ಆರಗ ಜ್ಞಾನೇಂದ್ರ ವಿರುದ್ಧ ಮಾನನಷ್ಟ ಮೊಕದ್ದಮೆ: ಕಿಮ್ಮನೆ ರತ್ನಾಕರ್ ಎಚ್ಚರಿಕೆ

Update: 2023-08-03 13:52 GMT

ಬೆಂಗಳೂರು, ಆ.3: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಈಶ್ವರ್ ಖಂಡ್ರೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರೆ ಸಾಲದು, ನೇರವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಿ, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೃಹ ಸಚಿವರಾಗಿ, ಎಂಪಿಎಂಸಿ ಅಧ್ಯಕ್ಷರಾಗಿ ಮತ್ತು ಅನೇಕ ಜವಾಬ್ದಾರಿಯುತ ಸ್ಥಾನಗಳನ್ನು ಆರಗ ಜ್ಞಾನೇಂದ್ರ ನಿಭಾಯಿಸಿದ್ದಾರೆ. ಇಂತಹ ವ್ಯಕ್ತಿ ಬಾಯಿ ತಪ್ಪಿನಿಂದ ಹೇಳಿದೆ, ಕಣ್ತಪ್ಪಿನಿಂದ ಹೇಳಿದೆ ಎನ್ನುವ ವಯಸ್ಸು ಅವರದಲ್ಲ ಎಂದರು.

ಬಿಜೆಪಿಯ ಯಾವುದೇ ನಾಯಕರು ಆರಗ ಜ್ಞಾನೇಂದ್ರ ಅವರ ಈ ಹೇಳಿಕೆಯನ್ನು ಏಕೆ ಖಂಡಿಸುತ್ತಿಲ್ಲ, ಅವರ ಮನಸ್ಸಿನಲ್ಲಿಯೂ ಅದೇ ಆಲೋಚನೆ ಇದೆಯೇ? ಮೋದಿಯವರು ಇದೇ ಮನಸ್ಥಿತಿ ಹೊಂದಿರುವವರೆ, ಏಕೆಂದರೆ ಅವರ ಸಂಪುಟದ ಅನೇಕ ಸದಸ್ಯರು ಈ ತರಹದ ಹೇಳಿಕೆ ನೀಡಿದಾಗಲೂ ಸುಮ್ಮನಿದ್ದರು ಎಂದು ಅವರು ಟೀಕಿಸಿದರು.

ಅನಂತಕುಮಾರ್ ಹೆಗಡೆ ‘ನಾವು ಸಂವಿಧಾನ ಬದಲಾಯಿಸಲು ಬಂದಿದ್ದೇವೆ’ ಎಂದು ನೀಡಿದ ಹೇಳಿಕೆಯಿಂದ ಹಿಡಿದು ಯತ್ನಾಳ್ ತನಕ ಬಿಜೆಪಿಯವರು ಇಂತಹ ಸಂವಿಧಾನ ವಿರೋಧಿ ಹೇಳಿಕೆ ನೀಡಿದರು ಪ್ರಧಾನಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಮ್ಮನೆ ರತ್ನಾಕರ್ ಆಕ್ರೋಶ ವ್ಯಕ್ತಪಡಿಸಿದರು.

ನಾನು ಖರ್ಗೆಯವರ ಹೆಸರು ತೆಗೆದುಕೊಂಡಿಲ್ಲ ಎಂದು ಆರಗ ಜ್ಞಾನೇಂದ್ರ ಸುಳ್ಳು ಹೇಳಿದ್ದಾರೆ. ಈ ಬಗ್ಗೆ ಸ್ಪೀಕರ್‍ಗೆ ದೂರು ಸಲ್ಲಿಸಲಾಗುವುದು, ನ್ಯಾಯಾಲಯದ ಮೊರೆಯೂ ಹೋಗಲಾಗುವುದು. ಕುವೆಂಪು, ಯು.ಆರ್.ಅನಂತಮೂರ್ತಿ, ಗೋಪಾಲಗೌಡರು, ಬದ್ರಿನಾರಾಯಣ್ ಅವರಂತಹ ಸಂಸದೀಯ ಪಟುಗಳು ಗೆದ್ದು ಬಂದಂತಹ ಕ್ಷೇತ್ರ ಅದು. ಇಂತಹ ಕ್ಷೇತ್ರಕ್ಕೆ ಆರಗ ಜ್ಞಾನೇಂದ್ರ ಅವಮಾನ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಕಸ್ತೂರಿ ರಂಗನ್ ವಿಚಾರಕ್ಕೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯವರೆ ಒಪ್ಪಿಗೆ ನೀಡಿದ್ದಾರೆ. ನಮ್ಮ ಕಾಂಗ್ರೆಸ್ ಸರಕಾರ ಇದಕ್ಕೆ ವಿರೋಧ ಮಾಡಿತ್ತು. ತೀರ್ಥಹಳ್ಳಿಯ ಜನರನ್ನು ಮಂಗ ಮಾಡಲು ಇಲ್ಲಿ ವಿರೋಧ ಮಾಡುವುದು, ಕೇಂದ್ರದಲ್ಲಿ ಒಪ್ಪಿಗೆ ನೀಡುವ ಕಣ್ಣಾಮುಚ್ಚಲೆ ಆಡುತ್ತಿದ್ದಾರೆ ಎಂದು ಕಿಮ್ಮನೆ ರತ್ನಾಕರ್ ದೂರಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News