ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ | ಮಹತ್ವದ ಸುಳಿವು ಸಿಕ್ಕಿದೆ : ಗೃಹ ಸಚಿವ ಜಿ.ಪರಮೇಶ್ವರ್

Update: 2024-03-06 17:31 IST
ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ | ಮಹತ್ವದ ಸುಳಿವು ಸಿಕ್ಕಿದೆ : ಗೃಹ ಸಚಿವ ಜಿ.ಪರಮೇಶ್ವರ್

Photo : PTI

  • whatsapp icon

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಇತ್ತೀಚೆಗೆ ನಡೆದ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಸುಳಿವು ದೊರತಿದ್ದು, ತನಿಖೆಯನ್ನು ರಾಜ್ಯ ಸಿಸಿಬಿ ಹಾಗೂ ಎನ್‍ಐಎ ತಂಡಗಳು ಜಂಟಿಯಾಗಿ ನಡೆಸುತ್ತಿವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ಸೈಬರ್ ಅಪರಾಧ ತನಿಖಾ ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಎನ್‍ಐಎ ಅಧಿಕಾರಿಗಳ ತಂಡ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಆರಂಭಿಸಿದೆ. ರಾಜ್ಯ ಸಿಸಿಬಿ ಸಹ ತನಿಖೆಯಲ್ಲಿದ್ದಾರೆ. ಆದ್ದರಿಂದ ಎರಡೂ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ ಎಂದರು.

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಪ್ರಕರಣದಲ್ಲಿ ಎಫ್‍ಎಸ್‍ಎಲ್ ವರದಿ ಆಧಾರದ ಮೇಲೆಯೇ ಮೂವರು ಆರೋಪಿತರನ್ನು ಬಂಧಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೆವು. ಈಗ ಬಂಧನ ಮಾಡಲಾಗಿದೆ, ತನಿಖೆ ನಡೆಯುತ್ತಿದೆ. ಬಿಜೆಪಿಯವರು ಅವರನ್ನು ಬಂಧಿಸಿ ಇವರನ್ನು ಬಂಧಿಸಿ ಎಂದು ಹೇಳುತ್ತಿದ್ದಾರೆ. ಅವರಿಗೆ ವಿರೋಧ ಪಕ್ಷವಾಗಿ ಮಾತನಾಡುವ ಹಕ್ಕಿದೆ, ಮಾತನಾಡಲಿ. ಆದರೆ ಸಾಕ್ಷ್ಯಾಧಾರಗಳಿಲ್ಲದೆ ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ನನಗೂ ಸಹ ಬೆದರಿಕೆಯ ಇಮೇಲ್‍ಗಳು ಬಂದಿವೆ. ಈ ಹಿಂದೆ ಹಲವು ಶಾಲೆಗಳಿಗೆ ಇಂತಹ ಬೆದರಿಕೆ ಮೇಲ್‍ಗಳು ಬಂದಿವೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಈ ರೀತಿಯ ಪ್ರಕರಣಗಳನ್ನು ಭೇದಿಸಲು ವಿದೇಶಿ ಏಜೆನ್ಸಿಗಳು, ಸಂಬಂಧಪಟ್ಟ ಕಂಪೆನಿಗಳು ಸಹಕಾರ ನೀಡಿದರೆ ಪ್ರಕರಣಗಳನ್ನು ಭೇದಿಸಬಹುದು ಎಂದು ಪರಮೇಶ್ವರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News