ಹಾಸನ | ಜಾತಕ ದೋಷ ನಿವಾರಿಸುವುದಾಗಿ ನಂಬಿಸಿ ಯುವತಿಯ ಅತ್ಯಾಚಾರ: ಆರೋಪಿ ಅರ್ಚಕನ ಬಂಧನ

Update: 2024-07-31 10:07 GMT

ಹಾಸನ, ಜು,31: ಜಾತಕ ದೋಷ ನಿವಾರಿಸುವುದಾಗಿ ನಂಬಿಸಿ ಪರಿಚಿತ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿ ಹಾಸನದ ಪುರದಮ್ಮ ದೇವಾಲಯದ ಅರ್ಚಕ ದಯಾನಂದ ಎಂಬಾತನನ್ನು ಬೆಂಗಳೂರಿನ ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾಗಲಗುಂಟೆ ಸಮೀಪದ ನೆಲೆಸಿರುವ ಸಂತ್ರಸ್ತೆಯನ್ನು ಅರ್ಚಕ ದಯಾನಂದ ಲೈಂಗಿಕವಾಗಿ ಶೋಷಿಸಿದ್ದ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಬಾಗಲಗುಂಟೆ ಠಾಣೆ ಪೊಲೀಸರು ಆರೋಪಿಯನ್ನು ಮಂಗಳವಾರ ಬಂಧಿಸಿರುವುದಾಗಿ ವರದಿಯಾಗಿದೆ.

ಪುರದಮ್ಮ ದೇವಾಲಯದಲ್ಲಿ ದಯಾನಂದ ಹಲವು ವರ್ಷಗಳಿಂದ ಪೂಜಾರಿಯಾಗಿದ್ದು, ದೇವರ ಹೆಸರು ಬಳಸಿಕೊಂಡು ಮಾಟ ಮಂತ್ರ ಹಾಗೂ ವಶೀಕರಣ ಹೀಗೆ ಅನಾಚಾರ ಆಚರಣೆಗಳಲ್ಲಿ ಆತ ನಿರತನಾಗಿದ್ದ ಎಂಬ ಆರೋಪಗಳು ಕೇಳಿಬಂದಿವೆ.

ಇನ್ನು ಸಂತ್ರಸ್ತೆ ಅರಸೀಕೆರೆ ತಾಲೂಕಿನವಳಾಗಿದ್ದು, ನಗರದ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ಬಾಗಲಗುಂಟೆ ಸಮೀಪದ ಪಿಜಿಯಲ್ಲಿ ನೆಲೆಸಿದ್ದಾಳೆ. ಪುರದಮ್ಮ ದೇವರ ಭಕ್ತಿಯಾಗಿರುವ ಸಂತ್ರಸ್ತೆ, ದೇವಾಲಯಕ್ಕೆ ಭೇಟಿ ನೀಡಿದ್ದಾಗ ದಯಾನಂದನ ಪರಿಚಯವಾಗಿತ್ತು. ಕೆಲ ತಿಂಗಳ ಹಿಂದೆ ದೇಗುಲಕ್ಕೆ ಹೋಗಿದ್ದಾಗ ಆಕೆಯ ಹಸ್ತರೇಖೆ ನೋಡಿ ನಿನ್ನ ಜಾತಕದಲ್ಲಿ ದೋಷವಿದೆ. ಈ ದೋಷ ನಿವಾರಣೆಗೆ ವಿಶೇಷ ಪೂಜೆ ಮಾಡಬೇಕಿದೆ. ಇದಕ್ಕೆ ಹಣ ವ್ಯಯವಾಗಲಿದೆ ಎಂದು ಆತ ಹೇಳಿದ್ದ. ಅದರಂತೆ ಆಕೆ, 10 ಸಾವಿರ ರೂ. ಕೊಟ್ಟಿದ್ದಳು. ಆಗ ನಿಂಬೆಹಣ್ಣು ಮಂತ್ರಿಸಿ ಪ್ರತಿದಿನ ರಾತ್ರಿ ಮಲಗುವಾಗ ತಲೆದಿಂಬಿನಡಿಯಿಟ್ಟು ಮಲಗುವಂತೆ ಸಂತ್ರಸ್ತೆಗೆ ಆರೋಪಿ ಹೇಳಿದ್ದ. ಬಳಿಕ ಮೇ 24ರಂದು ಸಂತ್ರಸ್ತೆಗೆ ಕರೆ ಮಾಡಿದ್ದ ದಯಾನಂದ, ಎಚ್ಎಸ್ ಆರ್ ಲೇಔಟ್ನಲ್ಲಿ ಪರಿಚಿತರ ಮನೆಯಲ್ಲಿ ಪುರದಮ್ಮ ದೇವಿಯ ಪೂಜೆಗೆ ಆಹ್ವಾನಿಸಿದ್ದ. ಆ ಪೂಜೆಗೆ ಬಂದರೆ ಮಂತ್ರಿಸಿದ ತಾಳಿ ಕೊಡುವುದಾಗಿ ಆರೋಪಿ ಆಮಿಷವೊಡ್ಡಿದ್ದ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.

ಕಾರಿನಲ್ಲೇ ಅತ್ಯಾಚಾರ: ಸಂತ್ರಸ್ತೆಯ ಪಿಜಿ ಬಳಿ ಹೋಗಿ ಆಕೆಯನ್ನು ಪೂಜೆಗೆಂದು ಕಾರಿನಲ್ಲಿ ಕರೆದೊಯ್ದ ಆರೋಪಿ ದಯಾನಂದ ದಾರಿಮಧ್ಯೆ ಕಾರಿನಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯದ ಬಗ್ಗೆ ಯಾರಿಗಾದರೂ ಬಾಯ್ಬಿಟ್ಟರೆ ನಿನ್ನ ಮಾರ್ಫ್ ಮಾಡಿದ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದ. ಬಳಿಕ ಸಂತ್ರಸ್ತೆಯನ್ನು ಬ್ಲ್ಯಾಕ್ ಮೇಲ್ ಮಾಡಿ 40 ಸಾವಿರ ಸುಲಿಗೆ ಮಾಡಿದ ಆರೋಪಿ, ಆಕೆ ಕೆಲಸ ಮಾಡುವ ಕಂಪನಿ ಬಳಿಗೆ ತೆರಳಿ ಕೂಡ ಬೆದರಿಸಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

ಸಂತ್ರಸ್ತೆಯನ್ನು ಬಳಿಕ ಹೋಟೆಲ್ ಗೆ ಕರೆದೊಯ್ದು ದಯಾನಂದ ಲೈಂಗಿಕವಾಗಿ ಶೋಷಣೆ ಮಾಡಿದ್ದ ಎಂದು ಎಫ್ ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News