆ ಮಾಡುತ್ತಿರುವವರು ನಮ್ಮ ರೈತರೇ, ಪ್ರತಿಭಟನೆ ಅವರ ಹಕ್ಕು. ಆದರೆ ಸುಪ್ರಿಂ ಕೋರ್ಟ್ ನಮ್ಮ ಮಾತು ಕೇಳಬೇಕಲ್ಲ. ರೈತರಿಗೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಹಿಂದೆಯೂ ಅನೇಕ ಬಾರಿ ಕಾನೂನು ಹೋರಾಟ ನಡೆದಿದೆ ಎಂದರು.

ಕಳೆದ 30-40 ವರ್ಷಗಳಲ್ಲಿ ಈ ವರ್ಷ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಇಂತಹ ಸಂಕಷ್ಟದ ಕಾಲದಲ್ಲೂ ನಾವು ನಮ್ಮ ರಾಜ್ಯದ ರೈತರ ಪರವಾಗಿಯೂ ಇದ್ದೇವೆ ಹಾಗೂ ಕಾನೂನಿಗೂ ಗೌರವ ನೀಡುತ್ತಿದ್ದೇವೆ ಎನ್ನುವ ಕಾರಣಕ್ಕೆ ನೀರು ಬಿಡುಗಡೆ ಮಾಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ನಾನು 3 ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ: ಸಿಎಸ್‍ಆರ್ ಹಣದ ಮೂಲಕ ನೂತನ ಶಾಲೆಗಳನ್ನು ನಿರ್ಮಾಣ ಮಾಡಬೇಕು ಹಾಗೂ ಸದ್ಬಳಕೆ ಹೇಗೆ ಮಾಡಬೇಕು ಎಂಬುದಾಗಿ ಸರಕಾರ ಯೋಜನೆ ರೂಪಿಸುತ್ತಿದೆ. ನನ್ನದೂ 3 ಶಿಕ್ಷಣ ಸಂಸ್ಥೆಗಳಿದ್ದು ಪಂಚಾಯಿತಿ ಮಟ್ಟದಲ್ಲಿ 3 ಶಾಲೆಗಳನ್ನು ದತ್ತು ತೆಗೆದುಕೊಳ್ಳುತ್ತೇನೆ ಎಂದು ಶಿವಕುಮಾರ್ ಘೋಷಿಸಿದರು.

ಸಿಎಸ್‍ಆರ್ ಹಣವು ಕೇವಲ ನಗರೀಕರಣಕ್ಕೆ ಮಾತ್ರ ಬಳಕೆಯಾಗುತ್ತಿದೆ, ಇದನ್ನು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಬಳಕೆ ಮಾಡಬೇಕು ಎಂಬುದು ನಮ್ಮ ಆಶಯ, ಪ್ರತಿ ಪಂಚಾಯಿತಿಯಲ್ಲಿ 3 ಶಾಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಕನಸಾಗಿದೆ. ಅದಕ್ಕೆ ಹಣದ ಸದ್ಬಳಕೆ ಕುರಿತು ಸಭೆ ನಡೆಸಲಾಯಿತು ಎಂದು ಅವರು ಮಾಹಿತಿ ನೀಡಿದರು.

ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅವರ ಶಾಲೆಯ ಅಧ್ಯಾಪಕರನ್ನೆ ಗ್ರಾಮೀಣ ಭಾಗದ ಶಾಲೆಗಳಿಗೆ ಕಳುಹಿಸಿ ಪಾಠ ಮಾಡಬೇಕು. ಅಂತರ್‍ರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನಮ್ಮ ಕರ್ನಾಟಕದ ಪ್ರತಿ ಗ್ರಾಮೀಣ ಮಕ್ಕಳಿಗೂ ದೊರೆಯಬೇಕು ಎಂಬುದು ನಮ್ಮ ಸರಕಾರದ ಮಹತ್ವದ ಯೋಚನೆ ಮತ್ತು ಯೋಜನೆ ಎಂದು ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News