ವಿಪತ್ತು ನಿಯಂತ್ರಣ ಅನುದಾನ ಬಳಕೆಗೆ ಯೋಜನೆ: ದ.ಕ. ಜಿಪಂ ಸಿಇಒ ಡಾ. ಆನಂದ್

Update: 2024-10-22 14:38 GMT

ಮಂಗಳೂರು: ರಾಜ್ಯ ವಿಪತ್ತು ತಗ್ಗಿಸುವಿಕೆ ಅನುದಾನದಿಂದ ಜಿಲ್ಲೆಯಲ್ಲಿ ಪದೇ ಪದೇ ಸಂಭವಿಸುವ ಪ್ರಾಕೃತಿಕ ವಿಕೋಪ ಅನಾಹುತಗಳನ್ನು ಗುರುತಿಸಿ ಅವುಗಳ ಅಪಾಯ ತಗ್ಗಿಸಲು ಅಗತ್ಯ ಯೋಜನೆಗಳನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ದ.ಕ. ಜಿ.ಪಂ. ಸಿಇಒ ಡಾ. ಆನಂದ್ ಕೆ. ತಿಳಿಸಿದ್ದಾರೆ.

ಮಿಟಿಗೇಶನ್ ಅನುದಾನದಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಹಾಗೂ ಕಡಲತೀರದ ನಿರ್ವಹಣಾ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಂಡಮಾರುತ, ಭೂಕುಸಿತ, ಸಿಡಿಲು, ನೆರೆ ಮುಂತಾದ ಪ್ರಾಕೃತಿಕ ವಿಕೋಪಗಳ ಅಪಾಯವನ್ನು ತಗ್ಗಿಸಲು ಈ ಅನುದಾನವನ್ನು ಬಳಸಿ ಕಾಮಗಾರಿ ಕೈಗೆತ್ತಿಕೊಳ್ಳಬಹುದಾಗಿದೆ. ನೆರೆ ನೀರು ವ್ಯವಸ್ಥಿತವಾಗಿ ಹರಿದು ಹೋಗಲು ಸೂಕ್ತ ಡ್ರೈನೇಜ್ ವ್ಯವಸ್ಥೆ, ಅಪಾಯವನ್ನು ಕಡಿಮೆ ಮಾಡಲು ಪ್ರಾಕೃತಿಕ ಯೋಜನೆಗಳನ್ನು ಕಂಡು ಹಿಡಿದು ಜಾಗೃತಿ ಮೂಡಿಸುವುದು ಹಾಗೂ ಸ್ಥಳೀಯ ಮೂಲಸೌಲಭ್ಯಗಳನ್ನು ಸುಧಾರಿಸಿ ಬಲಪಡಿಸುವುದು ಇದರಲ್ಲಿ ಸೇರಿದೆ ಎಂದು ಡಾ. ಆನಂದ್ ತಿಳಿಸಿದರು.

ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡು ಸಂಭಾವ್ಯ ಪ್ರಾಕೃತಿಕ ಅಪಾಯಗಳನ್ನು ತಡೆಗಟ್ಟುವುದು ಹಾಗೂ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಂಭಾವ್ಯ ಅಪಾಯ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಬಗ್ಗೆ ಸಮರ್ಪಕ ವಿವರಣೆಯೊಂದಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಡಾ.ಆನಂದ್ ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್ ಮಾತನಾಡಿ ಜಿಲ್ಲೆಯಲ್ಲಿ ಪದೇ ಪದೇ ನೆರೆ ಮತ್ತು ನೀರು ನಿಂತು ತೊಂದರೆಗಳಾಗುವ ಪ್ರದೇಶಗಳಲ್ಲಿ ವಿಪತ್ತು ತಗ್ಗಿಸುವಿಕೆ ಅನುದಾನವನ್ನು ಬಳಸಿ ಪರಿಹಾರ ಕ್ರಮ ಕೈಗೊಳ್ಳಬೇಕಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ಎಪಿಎಂಸಿ ಮೂಲಕ ಹಾದುಹೋಗುವ ರಾಜ ಕಾಲುವೆ ಸಮರ್ಪಕವಾಗಿಲ್ಲ. ಹಲವು ವರ್ಷಗಳಿಂದ ಕೈಗಾರಿಕಾ ಪ್ರದೇಶದಲ್ಲಿ ನೆರೆ ಉಂಟಾಗುತ್ತಿದೆ. ಅದಲ್ಲದೆ ಮರವೂರು ಕಿಂಡಿ ಅಣೆಕಟ್ಟು, ಹಿನ್ನಿರು ಪ್ರದೇಶ ಆದ್ಯಪಾಡಿಯಲ್ಲಿ ನೆರೆ ಉಂಟಾಗುತ್ತಿದೆ. ಮಿಟಿಗೇಷನ್ ಅನುದಾನದಲ್ಲಿ ಇಲ್ಲಿನ ನೆರೆ ನಿಯಂತ್ರಣಕ್ಕೆ ಅಗತ್ಯ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಕಡಲ ತೀರ ನಿರ್ವಹಣೆ: ಜಿಲ್ಲೆಯ 11 ಸ್ಥಳಗಳಲ್ಲಿ ಕಡಲ ಕೊರೆತ ಸಮಸ್ಯೆ ನಿವಾರಣೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಅಧೀನದ ರಾಷ್ಟ್ರೀಯ ಸಮರ್ಥನೀಯ ಕರಾವಳಿ ನಿರ್ವಹಣಾ ಕೇಂದ್ರವು ಅಧ್ಯಯನ ನಡೆಸಿ 11 ಸ್ಥಳಗಳಲ್ಲಿ ವಿವಿಧ ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಲು ಸೂಚಿಸಿದೆ ಎಂದು ಬಂದರು ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜಟ್ಟಿ ಮತ್ತು ಮರಳು ಪೋಷಣೆಯ ಮೂಲಕ ಕಡಲ ತೀರದ ಕಡಲ ಕೊರೆತವನ್ನು ನಿರ್ವಹಿಸಲು ವರದಿಯಲ್ಲಿ ತಿಳಿಸಲಾಗಿದೆ. ಕಡಲ ತೀರ ನಿರ್ವಹಣೆ ಯೋಜನೆ ರೂಪಿಸದೆ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ರಾಷ್ಟ್ರೀಯ ಹಸಿರು ಪೀಠ ಆದೇಶಿಸಿದೆ. ಈಗಾಗಲೇ ಎಡಿಬಿ ಯೋಜನೆಯ ಟ್ರಂಚ್-3ರಡಿ 355 ಕೋಟಿ ರೂ. ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್. ಆನಂದ್, ಮಂಗಳೂರು ಉಪವಿಭಾಗಾಧಿಕಾರಿ ಹಷರ್ವರ್ಧನ್, ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಸಮನ್ವಯಾಧಿಕಾರಿ ವಿಜಯ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News