ಚಿಕ್ಕಮಗಳೂರು | ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಮೃತ್ಯು

Update: 2024-09-26 13:35 GMT

ಸಾಂದರ್ಭಿಕ ಚಿತ್ರ (PC:Meta AI)

ಚಿಕ್ಕಮಗಳೂರು : ಭಾರೀ ಮಳೆ, ಗಾಳಿಗೆ ಭತ್ತದ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತರೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮ ಸಮೀಪದ ಕಾರ್ಲಗದ್ದೆಯಲ್ಲಿ ಗುರುವಾರ ವರದಿಯಾಗಿದೆ.

ಮೃತ ರೈತನನ್ನು ಕಾರ್ಲಗದ್ದೆ ನಿವಾಸಿ ಸತೀಶ್ ಶೆಟ್ಟಿ(44) ಎಂದು ಗುರುತಿಸಲಾಗಿದೆ. ಗುರುವಾರ ಮುಂಜಾನೆ ರೈತ ಸತೀಶ್‍ಶೆಟ್ಟಿ ಭತ್ತದ ಗದ್ದೆಯತ್ತ ತೆರಳಿದ್ದು, ಈ ವೇಳೆ ಗದ್ದೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದಿದ್ದಾರೆ. ಈ ವೇಳೆ ವಿದ್ಯುತ್ ಪ್ರವಹಿಸಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹೊಲಕ್ಕೆ ಹೋಗಿದ್ದ ರೈತ ಸತೀಶ್ ಇನ್ನೂ ಮನೆಗೆ ಬಾರದ ಕಾರಣ ಅನುಮಾನಗೊಂಡ ಕುಟುಂಬಸ್ಥರು ಜಮೀನಿಗೆ ಹೋಗಿ ಹುಡುಕಾಡಿದಾಗ ರೈತ ಸತೀಶ್ ವಿದ್ಯುತ್ ತಂತಿ ತುಳಿದು ಮೃತಪಟ್ಟಿರುವುದು ತಿಳಿದು ಬಂದಿದೆ. ಮೂಡಿಗೆರೆ ತಾಲೂಕಿನಾದ್ಯಂತ ಬುಧವಾರ ರಾತ್ರಿ ಭಾರೀ ಮಳೆ ಸುರಿದಿದ್ದು, ಮಳೆ-ಗಾಳಿಯಿಂದಾಗಿ ವಿದ್ಯುತ್ ತಂತಿ ತುಂಡಾಗಿ ಭತ್ತದ ಗದ್ದೆಯಲ್ಲಿ ಬಿದ್ದಿದೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News