ಕೋಟ ಶ್ರೀನಿವಾಸ ಪೂಜಾರಿ ಅವರ ಭಾಷಾ ಜ್ಞಾನದ ಕುರಿತು ಕೇವಲವಾಗಿ ಮಾತನಾಡಿಲ್ಲ: ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ

Update: 2024-03-23 16:45 GMT

ಜಯಪ್ರಕಾಶ್ ಹೆಗ್ಡೆ

ಉಡುಪಿ: ತಮ್ಮ ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನು ನೋವಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು, ಭಾಷಾ ಜ್ಞಾನದ ಕುರಿತಂತೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಕುರಿತು ಯಾವುದೇ ಮಾತನ್ನು ಆಡಲಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೆ.ಜಯಪ್ರಕಾಶ್ ಹೆಗ್ಡೆ ಸ್ಪಷ್ಟಪಡಿಸಿದ್ದಾರೆ.

ಅಭ್ಯರ್ಥಿಗಳ ಕುರಿತು ಭಾಷಾ ಕದನ ಎನ್ನುವ ಮಾಧ್ಯಮ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ಬ್ರಹ್ಮಾವರದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ಸಂದರ್ಭದಲ್ಲಿ ಲೋಕಸಭೆಯಲ್ಲಿ ಭಾಷಾಂತರ ಸೌಲಭ್ಯ ಇರೋದರಿಂದ ಕನ್ನಡದಲ್ಲಿಯೂ ಮಾತನಾಡಬಹುದು. ಆದರೆ ಅಧಿಕಾರಿಗಳು ಇತರರೊಂದಿಗೆ ಕೆಲಸ ಮಾಡುವಾಗ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳ ಜ್ಞಾನ ಬೇಕಾಗುತ್ತದೆ ಎಂದಿದ್ದೆ ಎಂದು ಅವರು ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ.

ಒಬ್ಬ ಸಂಸದನಾಗಿ ಸೇವೆ ಸಲ್ಲಿಸಿದ ಅನುಭವದ ಆಧಾರದಲ್ಲಿ ಇದನ್ನು ಹೇಳಿದ್ದೇನೆ ಹೊರತು ಯಾರನ್ನೂ ಉದ್ದೇಶಿಸಿ ಹೇಳಿಲ್ಲ. ನನ್ನ ಮಾತುಗಳನ್ನು ಹೆಕ್ಕಿ, ಕಪೋಲಕಲ್ಪಿತವಾಗಿ ತಿರುಚಿ ಯಾರದೋ ಹೆಸರಿಗೆ ಜೋಡಿಸುವ ಕೆಟ್ಟ ಚಾಳಿಯನ್ನು ನಿಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.

ರಾಜಕೀಯ ಜೀವನದಲ್ಲಿ ಹಲವು ಚುನಾವಣೆಗಳನ್ನು ಎದುರಿಸಿರುವ ನಾನು ಎಲ್ಲಾ ಚುನಾವಣೆಯನ್ನು ಸೈದ್ಧಾಂತಿಕ ನೆಲೆಯಲ್ಲಿಯೇ ಎದುರಿಸಿದ್ದೇನೆ. ಎದುರಾಳಿಗಳನ್ನು ಸೌಜನ್ಯಯುತವಾಗಿ ಹಾಗೂ ಗೌರವದಿಂದ ಕಂಡಿದ್ದೇನೆ. ಅಪಪ್ರಚಾರ ಹಾಗೂ ಸುಳ್ಳು ವದಂತಿಗಳನ್ನು ಮಾಡಿಲ್ಲ ಹಾಗೂ ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಜನಪ್ರತಿಧಿಯಾಗಿ ಸೇವೆ ಸಲ್ಲಿಸಿದ ನನ್ನ ಸೇವೆ ಮತ್ತು ಜನಪ್ರತಿಯೊಬ್ಬರಿಗೆ ಇರುವ ಬದ್ಧತೆಯಡಿಯಲ್ಲಿ ನಾನು ಚುನಾವಣೆಗಳನ್ನು ಎದುರಿಸಿದ್ದೇನೆ ಎಂದು ಹೆಗ್ಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News