ಉಡುಪಿ ನಗರಸಭೆ ಬಿಜೆಪಿ ಸದಸ್ಯನಿಂದ ದಂಪತಿ ಮೇಲೆ ಹಲ್ಲೆ

Update: 2024-05-13 08:51 GMT

ಬಾಲಕೃಷ್ಣ 

ಉಡುಪಿ: ಜಾಗದ ವಿಚಾರಕ್ಕೆ ಸಂಬಂಧಿಸಿ ದಂಪತಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರ ಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಸೇರಿದಂತೆ ಇತರ 6 ಮಂದಿ ವಿರುದ್ಧ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಕಕ್ಕುಂಜೆಯ ಸವಿತಾ ಅವರು ತಮಗಾದ ಹಲ್ಲೆ ಬಗ್ಗೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣದ ವಿವರ

ಸವಿತಾ ಹಾಗೂ ಬಾಲಕೃಷ್ಣ ಶೆಟ್ಟಿಗೆ ಸುಮಾರು 4 ವರ್ಷಗಳಿಂದ ಸವಿತಾ ಅವರ ಮನೆ ಜಾಗ ಹಾಗೂ ಸವಿತಾ ಅವರ ಪತಿಯ ಗ್ಯಾರೇಜ್ ವಿಚಾರದಲ್ಲಿ ತಕರಾರು ಇದ್ದು, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನ್ಯಾಯಾಲಯದಲ್ಲಿದೆ. ಈ ನಡುವೆ ಮೇ 10 ರಂದು ಬೆಳಗ್ಗೆ ಹಾಗೂ ಮದ್ಯಾಹ್ನದ ವೇಳೆ 2 ಬಾರಿ ಬಾಲಕೃಷ್ಣ ಶೆಟ್ಟಿ ಇತರ ಆರೊಪಿಗಳೊಂದಿಗೆ ಸವಿತಾ ಅವರ ಪತಿಯ ಗ್ಯಾರೇಜ್ ನ ಬಳಿ ಹೋಗಿ ಮಣಿಪಾಲ ಠಾಣೆಯಲ್ಲಿ ದಾಖಲಿಸಿದ ಕೇಸ್ ಅನ್ನು ವಾಪಾಸು ಪಡೆಯುವಂತೆ ಹಾಗೂ ಇಲ್ಲದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹೋಗಿದ್ದರು.

ಬಳಿಕ ಸಂಜೆ ವೇಳೆ ಸವಿತಾ ಅವರು ಪತಿ ಮತ್ತು ಮಕ್ಕಳೊಂದಿಗೆ ಕಕ್ಕುಂಜೆ ನಾರಾಯಣ ನಗರದಲ್ಲಿರುವ ಗ್ಯಾರೇಜ್ ನ ಬಳಿ ಹೋಗಿದ್ದಾಗ ಆರೋಪಿ ಬಾಲಕೃಷ್ಣ ಶೆಟ್ಟಿ ಇತರ 29 ಜನರೊಂದಿಗೆ ಗ್ಯಾರೇಜ್ ಬಳಿ ಸ್ಟೀಲ್ ರಾಡ್ ಅನ್ನು ಹಿಡಿದು ನಿಂತುಕೊಂಡಿದ್ದರು. ಈ ಬಗ್ಗೆ ಸವಿತಾ ಅವರ ಪತಿ ಪ್ರಶ್ನಿಸಿದಾಗ ನಾವು ಗ್ಯಾರೇಜ್ ಒಡೆಯಲು ನಿಂತುಕೊಂಡಿದ್ದೇವೆ. ನೀನು ಏನು ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಹಲ್ಲೆ ಮಾಡಿದ್ದು ಈ ವೇಳೆ ತಡೆಯಲು ಹೋದ ಸವಿತಾ ಹಾಗೂ ಅವರ ಪತಿಗೆ ಆರೋಪಿಗಳಾದ ಬಾಲಕೃಷ್ಣ ಶೆಟ್ಟಿ, ರಕ್ಷಿತಾ ಶೆಟ್ಟಿ, ರಾಜು, ಗಿರೀಶ್ ಎಂಬವರು ಸ್ಟೀಲ್ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸವಿತಾ ಅವರು ಮಹಿಳಾ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News