ಶಿಕ್ಷಣ ವ್ಯಕ್ತಿಗಳನ್ನು ದೇಶದ ಸಂಪತ್ತನ್ನಾಗಿ ಪರಿವರ್ತಿಸಲಿ : ಯು.ಟಿ.ಖಾದರ್

ಮಡಿಕೇರಿ : ಶಿಕ್ಷಣದ ಗುರಿ ಕೇವಲ ಅಂಕಗಳಿಗೆ, ರ್ಯಾಂಕ್ ಗಳಿಕೆಗೆ ಸಿಮೀತವಾಗಬಾರದು. ಅದರ ಜೊತೆಯಲ್ಲಿ ಆದರ್ಶ ವ್ಯಕ್ತಿಗಳಾಗಿ ಸಮಾಜಕ್ಕೆ ಮತ್ತು ದೇಶಕ್ಕೆ ಅಮೂಲ್ಯ ಸಂಪತ್ತಾಗಿ ಪರಿವರ್ತನೆಯಾಗಬೇಕು. ಈ ರೀತಿಯ ಮಾರ್ಪಾಡು ಮಾಡುವವರು ಮತ್ತು ಹೊಂದುವವರು ನಿಜವಾದ ದೇಶಪ್ರೇಮಿಗಳು ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.
ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಗರದ ಮಹದೇವಪೇಟೆಯಲ್ಲಿ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದ ಸಂಪರ್ಕದ ಕೊಂಡಿಯಾಗಿರುವ ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ ನ ದೊಡ್ಡ ಉದ್ದೇಶ ಯಶಸ್ವಿಯಾಗಲಿ ಎಂದು ಹಾರೈಸಿದರು. ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸರ್ವಜನಾಂಗದವರಿಗೆ ಪ್ರಯೋಜನ ಆಗಬೇಕು, ಈ ಸಂಸ್ಥೆ ಇತರರಿಗೆ ಪ್ರೇರಣೆಯಾಗಬೇಕು. ಸರಕಾರದಿಂದ ಯಾವುದೇ ಸಂದರ್ಭದಲ್ಲಿ ಸಹಕಾರ ಸಿಗಲಿದೆ ಎಂದರು.
ನಂತರ ಕಾವೇರಿ ಹಾಲ್ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಉಮ್ಮತ್ ಒನ್ ಕೊಡಗು ಸಂಸ್ಥೆ ಸಮಾಜಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಇರಬೇಕು. ಜಾತಿ ಧರ್ಮ, ಭೇದಭಾವವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯೊಂದಿಗೆ ತಾವು ಇರುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಮಾತನಾಡಿ, ಮಡಿಕೇರಿ ಕೇಂದ್ರದಲ್ಲಿ ಸುಸಜ್ಜಿತವಾದ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಆರಂಭಗೊಂಡಿದ್ದು, ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸಮಾಜದ ಸರ್ವರೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ನಿವೃತ್ತ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ಶಿಕ್ಷಣ ನಮ್ಮನ್ನು ಬಲಿಷ್ಠರನ್ನಾಗಿ ಮಾಡಬೇಕು, ಯಾವುದೇ ಆಕರ್ಷಣೆ, ಆಮಿಷಗಳಿಗೆ ಒಳಗಾಗದೆ ನಿರ್ದಿಷ್ಟ ಗುರಿಯ ಕಡೆಗೆ ಕೊಂಡೊಯ್ಯಬೇಕು ಎಂದು ತಿಳಿಸಿದರು.
ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಆರಂಭಗೊಂಡಿರುವ ಸಮುದಾಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಮುಂದಿನ ದಿನಗಳಲ್ಲಿ ಪ್ರತಿ ತಾಲೂಕುಗಳಿಗೂ ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಮಾತನಾಡಿ, ಉತ್ತಮ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು, ಸ್ವಾರ್ಥವನ್ನು ಬಿಟ್ಟು ಎಲ್ಲ ಸಮುದಾಯವನ್ನು ಸೇರಿಸಿಕೊಂಡು ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಭಾರಧಿಯಾರ್ ಯುನಿವರ್ಸಿಟಿಯ ಸಿಂಡಿಕೇಟ್ ಸದಸ್ಯ ಡಾ.ರಾಶೀದ್ ಗಝಾಲಿ ಮಾತನಾಡಿ, ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಛಲದೊಂದಿಗೆ ಪರಿಶ್ರಮಪಟ್ಟರೆ ಎಲ್ಲವೂ ಸಾಧ್ಯ, ಎಂದರು.
ಪುಣೆಯ ಅನಿಶ್ ಡೆಫೆನ್ಸ್ ಕ್ಯಾರಿಯರ್ ಇನ್ಸ್ಟಿಟ್ಯೂಟ್ನ ಸ್ಥಾಪಕ ನಿರ್ದೇಶಕ ಅನಿಶ್ ಕುಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದರು.
ಸಿ.ಎಂ.ಉಸ್ತಾದ್ ಪ್ರಾರ್ಥನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಬೀದರ್ನ ಶಾಹಿದ್ ಗ್ರೂಫ್ ಆಫ್ ಇನ್ಸ್ಟಿಟ್ಯೂಟ್ ಸಿಇಒ ಡಾ.ತೌಸೀಫ್ ಅಹ್ಮದ್, ಪುತ್ತೂರು ಕಮ್ಯೂನಿಟಿ ಸೆಂಟರ್ ಸ್ಥಾಪಕ ಹನೀಫ್ ಪುತ್ತೂರು, ಎಂ.ಎಫ್.ಐ.ಎಫ್.ನ ಉಪಾಧ್ಯಕ್ಷ ಕೆ.ಎಂ.ಮುಸ್ತಫ, ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನ ಪ್ರಮುಖ ಕೆ.ಬಿ.ರಿಯಾಝ್ ಅಹ್ಮದ್ ಸೇರಿದಂತೆ ಮತ್ತಿತರ ಗಣ್ಯರು, ಉಮ್ಮತ್ ಒನ್ ಕೊಡಗು ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಉಮ್ಮತ್ ಒನ್ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪಿ.ಕೆ.ಖಾಲಿದ್ ಸ್ವಾಗತಿಸಿದರು, ಶಿಕ್ಷಣ ತಜ್ಞ ಮಂಗಳೂರಿನ ರಫೀಕ್ ಮಾಸ್ಟರ್ ನಿರೂಪಿಸಿದರು. ಆಕ್ಸ್ಫರ್ಡ್ ಶಾಲೆಯ ವಿದ್ಯಾರ್ಥಿಗಳು ಹಾಡಿದರು. ಕಾರ್ಯಕ್ರಮಕ್ಕೂ ಮುನ್ನ ಯು.ಟಿ.ಖಾದರ್ ಹಾಗೂ ಉಮ್ಮತ್ ಒನ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಎಂ.ಬಿ.ಬಶೀರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.