ದ್ವಿತೀಯ ಪಿಯುಸಿ - 2ರ ಪರೀಕ್ಷೆ ಫಲಿತಾಂಶದ ನಂತರವೇ ಸಿಇಟಿ ಫಲಿತಾಂಶ : ಕೆಇಎ ಸ್ಪಷ್ಟನೆ

Update: 2024-05-20 12:46 GMT

ಬೆಂಗಳೂರು: ದ್ವಿತೀಯ ಪಿಯುಸಿಯ ಎರಡನೆ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ ನಂತರವೇ ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ-24) ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಸ್ಪಷ್ಟಪಡಿಸಿದ್ದಾರೆ.

ಸೋಮವಾರದಂದು ಪ್ರಕಟನೆ ಹೊರಡಿಸಿರುವ ಅವರು, ಮೇ 20ರಂದೇ ಫಲಿತಾಂಶ ಪ್ರಕಟಿಸುತ್ತಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವುದು ಸತ್ಯಕ್ಕೆ ದೂರವಾಗಿದೆ. ದ್ವಿತೀಯ ಪಿಯುಸಿಯ ವಿಜ್ಞಾನ ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆದ ಶೇ.50ರಷ್ಟು ಅಂಕಗಳನ್ನು ಸೇರಿಸಿಯೇ ಸಿಇಟಿ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಬೇಕಾಗುತ್ತದೆ. ಇದು ಮೊದಲಿನಿಂದಲೂ ಪಾಲಿಸುತ್ತಿರುವ ನಿಯಮವಾಗಿದೆ ಎಂದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಮೊದಲ ಎರಡು ಪರೀಕ್ಷೆಗಳ ಪೈಕಿ ಯಾವುದರಲ್ಲಿ ಹೆಚ್ಚು ಅಂಕ ಬಂದಿದೆಯೊ ಅವುಗಳನ್ನೇ ಸಿಇಟಿ ರ್ಯಾಂಕ್‍ಗೆ ಪರಿಗಣಿಸಬೇಕಾಗುತ್ತದೆ. ಹೀಗಾಗಿ ಎರಡನೇ ಪರೀಕ್ಷೆಯ ಫಲಿತಾಂಶಕ್ಕಾಗಿ ಕೆಇಎ ಕಾಯುವುದು ಅನಿವಾರ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ.

ಬಿಎಸ್ಸಿ ಕೃಷಿ ಪದವಿಗೆ ಪ್ರವೇಶ ನೀಡಲು ಕೃಷಿ ವಿಶ್ವವಿದ್ಯಾಲಯ ಕೃಷಿ ಪ್ರಾಯೋಗಿಕ ಪರೀಕ್ಷೆಯನ್ನು ಮೇ 25ಕ್ಕೆ ನಿಗದಿ ಮಾಡಿದ್ದು, ಅದರ ಫಲಿತಾಂಶ ಬರಬೇಕಾಗುತ್ತದೆ. ಇದು ಸಿಇಟಿ ರ್ಯಾಂಕ್‍ಗೂ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News