ಮಂಗಳೂರು: ಎಸ್‌ಸಿ, ಎಸ್‌ಟಿ ಪಂಗಡದ ಕುಂದು ಕೊರತೆ ಮಾಸಿಕ ಸಭೆ

Update: 2023-08-27 16:30 GMT

ಮಂಗಳೂರು: ಸುರತ್ಕಲ್‌ನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಪೊಲೀಸರು ಇದ್ದಾರೆ. ಕೆಎಸ್‌ಆರ್‌ಪಿ ಸಿಬ್ಬಂದಿ ಭವನವನ್ನು ಬಳಸುತ್ತಿದ್ದಾರೆ. ಅಂಬೇಡ್ಕರ್ ಭವನದ ಆವರಣದಲ್ಲಿ ಪೊಲೀಸರ ವಾಹನಗಳನ್ನು ನಿಲ್ಲಿಸಲಾಗಿದೆ ಎಂದು ರವಿವಾರ ಇಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಸಿಕ ಸಭೆಯಲ್ಲಿ ದಲಿತ ಮುಖಂಡರು ದೂರಿದರು.

ನಗರದ ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದು ಕೊರತೆ ಮಾಸಿಕ ಸಭೆಯಲ್ಲಿ ಸದಾಶಿವ ಉರ್ವಸ್ಟೋರ್ ಅವರು ಸಭೆಯ ಗಮನ ಸೆಳೆದರು.

ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಂಶುಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಅಂಬೇಡ್ಕರ್ ಭವನದ ಬೀಗದ ಕೈ ಪೊಲೀಸರ ವಶದಲ್ಲಿದೆ. ಅಂಬೇಡ್ಕರ್ ಭವನದ ಉಪಯೋಗಿಸಲು ಪೊಲೀಸರ ಅನುಮತಿ ಪಡೆಯುವಂತಾಗಿದೆ. ಭವನದ ಆವರಣದಲ್ಲಿ ಗುಜಿರಿ ವಾಹನಗಳನ್ನು ತಂದು ಹಾಕಲಾಗಿದೆ. ಇದರಿಂದ ಅಂಬೇಡ್ಕರ್‌ಗೆ ಅವಮಾನ ಮಾಡಿದಂತಾಗಿದೆ ಎಂದು ಆರೋಪಿಸಿದರು.

ಉತ್ತರ ಉಪವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅಂಬೇಡ್ಕರ್ ಭವನದ ಆವರಣದಲ್ಲಿರುವ ಹಳೆಯ ವಾಹನಗಳನ್ನು ತೆರವುಗೊಳಿಸಲಾಗುವುದು. ಅಂಬೇಡ್ಕರ್ ಭವನವನ್ನು ಕೆಎಸ್‌ಆರ್‌ಪಿ ಸಿಬ್ಬಂದಿ ಬಳಕೆ ಮಾಡುತ್ತಿದ್ದಾರೆ. ಕಾರ್ಯಕ್ರಮಗಳಿಗೆ ಅಗತ್ಯವಿದ್ದಾಗ ಸ್ವಚ್ಛಗೊಳಿಸಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಮಿಲಿಟರಿ ಕ್ಯಾಂಟೀನ್‌ನಿಂದ ಸಮಸ್ಯೆ: ಪಾಂಡೇಶ್ವರದ ನ್ಯೂ ರೋಡ್‌ನಲ್ಲಿ ಮಿಲಿಟರಿ ಕ್ಯಾಂಟೀನ್ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕ್ಯಾಂಟೀನ್ ಪಕ್ಕದ ಅಗಲ ಕಿರಿದಾದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಇದರಿಂದ ಸ್ಥಳೀಯ ರಿಗೆ ಸಮಸ್ಯೆಯಾಗಿದೆ. ಪೊಲೀಸರು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮಿಲಿಟರಿ ಕ್ಯಾಂಟಿನ್‌ನ್ನು ಇಲ್ಲಿಂದ ಸ್ಥಳಾಂತರಿಸುವಂತೆ ಆಗ್ರಹಿಸಿದರು.

ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸರು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಪಿಜಿ ನಡೆಸುವ ಮಹಿಳೆ ಯೊಬ್ಬರನ್ನು ಯುವಕನೊಬ್ಬ ಮದುವೆಯಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ. ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಇನ್ನೊಂದು ಪ್ರಕರಣದಲ್ಲಿ ಕಾಸರಗೋಡಿನ ಯುವಕನೊಬ್ಬ ಮಹಿಳೆಯೊಬ್ಬರಿಗೆ ರಾತ್ರಿ ವೇಳೆ ಮನೆಗೆ ಬಂದು ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡ ಎಸ್‌ಪಿ ಆನಂದ ದೂರಿದರು. ಪ್ರಕರಣದ ಬಗ್ಗೆ ಖುದ್ದಾಗಿ ತನಿಖೆ ನಡೆಸುವುದಾಗಿ ಡಿಸಿಪಿ ಅಂಶುಕುಮಾರ್ ಭರವಸೆ ನೀಡಿದರು.

ಪಿಲಿಕುಳದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಲಾಗಿದೆ. ತಮಗೆ ಜೀವ ಬೆದರಿಕೆ ಇದೆ ಎಂದು ಯುವಕ ಅಶೋಕ್ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಡಿಸಿಪಿ ಭರವಸೆ ನೀಡಿದರು.

ಪೊಲೀಸ್ ಠಾಣೆಗಳಲ್ಲಿ ಕಾಟಾಚಾರಕ್ಕೆ ಕುಂದುಕೊರತೆ ಸಭೆ ನಡೆಯತ್ತಿದೆ ಎಂದು ಎಸ್‌ಪಿ ಆನಂದ ಆಪಾದಿಸಿದರು. ಎಲ್ಲ ಪೊಲೀಸ್ ಠಾಣೆಗಳಲ್ಲೂ ತಿಂಗಳ ಮೂರನೇ ಶನಿವಾರ ದಲಿತರ ಕುಂದುಕೊರತೆ ಸಭೆ ನಡೆಸಬೇಕು ಮತ್ತು ಅವರ ನ್ಯಾಯಯುತ ಬೇಡಿಕೆಗಳಿಗೆ ಪೊಲೀಸರು ಸ್ಪಂದಿಸಬೇಕು ಎಂದು ಡಿಸಿಪಿ ದಿನೇಶ್ ಕುಮಾರ್ ಬಿ. ಪಿ.ಸೂಚಿಸಿದರು.

ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮದ ಬಗ್ಗೆ ಕಳೆದ ಎರಡು ತಿಂಗಳಿನಿಂದ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾದೆ. ಮಾರಾಟ ಮತ್ತು ಸೇವನೆಗೆ ಸಂಬಂಧಿಸಿ ಹಲವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ . ಸಾರ್ವಜನಿಕರ ಸಹಕಾರದೊಂದಿಗೆ ಮಾದಕ ವಸ್ತುಗಳ ಮಾರಾಟ ಜಾಲವನ್ನು ಬೇರುಸಹಿತ ಕಿತ್ತು ಹಾಕುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗಿದೆ ಎಂದು ಡಿಸಿಪಿ ದಿನೇಶ್ ಕುಮಾರ್ ತಿಳಿಸಿದರು.

ದಲಿತ ಮುಖಂಡರಾದ ವಿಶ್ವನಾಥ ಚೆಂಡ್ತಿಮಾರ್ ಅಮಲಜ್ಯೋತಿ, ಮುಕೇಶ್ ಕುಮಾರ್, ಗಿರೀಶ್ ಕುಮಾರ್, ರಾಮಚಂದ್ರ, ಸಂಜೀವ ವಿವಿಧ ವಿಷಯಗಳ ಬಗ್ಗೆ ಸಭೆಯ ಗಮನ ಸೆಳೆದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News