ತೆಲಂಗಾಣ ಸರಕಾರದ ಮಾದರಿಯಲ್ಲಿ ರಾಜ್ಯದ ರೈತರ ಸಾಲ ಮನ್ನಾ ಮಾಡಿ: ಕುರುಬೂರು ಶಾಂತಕುಮಾರ್

Update: 2024-02-06 16:10 GMT

ಬೆಂಗಳೂರು: ಕಾಂಗ್ರೆಸ್ ಸರಕಾರವೇ ಇರುವ ತೆಲಂಗಾಣದಲ್ಲಿ ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿ ಕರ್ನಾಟಕದಲ್ಲೂ ಕೂಡ ಮಾಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಮಂಗಳವಾರ ನಗರದ ಫ್ರೀಡಂ ಪಾರ್ಕ್ ಉದ್ಯಾನವನದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆದ ಬೆಂಗಳೂರು ಚಲೋದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಳ್ಳಿಗಳಲ್ಲಿ ರೈತರು ಕೃಷಿಯನ್ನು ತೊರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆತ್ಮಹತ್ಯೆಗಳ ಸರಣಿ ಹೆಚ್ಚುತ್ತಿದೆ, ಬರಗಾಲ ಕಾಡುತ್ತಿದೆ, ರೈತರ ಮಕ್ಕಳನ್ನು ಮದುವೆಯಾಗಲು ಹೆಣ್ಣುಮಕ್ಕಳು ಒಪ್ಪುತ್ತಿಲ್ಲ, ಕೃಷಿ ದುರ್ಬಲವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಪರಿಗಣಿಸಿ ಸರಕಾರ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ಅನುದಾನದ ವಿಚಾರದಲ್ಲಿ ಕೆಸರೆರಚಾಟ ಮಾಡುತ್ತಿವೆ. ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿವೆ. ಹಿಂದಿನ 10 ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನ, ಖರ್ಚು ಮಾಡಿರುವ ಅನುದಾನ ಎಷ್ಟು ಎಂದು ಎರಡು ಸರಕಾರಗಳು ಶ್ವೇತಪತ್ರ ಬಿಡುಗಡೆ ಮಾಡಬೇಕು. ಆಗ ಇವರ ನಿಜ ಬಣ್ಣ ಬಯಲಾಗುತ್ತದೆ. ರೈತರಿಗೆ ಕನಿಕರ ಬೇಕಾಗಿಲ್ಲ, ನೈಜ ಪರಿಹಾರ ಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸಚಿವ ಡಿ.ಸುಧಾಕರ್ ಆಗಮಿಸಿ ಪ್ರತಿಭಟನಾಕಾರರ ಒತ್ತಾಯ ಪತ್ರ ಸ್ವೀಕರಿಸಿದ ಬಳಿಕ ಮಾತನಾಡಿ, ಮುಖ್ಯಮಂತ್ರಿಗಳು ದಿಲ್ಲಿಗೆ ಹೋಗಿದ್ದಾರೆ. ದಿಲ್ಲಿಯ ಜಂತರ್ ಮಂತರ್ ನಲ್ಲಿ ನಡೆಯುವ ದಿಲ್ಲಿ ಚಲೋನಲ್ಲಿ ರೈತರ ಒತ್ತಾಯಗಳ ವಿಚಾರವನ್ನು ಅವರ ಗಮನಕ್ಕೆ ತರುತ್ತೇನೆ. ಬಳಿಕ ಸಮಯವಕಾಶ ಸಿಕ್ಕರೆ ರೈತ ಮುಖಂಡರನ್ನು ಆಹ್ವಾನಿಸಿ ಚರ್ಚಿಸಲಾಗುವುದು ಎಂದರು.

ಗ್ರೀನ್ ಬಡ್ರ್ಸ್ ಠೇವಣಿದಾರರ ಹಣ ಕೊಡಿಸಲು ಎರಡು ದಿನದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಂದ ಸೂಚನೆ ಕೊಡಲಾಗುವುದು ಎಂದು ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಮುಖಂಡರುಗಳಾದ ನಾರಾಯಣ ರೆಡ್ಡಿ, ಹತ್ತಳ್ಳಿ ದೇವರಾಜ್, ಬರಡನ್ಪುರ ನಾಗರಾಜ್, ಜಿ.ವಿ ಲಕ್ಷ್ಮೀದೇವಿ, ಕಿರಗಸೂರ ಶಂಕರ, ಗುರುಸಿದ್ದಪ್ಪ, ದೇವ ಕುಮಾರ್, ಪರಶುರಾಮ್, ರವಿಕುಮಾರ್, ಧರ್ಮರಾಜ್ ಸಾವು, ರಮೇಶ್ ಉಗಾರ್, ಧರ್ಮರಾಜ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News