ಜಪಾನ್‍ನ 150ಕ್ಕೂ ಹೆಚ್ಚು ಕಂಪೆನಿಗಳಿಗೆ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಪರಿಚಯಿಸಿದ ರಾಜ್ಯದ ನಿಯೋಗ

Update: 2024-06-25 16:04 GMT

Photo : x/@MBPatil

ಟೋಕಿಯೊ : ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಜಪಾನ್‍ನಲ್ಲಿ ಮಂಗಳವಾರ ಆಯೋಜಿಸಿದ್ದ ರೋಡ್ದ ಷೋನಲ್ಲಿ ಜಪಾನಿನ 150ಕ್ಕೂ ಹೆಚ್ಚು ಕಂಪೆನಿಗಳಿಗೆ ರಾಜ್ಯದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳ ಪರಿಚಯ ಮಾಡಿಕೊಟ್ಟಿತು.

ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗವು ಜಪಾನ್ ಭೇಟಿಯ ಎರಡನೇ ದಿನ ಪರಿಸರ ಸಂರಕ್ಷಣೆ ಉಪಕರಣ ತಯಾರಿಸುವ ಬಹುರಾಷ್ಟ್ರೀಯ ಕಂಪೆನಿ ಡೈಕಿ ಆ್ಯಕ್ಸಿಸ್, ಕೈಗಾರಿಕಾ ಯಂತ್ರೋಪಕರಣ ತಯಾರಿಸುವ ಸುಮಿಟೊಮೊ ಹೆವಿ ಇಂಡಸ್ಟ್ರೀಸ್ (ಎಸ್‍ಎಚ್‍ಐ), ಸೆಮಿಕಂಡಕ್ಟರ್ ಪರಿಕರ ತಯಾರಿಸುವ ರೆನೆಸಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಕಂಪೆನಿ ಹಾಗೂ ಜಪಾನ್ ಸರಕಾರದ ಸಣ್ಣ ಕೈಗಾರಿಕೆಗಳ ಸಂಘಟನೆ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿತು.

ನಿಯೋಗದ ನೇತೃತ್ವ ವಹಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ರಾಜ್ಯದಲ್ಲಿನ ಸದೃಢ ಕೈಗಾರಿಕಾ ಪರಿಸರ ವ್ಯವಸ್ಥೆ, ಉದ್ಯಮಕ್ಕೆ ಅನುಕೂಲಕರ ವಾತಾವರಣ ಮತ್ತು ಸರಕಾರದ ಪ್ರಗತಿಪರ ನೀತಿಗಳನ್ನು ಮನದಟ್ಟು ಮಾಡಿಕೊಟ್ಟರು.

ಡೈಕಿ ಆ್ಯಕ್ಸಿಸ್ ಇಂಡಿಯಾ ಸಂಸ್ಥೆಯ ನಿರ್ದೇಶಕ ರಿಯೊ ರಿಯೊಟಾ ವಾಜಾ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಸುಸ್ಥಿರ ಬೆಳವಣಿಗೆ, ನೀರಿನ ಉಳಿತಾಯ, ಕೊಳಚೆ ನೀರು ನಿರ್ವಹಣಾ ಘಟಕ (ಎಸ್‍ಟಿಪಿ) ಸ್ಥಾಪಿಸುವ ಕುರಿತು ಮಾತುಕತೆ ನಡೆಸಿದರು. ಡೈಕಿ ಆ್ಯಕ್ಸಿಸ್ 100 ಕೋಟಿ ರೂ.ವೆಚ್ಚದಲ್ಲಿ ಕರ್ನಾಟಕದಲ್ಲಿ ತ್ಯಾಜ್ಯ ನೀರು ನಿರ್ವಹಣಾ ಉಪಕರಣಗಳ ತಯಾರಿಕಾ ಘಟಕ ಸ್ಥಾಪಿಸುವ ಒಪ್ಪಂದಕ್ಕೆ ಈ ಸಭೆಯಲ್ಲಿ ಸಹಿ ಹಾಕಲಾಯಿತು.

ರೆನೆಸಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಸಿಇಒ ಚಾರ್ಲ್ಸ್‌ ಕವಾಶಿಮಾ ಅವರನ್ನು ಭೇಟಿ ಮಾಡಿದ ನಿಯೋಗವು ವಿದೇಶಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಮತ್ತು ಸವಾಲುಗಳನ್ನು ಚರ್ಚಿಸಿತು.

ಸುಮಿಟೊಮೊ ಹೆವಿ ಇಂಡಸ್ಟ್ರೀಸ್‍ನ ಚೇರ್ಮನ್ ಆಫ್ ರಿಪ್ರೆಸೆಂಟೇಟಿವ್ ಡೈರೆಕ್ಟರ್ ತೆತ್ಸುಯ ಒಕಾಮುರ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ತೋಷಿಹರು ತನಾಕಾ ಅವರನ್ನು ರಾಜ್ಯದ ನಿಯೋಗವು ಭೇಟಿಯಾಗಿತ್ತು. ರಾಜ್ಯದಲ್ಲಿ ಕಂಪೆನಿಯ ವಹಿವಾಟಿನ ವಿಸ್ತರಣೆಗೆ ಅಗತ್ಯ ಬೆಂಬಲ ನೀಡುವುದಾಗಿ ನಿಯೋಗವು ಭರವಸೆ ನೀಡಿತು. 2024ರ ಅಂತ್ಯದ ವೇಳೆಗೆ ಎಸ್‍ಎಚ್‍ಐ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿ ಆರಂಭಿಸಲಿದೆ.

ಜಪಾನ್ ಸರಕಾರದ ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಮತ್ತು ಪ್ರಾದೇಶಿಕ ಆವಿಷ್ಕಾರ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ತೊಮೊಹಿರೊ ಕನೆಕೊ ಅವರ ಜೊತೆ ನಿಯೋಗವು ಸಮಾಲೋಚನೆ ನಡೆಸಿತು. ರಾಜ್ಯದಲ್ಲಿ ವಾಹನ ಬಿಡಿಭಾಗ, ಎಲೆಕ್ಟ್ರಾನಿಕ್ಸ್, ವೈಮಾಂತರಿಕ್ಷ ಹಾಗೂ ರಕ್ಷಣೆ, ಆಹಾರ ಸಂಸ್ಕರಣೆ, ಭಾರಿ ಯಂತ್ರೋಪಕರಣ ತಯಾರಿಕೆ ಕ್ಷೇತ್ರಗಳಲ್ಲಿ ತಮ್ಮ ವಹಿವಾಟು ವಿಸ್ತರಿಸಲು ಅಗತ್ಯ ಸಹಕಾರ ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದು ಎಂ.ಬಿ.ಪಾಟೀಲ್ ಭರವಸೆ ನೀಡಿದರು.

ಜಪಾನಿನ 26 ಸಾವಿರ ಎಸ್‍ಎಂಇಗಳ ಸಹಯೋಗದಲ್ಲಿ ಕರ್ನಾಟಕದ ಎಸ್‍ಎಂಇಗಳ ಬೆಳವಣಿಗೆ ಉತ್ತೇಜಿಸಲು ನೆರವಾಗುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಜಪಾನ್ ಮತ್ತು ಭಾರತದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಸ್‍ಎಂಇ) ಮುಖ್ಯಸ್ಥರ ಸಭೆಯನ್ನು ಆಗಸ್ಟ್‌ ನಲ್ಲಿ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕರ್ನಾಟಕದಲ್ಲಿ ಜಪಾನಿನ ಎಸ್‍ಎಂಇಗಳು ತಮ್ಮ ವಹಿವಾಟು ವಿಸ್ತರಿಸಲು ನಿಯೋಗವು ಆಹ್ವಾನ ನೀಡಿತು.

ಸೆಮಿಕಂಡಕ್ಟರ್ ಪರಿಕರಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪೆನಿ ರೆನೆಸಸ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್‍ನ ಹಿರಿಯ ನಿರ್ದೇಶಕ ಷೂ ಒಜಾಕಿ ಅವರನ್ನು ನಿಯೋಗವು ಭೇಟಿಯಾಗಿತ್ತು. ಎಲೆಕ್ಟ್ರಾನಿಕ್ಸ್ ವಲಯಕ್ಕೆ ದೇಶದಲ್ಲಿಯೇ ಗರಿಷ್ಠ ಪ್ರಮಾಣದ ಸಬ್ಸಿಡಿ ನೀಡುತ್ತಿರುವ ಕರ್ನಾಟಕದಲ್ಲಿನ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ತಯಾರಿಕಾ (ಇಎಸ್‍ಡಿಎಂ) ಕ್ಷೇತ್ರದಲ್ಲಿನ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿತು.

ಕರ್ನಾಟಕದ ನಿಯೋಗವು ಟೋಕಿಯೋದಲ್ಲಿನ ಕನ್ನಡ ಸಂಘದ ಪ್ರತಿನಿಧಿಗಳ ಜೊತೆ ಬೆಳಗಿನ ಉಪಾಹಾರದ ಸಂದರ್ಭದಲ್ಲಿ ಸಭೆ ನಡೆಸಿತು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News