ಕರಸೇವಕರ ಬಂಧನ ಖಂಡಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ; ಠಾಣೆಗೆ ನುಗ್ಗಲು ಯತ್ನಿಸಿದ ವಿಪಕ್ಷ ನಾಯಕ ಅಶೋಕ್ ಸೇರಿ 150 ಮಂದಿ ವಶಕ್ಕೆ

Update: 2024-01-03 12:30 GMT

ಹುಬ್ಬಳ್ಳಿ: ನಗರದಲ್ಲಿ ಕರಸೇವಕರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಪೋಲಿಸ್ ಠಾಣೆಗೆ ನುಗ್ಗಲು ಯತ್ನಿಸಿದಾಗ ತಡೆದ ಪೊಲೀಸರು, ವಿಪಕ್ಷ ನಾಯಕ ಆರ್. ಅಶೋಕ್, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ ಆರ್ ಪಾಟೀಲ್ ಸೇರಿದಂತೆ 150 ಜನರನ್ನು ವಶಕ್ಕೆ ಪಡೆದರು.

ಬಾಬರಿ ಮಸೀದಿ ಧ್ವಂಸ ಸಂದರ್ಭದ ಗಲಭೆಯ ಆರೋಪಿ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಇಲ್ಲಿನ ನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಯಿತು.

ಪ್ರತಿಭಟನೆ ವೇಳೆ ಮಾತನಾಡಿದ ಆರ್ ಅಶೋಕ್, ರಾಮ ಮಂದಿರ ನಿರ್ಮಿಸಬಾರದು ಎನ್ನುವುದು ಕಾಂಗ್ರೆಸ್ ಹುನ್ನಾರ. ಸಿಎಂ ಸಿದ್ದರಾಮಯ್ಯ ಅವರು ಹಿಂದೂ‌-ಮುಸ್ಲಿಮ್ ನಡುವೆ ಬೆಂಕಿ ಹಚ್ಚುವ ʼಅಂಬಾಸಿಡರ್ʼ ಇದ್ದಂತೆ. ಅದಕ್ಕಾಗಿ ರಾಜ್ಯದಲ್ಲಿ ಇಂತಹ ಗದ್ದಲ ನಡೆಯುತ್ತಿದೆ ಎಂದು ಹೇಳಿದರು.

'ರಾಜ್ಯದಲ್ಲಿ 69 ಸಾವಿರ ಎಲ್.ಪಿ.ಆರ್. ಪ್ರಕರಣಗಳಿವೆ? ಈವರೆಗೆ ಎಷ್ಟು ಮಂದಿ ಆರೋಪಿಯನ್ನು ಬಂಧಿಸಿದ್ದೀರಿ? ರಾಮಮಂದಿರ ಉದ್ಘಾಟನೆ ಕಾಂಗ್ರೆಸ್ ಗೆ ಹೊಟ್ಟೆಉರಿ ಆಗುತ್ತಿದೆ. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ ಬ್ಯಾಂಕ್‌ ನ ಚಿಂತನೆ ಆರಂಭವಾಗಿದೆ. ಅದಕ್ಕಾಗಿ ರಾಮ, ಆಂಜನೇಯ ಭಜನೆ ಮಾಡಬಾರದು ಎಂದು, ಮುಸ್ಲಿಮರನ್ನು ಓಲೈಸುವ ಹುನ್ನಾರ ನಡೆಸಿದ್ದಾರೆ' ಎಂದು ಅಶೋಕ್ ಆರೋಪಿಸಿದರು.

ಪೊಲೀಸ್ ಠಾಣೆ ಮುತ್ತಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಮಾತನಾಡಿ, ಮುನ್ನೆಚ್ಚರಿಕೆ ಕ್ರಮವಾಗಿ 150 ಜನರನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News