ಶಿವಮೊಗ್ಗ: ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ದುರಂತ; ಓರ್ವ ಪೊಲೀಸ್‌ ವಶಕ್ಕೆ

Update: 2024-10-21 06:01 GMT

ಶಿವಮೊಗ್ಗ: ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಎನ್‌.ಟಿ.ರಸ್ತೆ ಜಂಕ್ಷನ್‌ನಲ್ಲಿರುವ ಕಾರ್ತಿಕ್‌ ಮೋಟರ್ಸ್‌ ಶೋ ರೂಂನಲ್ಲಿ‌ ನಡೆದಿದೆ.

ಬೆಂಕಿಯಿಂದಾಗಿ ಶೋ ರೂಂನಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದೆ. ಅಲ್ಲದೆ ಒಳಾಂಗಣ ವಿನ್ಯಾಸ ಸುಟ್ಟು ಹೋಗಿದೆ. ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆ ಶೋ ರೂಂ ಮುಂಭಾಗ ದೊಡ್ಡ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹಾಗಾಗಿ ಎನ್‌.ಟಿ.ರಸ್ತೆ ಮತ್ತು ಬೈಪಾಸ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಸಂಚಾರ ಠಾಣೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಡಬೇಕಾಯಿತು.

ಮಾಜಿ ಉದ್ಯೋಗಿ ವಶಕ್ಕೆ:

ಈ ಘಟನೆ ಸಂಬಂಧ ಮಾಜಿ ಉದ್ಯೋಗಿಯೇ ಶೋ ರೂಂಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದೆ. ಓರ್ವ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಆತನ ವಿಚಾರಣ ನಡೆಯುತ್ತಿದೆ.


Delete Edit


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News