ಮಂಗಳೂರು: ವಾಹನ ಚಾಲಕ-ಸವಾರರ ಡಿಎಲ್ ಅಮಾನತಿಗೆ ಶಿಫಾರಸು‌

Update: 2023-08-21 12:50 GMT

ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್

ಮಂಗಳೂರು, ಆ.21: ಮಂಗಳೂರು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಆ.6ರಿಂದ 20ರವರೆಗೆ ಸಂಚಾರ ಪೊಲೀಸರು ನಡೆಸಿದ ತಪಾಸಣೆಯ ಸಂದರ್ಭ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ 298 ಮಂದಿ ಚಾಲಕ-ಸವಾರರ ಚಾಲನಾ ಪರವಾನಿಗೆ (ಡಿಎಲ್) ರದ್ದತಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಶಿಫಾರಸು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಅಮಿತ ವೇಗ ಮತ್ತು ನಿರ್ಲಕ್ಷ್ಯದ 71, ಮದ್ಯಪಾನಗೈದ 20, ಗೂಡ್ಸ್ ವಾಹನಗಳಲ್ಲಿ ಜನರ ಸಾಗಾಟ 42, ವಾಹನ ಸಂಚಾರ/ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿರುವ 4, ಕೆಂಪು ದೀಪ ಉಲ್ಲಂಘಿಸಿದ 10, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್‌ನ 7, ಹೆಲ್ಮೆಟ್ ಧರಿಸದ 128, ಸೀಟ್ ಬೆಲ್ಟ್ ಹಾಕದ 16 ಪ್ರಕರಣ ಹೀಗೆ ಒಟ್ಟು 298 ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿಎಲ್ ಅಮಾನತಿಗೆ ಶಿಫಾರಸು ಮಾಡಲಾಗಿದೆ.

ಇನ್ನು ಕಳೆದ 15 ದಿನಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಪಾರ್ಕ್ ಮಾಡಲಾದ 593, ಕರ್ಕಶ ಹಾರ್ನ್ ಬಳಸುತ್ತಿದ್ದ 106, ಟಿಂಟ್ ಗ್ಲಾಸ್ ಹಾಕಿದ್ದ 70, ಏಕಮುಖ ಸಂಚಾರ ಮಾಡಿದ 28 ಹಾಗೂ ಹೆಚ್ಚು ಬಾಡಿಗೆ ಅಥವಾ ಸೂಚಿತ ಸ್ಥಳಕ್ಕೆ ಬರಲೊಪ್ಪದ 13 ರಿಕ್ಷಾ ಚಾಲಕರ ವಿರುದ್ಧ ಸಹಿತ 810 ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News