ದೇಶವನ್ನು ದಿವಾಳಿ ಮಾಡಿದ್ದು ಮೋದಿ ಸರ್ಕಾರ: ಸಿಎಂ ಸಿದ್ದರಾಮಯ್ಯ

Update: 2023-08-05 09:47 GMT

ಕಲಬುರಗಿ: ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳನ್ನು‌ ಈಡೇರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದರ ಜೊತೆಗೆ ಮೂಲಕ ಪ್ರಣಾಳಿಕೆಯಲ್ಲಿ ಘೋಷಿಸಿರುವ 75 ಭರವಸೆಗಳನ್ನು ಬಜೆಟ್‌ಮೂಲಕ ಈಡೇರಿಸುತ್ತೇವೆ ಎಂದು‌ಭರವಸೆ ನೀಡಿದ ಸಿಎಂ, ಪ್ರಧಾನಿ ಸೇರಿದಂತೆ ಬಿಜೆಪಿಯ ನಾಯಕರು ಈ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.

ಈ ದೇಶವನ್ನು ದಿವಾಳಿ ಮಾಡಿದ್ದು ಮೋದಿ ಅವರ ಸರ್ಕಾರವೇ ಹೊರತು‌ ನಾವು ಯಾರೂ ಅಲ್ಲ ಎಂದು ಟೀಕಿಸಿದ ಸಿಎಂ, ಈ ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು, ಭ್ರಷ್ಟಚಾರ ಹಾಗೂ ನಿರುದ್ಯೋಗವನ್ನು ಹೆಚ್ಚಿಸುವುದರ ಜೊತೆಗೆ ಬಡವರಿಗೆ ದಲಿತರಿಗೆ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದು ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಸರ್ಕಾರ ಆಳಿತದಲ್ಲಿದ್ದಾಗ ಕಲ್ಯಾಣ ಕರ್ನಾಟಕದ 99,600 ಸೇರಿದಂತೆ ರಾಜ್ಯದಲ್ಲಿ 14.52 ಲಕ್ಷ ಮನೆ ಕಟ್ಟಿಸಿದ್ದೆವು ಆದರೆ ಬಿಜೆಪಿ ಸರ್ಕಾರ ಕಕ ಭಾಗದಲ್ಲಿ 19000 ಹಾಗೂ ರಾಜ್ಯದಲ್ಲಿ 7 ಲಕ್ಷ ಮನೆ ಕಟ್ಟಿಸಿದ್ದಾರೆ. ಕಕ ಭಾಗದ ಅಭಿವೃದ್ದಿಗೆ ನಮ್ಮ ಸರ್ಕಾರ ತನ್ನ ಬದ್ದತೆ ತೋರಿಸಿದೆ ಎಂದು ಹೇಳಿದ ಸಿಎಂ, ಬಿಜೆಪಿ ಸರ್ಕಾರ ಈ ಭಾಗದ ಹೆಸರನ್ನು ಮಾತ್ರ ಬದಲಾಯಿಸಿದೆ ಎಂದರು.

ಶಕ್ತಿ ಯೋಜನೆಯಡಿಯಲ್ಲಿ ಪ್ರತಿನಿತ್ಯ 55 ಲಕ್ಷ ಮಹಿಳೆಯರು ಪ್ರತಿನಿತ್ಯ ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರು ದೇವಸ್ಥಾನ ಸೇರಿದಂತೆ ಅವಶ್ಯಕತೆ ಇರುವ ಕಡೆಗೆ ಹೋಗುತ್ತಿದ್ದಾರೆ. ಇದು‌ ಬಿಜೆಪಿ ನಾಯಕರ ಹೊಟ್ಟೆ ಉರಿಗೆ ಕಾರಣವಾಗಿದೆ ಎಂದರು.

ಯೂರೋಪ್ ದೇಶದಲ್ಲಿ ಗ್ಯಾರಂಟಿಗಳನ್ನು ನೋಡಿ‌ ನಾವು ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದೇವೆ. ಇದೇ ರೀತಿ ದೇಶದ ಬೇರೆ ಬೇರೆ ರಾಜ್ಯಗಳು ಕೂಡಾ ಗ್ಯಾರಂಟಿ ಯೋಜನೆ ಜಾರಿಗೆ ತರಲಿವೆ. ಇದು ಕರ್ನಾಟಕ‌ ಮಾಡೆಲ್. ನಿಮ್ಮ ಗುಜರಾತ್ ಮಾಡೆಲ್ ಜಾರಿಗೆ ಬರಲು‌ ನಾವು ಬಿಡಲ್ಲ ಎಂದು ಕುಟುಕಿದರು.

1.41 ಕೋಟಿ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ಜುಲೈ 1 ರಿಂದ ಪ್ರಾರಂಭವಾದ ಈ ಯೋಜನೆಯ ಅಡಿಯಲ್ಲಿ ಅಗಷ್ಟ್ ತಿಂಗಳಲ್ಲಿ 200 ಯೂನಿಟ್ ವರೆಗಿನ ವಿದ್ಯುತ್ ಬಳಕೆಗೆ ಶೂನ್ಯ ದರದ ಬಿಲ್ ಒದಗಿಸಲಿದೆ. ಈ ಯೋಜನೆ ಖರ್ಗೆ ಅವರು ಉಪಸ್ಥಿತರಿರಬೇಕು ಎಂದುಕೊಂಡು ಇಲ್ಲಿಯೇ ಜಾರಿಗೊಳಿಸಲಾಗುತ್ತಿದೆ ಎಂದು ಸಿಎಂ ಹೇಳಿದರು.

ಅನ್ನ ಭಾಗ್ಯ ಯೋಜನೆಯ‌ ಜಾರಿಗೆ ವಿಚಾರದಲ್ಲಿ ಅಕ್ಕಿ ನೀಡದ ಕೇಂದ್ರ ಸರ್ಕಾರ ಬಡವರ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಸಿಎಂ, ಎಫ್ ಸಿ ಐ ಮೊದಲು ಅಕ್ಕಿ ಕೊಡುವುದಾಗಿ ಹೇಳಿ ಆಮೇಲೆ‌ ನಿರಾಕರಿಸಿತು. ಬಿಜೆಪಿಗರು ಈ‌ ವಿಚಾರದಲ್ಲಿ ರಾಜಕೀಯ ಮಾಡಿದರು ನಿಮಗೆ ನಾಚಿಕೆಯಾಗುವುದಿಲ್ಲವೇ ? ಎಂದರು.

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ರಾಜ್ಯದ 1.28 ಕೋಟಿ‌ ಮಹಿಳಿಯರಿಗೆ ಪ್ರತಿತಿಂಗಳು ರೂ 2000 ಕೊಡಲಿದ್ದೇವೆ. ಇಂತಹ ಯೋಜನೆಯನ್ನು ದೇಶದ ಯಾವುದೇ ರಾಜ್ಯ‌ಜಾರಿಗೆ ತಂದಿಲ್ಲ. ನುಡಿದಂತೆ ನಾವು ನಡೆಯುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು.

ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ‌ ಭಾಗದ ಸಮಗ್ರ ಅಭಿವೃದ್ದಿಗೆ ಬದ್ದವಾಗಿದ್ದು. ಈ ಭಾಗದ ಹಿರಿಯ ನಾಯಕ‌ ಮಲ್ಲಕಾರ್ಜುನ ಖರ್ಗೆ ಅವರು ಹೇಳಿರುವಂತೆ ಬಿಡುಗಡೆಯಾಗುವ‌ ರೂ‌ 5000 ಕೋಟಿ‌ ಅನುದಾನದ ಬಳಕೆ‌ ಕುರಿತಂತೆ ಪರಿಶೀಲನೆ ಮಾಡಲಾಗುವುದು ಎಂದು ಅವರು ಹೇಳಿದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೊಳಿಸುತ್ತದೆ ಆದರೆ ಅಭಿವೃದ್ದಿ ಮಾಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ, ನಾವು ಗ್ಯಾರಂಟಿ ಜಾರಿಗೊಳಿಸುವುದರ ಜೊತೆಗೆ ಅಭಿವೃದ್ದಿಯನ್ನೂ ಕೂಡಾ ಮಾಡಲಿದ್ದೇವೆ.‌ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರಿಗೆ ನಾವು ಕೊಟ್ಟ ಭಾಷೆಯಂತೆ ಜನರಿಗೆ‌ ನೀಡಿದ ವಾಗ್ಧಾನದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದ ಸಿಎಂ ಇಂದಿನ‌ ಕಾರ್ಯಕ್ರಮದ ರೂವಾರಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News