ಚಿಕ್ಕಮಗಳೂರು| ಮರಕ್ಕೆ ಕಟ್ಟಿ ಹಾಕಿ ಯುವಕನಿಗೆ ಹಲ್ಲೆ ಪ್ರಕರಣ: ತಲೆಮರೆಸಿಕೊಂಡಿದ್ದ ಐವರು ಆರೋಪಿಗಳ ಬಂಧನ

Update: 2024-02-08 14:59 GMT

ಚಿಕ್ಕಮಗಳೂರು: ಕೆಲಸದ ಬಾಕಿ ಹಣ ಕೇಳಿದ್ದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಹೇಶ್, ವಿಠಲ್, ಸಿರಿಲ್, ಸುನಿಲ್, ಮಂಜು ಬಂಧಿತ ಆರೋಪಿಯಾಗಿದ್ದಾರೆ. ಕಳೆದ ಫೆ.2ರಂದು ಸತೀಶ್ ಎಂಬಾತನನ್ನು ಕೊಪ್ಪ ಪಟ್ಟಣ ಸಮೀಪದಲ್ಲಿರುವ ಅಕೇಶಿಯಾ ಪ್ಲಾಂಟೇಶ್ ಒಂದಕ್ಕೆ ಕರೆತಂದಿದ್ದ ಆರೋಪಿಗಳು ಆತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಲ್ಲದೇ ಜೀವಬೆದರಿಕೆಯನ್ನೂ ಹಾಕಿದ್ದರು ಎಂದು ಹೇಳಲಾಗಿದೆ.

ಸತೀಶ್ ಬೆಂಗಳೂರಿನಲ್ಲಿ ಆರೋಪಿ ಮಂಜು ಎಂಬಾತನ ಸಹೋದರ ಹೊಟೇಲ್‍ನಲ್ಲಿ ಕೆಲಸಕ್ಕಿದ್ದ. ನಂತರ ಮನಸ್ತಾಪದಿಂದ ಕೆಲಸ ಬಿಟ್ಟು ಬಂದಿದ್ದ. ನಂತರ ಹೊಟೇಲ್ ಮಾಲಕನಿಗೆ ಕರೆ ಮಾಡಿ ಬಾಕಿ ಸಂಬಳ ಕೊಡುವಂತೆ ಪದೇ ಪದೇ ಒತ್ತಡ ಹಾಕುತ್ತಿದ್ದ ಎನ್ನಲಾಗಿದ್ದು, ಈ ವಿಚಾರವನ್ನು ಹೊಟೇಲ್ ಮಾಲಕ ತನ್ನ ಸಹೋದರನ ಬಳಿ ಹೇಳಿಕೊಂಡಿದ್ದ ಎನ್ನಲಾಗಿದೆ.

ಫೆ.2ರಂದು ಹೊಟೇಲ್ ಮಾಲಕನ ಸಹೋದರ ಮಂಜು, ಬಾಕಿ ವೇತನ ನೀಡುವುದಾಗಿ ಹೇಳಿ ಸತೀಶ್‍ನನ್ನು ಕೊಪ್ಪ ಪಟ್ಟಣಕ್ಕೆ ಕರೆಸಿಕೊಂಡಿದ್ದ. ಅಲ್ಲಿ ಸತೀಶ್‍ಗೆ ಮದ್ಯಪಾನ ಮಾಡಿಸಿ ಬೈಕ್‍ನಲ್ಲಿ ಪಟ್ಟಣದ ಹೊರವಲಯದಲ್ಲಿದ್ದ ಪ್ಲಾಟೇಶನ್ ಒಂದಕ್ಕೆ ಕರೆತಂದು ಹಗ್ಗದಿಂದ ಕಟ್ಟುಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ಘಟನೆಯನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೆಂದು ಸತೀಶ್ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಾನೆ.

ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದ ಆರೋಪಿಗಳ ಬಂಧನಕ್ಕೆ ಎಸ್ಪಿ ಡಾ.ವಿಕ್ರಮ್ ಅಮಟೆ ಪೊಲೀಸರ ತಂಡ ನೇಮಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News