ಮಂಗಳೂರು | 2024-25ನೇ ಆರ್ಥಿಕ ವರ್ಷದಲ್ಲಿ ಎಂಸಿಸಿ ಬ್ಯಾಂಕ್ಗೆ 13 ಕೋ. ರೂ. ಲಾಭ

ಮಂಗಳೂರು : ಅವಿಭಜಿತ ದ.ಕ.ಜಿಲ್ಲೆಯ ಎಂಸಿಸಿ ಬ್ಯಾಂಕ್ 2024-25ನೇ ಆರ್ಥಿಕ ವರ್ಷದಲ್ಲಿ 13 ಕೋ.ರೂ. ವ್ಯವಹಾರಿಕ ಲಾಭಗಳಿಸಿದೆ. ಸತತವಾಗಿ ಎನ್ಪಿಎ ಪ್ರಮಾಣ ಕಡಿಮೆಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷ ಶೇ.1.30 ಎನ್ಪಿಎ ದಾಖಲಿಸಿದೆ ಎಂದು ಬ್ಯಾಂಕ್ನ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.
ಬ್ಯಾಂಕ್ನ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ರಾಜ್ಯಕ್ಕೆ ವಿಸ್ತರಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ಬೆಳ್ತಂಗಡಿ ಮತ್ತು ಬೆಳ್ಮಣ್ನಲ್ಲಿ ಶಾಖೆಗಳನ್ನು ತೆರೆದಿದೆ. ಜುಲೈಯೊಳಗೆ ಬೈಂದೂರ್ನಲ್ಲಿ 20ನೇ ಶಾಖೆಯನ್ನು ತೆರೆಯಲಾಗುವುದು. ಅನಿವಾಸಿ ಭಾರತೀಯರಿಗೆ ಸೇವಾ ಸೌಲಭ್ಯವನ್ನು ನೀಡುವ ಕರ್ನಾಟಕದ ಪಟ್ಟಣ ಸಹಕಾರಿ ಬ್ಯಾಂಕುಗಳ ಪೈಕಿ ಎಂಸಿಸಿ ಎರಡನೇ ಬ್ಯಾಂಕ್ ಆಗಿ ಗುರುತಿಸಲ್ಪಟ್ಟಿವೆ. ಬ್ಯಾಂಕಿನ ವ್ಯವಹಾರವು 1240 ಕೋ. ರೂ. ತಲುಪಿದ್ದು, ಮುಂದಿನ ವರ್ಷಕ್ಕೆ 1,500 ಕೋ. ರೂ. ಸಾಧಿಸುವ ಗುರಿ ಹಾಕಲಾಗಿದೆ ಎಂದರು.
ಬ್ಯಾಂಕಿನ ನಿವ್ವಳ ಮೌಲ್ಯ 76 ಕೋ. ರೂ. ನಿಂದ 86.68 ಕೋ. ರೂ. ಗೆ ತಲುಪಿದೆ. ಬ್ಯಾಂಕಿನ ವ್ಯವಹಾರ ಕಳೆದ ವರ್ಷಕ್ಕಿಂತ ಶೇ.15 ಏರಿಕೆಯಾಗಿದೆ. ಒಟ್ಟು ಠೇವಣಿಯಲ್ಲಿ ಶೇ.11 ಪ್ರಗತಿ ಸಾಧಿಸಿದ್ದು, 705.40 ಕೋ. ರೂ. ಠೇವಣಿ, ಮುಂಗಡದಲ್ಲಿ ಶೇ.20.37 ಪ್ರಗತಿ ಸಾಧಿಸಿದೆ. ದುಡಿಯುವ ಬಂಡವಾಳ 836.73 ಕೋ. ರೂ. ಮತ್ತು ಶೇರು ಬಂಡವಾಳ 32.43 ಕೋ. ರೂ. ಆಗಿರುತ್ತದೆ ಎಂದು ಅನಿಲ್ ಲೋಬೋ ಹೇಳಿದರು.
ಬ್ಯಾಂಕಿನ ವ್ಯವಹಾರವನ್ನು ಸಂಪೂರ್ಣ ಕೋರ್ ಬ್ಯಾಂಕಿಂಗ್ ಮೂಲಕ ನಡೆಸಲಾಗುತ್ತಿದೆ. ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಂಸಿಸಿ ಬ್ಯಾಂಕಿನಲ್ಲೂ ದೊರೆಯುತ್ತವೆ. ಗ್ರಾಹಕರಿಗೆ ಕಡಿಮೆ ಬಾಡಿಗೆಯಲ್ಲಿ ಲಾಕರ್ ಸೌಲಭ್ಯ, ಕಡಿಮೆ ದರದಲ್ಲಿ ದೇಶ ವಿದೇಶದ ಶಿಕ್ಷಣ ಸಾಲ, ಎಂಎಸ್ಎಂಇ ವ್ಯವಹಾರ ಸಾಲ, ವಾಹನ ಸಾಲ, ವಸತಿ ಸಾಲ, ಮನೆ ಖರೀದಿ, ದುರಸ್ತಿ, ಮದುವೆ, ಗೃಹಉಪಯೋಗಿ ವಸ್ತು ಖರೀದಿ ಸಾಲವನ್ನು ತ್ವರಿತವಾಗಿ ನೀಡುತ್ತಿದೆ. ಸೇವಾ ಶುಲ್ಕವಿಲ್ಲದೆ ಚಿನ್ನಾಭರಣ ಸಾಲವನ್ನು ನೀಡುತ್ತಿದೆ. ಏಟಿಎಂ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಬ್ಯಾಂಕಿನಲ್ಲಿರುವ ಠೇವಣಿಗಳಿಗೆ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕುಗಳಂತೆಯೇ ಭಾರತೀಯ ರಿಸರ್ವ್ ಬ್ಯಾಂಕಿನ ಡಿಪಾಜಿಟ್ ಇನ್ಸೂರೆನ್ಸ್ ಆ್ಯಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ನಿಂದ ವಿಮಾ ಸೌಲಭ್ಯವಿದೆ. ಜೂನ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಕುಲಶೇಖರ ಶಾಖೆಯನ್ನು ಸ್ಥಳಾಂತರಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರ್ಯೂ ಡಿಸೊಜ, ಡಾ.ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ.ರೊಡ್ರಿಗಸ್, ಡೇವಿಡ್ ಡಿಸೊಜ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೊಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ.ಫ್ರೀಡಾ ಡಿಸೊಜ, ಆಲ್ವಿನ್ ಪಿ.ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೇಜಸ್ ಹಾಗೂ ಮಹಾ ಪ್ರಬಂಧಕ ಸುನಿಲ್ ಮಿನೇಜಸ್ ಉಪಸ್ಥಿತರಿದ್ದರು.