ಹೊಳೆನರಸೀಪುರ | ಜಾನುವಾರುಗಳ ಕಳವು ಆರೋಪ: ಮೂವರನ್ನು ಕಂಬಕ್ಕೆ ಕಟ್ಟಿ ಗ್ರಾಮಸ್ಥರಿಂದ ಥಳಿತ

ಸಾಂದರ್ಭಿಕ ಚಿತ್ರ
ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಯ ನಗರನಹಳ್ಳಿ ಹಾಗೂ ಮೂಡಲ ಮಾಯಿಗೌಡನಹಳ್ಳಿ ಗ್ರಾಮಗಳಲ್ಲಿ ಜಾನುವಾರುಗಳನ್ನು ಕಳುವು ಮಾಡಿ ಪರಾರಿ ಆಗಲು ಯತ್ನಿಸಿದ ಆರೋಪದಡಿ ಮೂವರನ್ನು ಗ್ರಾಮದ ಜನರೇ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ಮುಂಜಾನೆ ನಡೆದಿರುವುದು ವರದಿಯಾಗಿದೆ.
ಬಂಧಿತರನ್ನು ಭೇರ್ಯ ಗ್ರಾಮದ ಮುಹಮ್ಮದ್ ಶಫೀ, ಜಬಿವುಲ್ಲಾ ಮತ್ತು ಪುನೀತ್ ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಮುಂಜಾನೆ ಟಾಟಾ ಏಸ್ ವಾಹನದಲ್ಲಿ ಮೂಡಲ ಮಾಯಿಗೌಡನ ಹಳ್ಳಿಯಲ್ಲಿ ಜಾನುವಾರುಗಳನ್ನು ಕಳುವು ಮಾಡಿಕೊಂಡು ನಗರನಹಳ್ಳಿ ಗ್ರಾಮದಲ್ಲಿ ಎಮ್ಮೆಗಳನ್ನು ಕಳವು ಮಾಡುವ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಅವರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಥಳಿಸಿ ಹಳ್ಳಿಮೈಸೂರು ಠಾಣೆ ಪೋಲಿಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಶಾಲು ಹಾಗು ಜಿಲ್ಲಾ ಪೊಲೀಸ್ ತಮ್ಮಯ್ಯ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮವಹಿಸಿದ್ದಾರೆ.
ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.