ಸ್ನೇಹಿತನ ಹುಟ್ಟುಹಬ್ಬಕ್ಕೆ ತೆರಳಲು ಮಿತಿಮೀರಿದ ವೇಗ | ಬಿಎಂಡಬ್ಲ್ಯೂ ಕಾರು ಡಿಕ್ಕಿ ; ಇಬ್ಬರು ಯುವತಿಯರು ಬಲಿ

Update: 2024-09-16 17:54 GMT

ಇಂದೋರ್: ಸ್ನೇಹಿತನ ಹುಟ್ಟುಹಬ್ಬದ ಔತಣ ಕೂಟಕ್ಕೆ ತಡವಾಗಬಾರದೆಂಬ ಧಾವಂತದಲ್ಲಿ ತನ್ನ ಬಿಎಂಡಬ್ಲ್ಯೂ ಕಾರನ್ನು ಮಿತಿ ಮೀರಿದ ವೇಗದಲ್ಲಿ ಚಲಾಯಿಸುತ್ತಿದ್ದ ಚಾಲಕನೊಬ್ಬ ಇಬ್ಬರು ಮಹಿಳಾ ಸ್ಕೂಟರ್ ಸವಾರರನ್ನು ಬಲಿ ತೆಗೆದುಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಕಾರು ಅಪಘಾತದಲ್ಲಿ ಮೃತಪಟ್ಟ ಮಹಿಳೆಯರನ್ನು ಲಕ್ಷ್ಮಿ ತೋಮರ್ (24) ಹಾಗೂ ದೀಕ್ಷಾ ಜಡೋನ್ (25) ಎಂದು ಗುರುತಿಸಲಾಗಿದೆ. ಈ ಇಬ್ಬರು ಪ್ರಸಿದ್ಧ ಖಜ್ರಾನಾ ಗಣೇಶ ದೇವಾಲಯದ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದರು ಎನ್ನಲಾಗಿದೆ.

ಇದೇ ವೇಳೆ ತನ್ನ ಸ್ನೇಹಿತನ ಹುಟ್ಟು ಹಬ್ಬದ ಔತಣ ಕೂಟಕ್ಕೆ ತಡವಾಗಬಾರದೆಂದು ಮಿತಿ ಮೀರಿದ ವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದ ಗಜೇಂದ್ರ ಪ್ರತಾಪ್ ಸಿಂಗ್ (28) ಎಂಬಾತ, ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡು ಅವರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಯುವತಿಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವರದಿಗಳ ಪ್ರಕಾರ, ಘಟನಾ ಸ್ಥಳದಿಂದ ಪರಾರಿಯಾಗಿದ್ದ ಚಾಲಕ ಗಜೇಂದ್ರ ಪ್ರತಾಪ್ ಸಿಂಗ್ ನನ್ನು ಸೆರೆ ಹಿಡಿದಿರುವ ಪೊಲೀಸರು ಆತನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಹಾಗೂ ಇನ್ನಿತರ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News