CPIM ಹಿರಿಯ ಸದಸ್ಯ ಕಾಂ.ರಾಘವ ಅಂಚನ್ ನಿಧನ

Update: 2024-09-04 05:41 GMT

ಮಂಗಳೂರು: CPIM ಹಿರಿಯ ಸದಸ್ಯ ಕಾಂ.ರಾಘವ ಅಂಚನ್ ಬಜಾಲ್ (85) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಕಾರ್ಮಿಕ ಚಳುವಳಿಯ ಪ್ರಮುಖ ಕೇಂದ್ರವಾಗಿದ್ದ ಬಜಾಲ್ ಪ್ರದೇಶದ ಪಕ್ಕಲಡ್ಕ ದಲ್ಲಿ ಹುಟ್ಟಿ ಬೆಳೆದಿರುವ ರಾಘವ ಅಂಚನ್ ರವರು, ಎಳೆಯ ಪ್ರಾಯದಲ್ಲೇ ತಮ್ಮ ಕಣ್ಣೆದುರು ನಡೆಯುತ್ತಿದ್ದ ನೇಯ್ಗೆ ,ಹಂಚು ಬೀಡಿ ಕಾರ್ಮಿಕರ ಹೋರಾಟಗಳಲ್ಲಿ ಸ್ವತಃ ಭಾಗವಹಿಸುವ ಮೂಲಕ ಎಡಪಂಥೀಯ ವಿಚಾರಧಾರೆಗೆ ಆಕರ್ಷಿತರಾಗಿದ್ದರು. ಬಳಿಕ ತಮ್ಮ ಯೌವ್ವನದಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರಾಗಿ ಬೆಳೆದರು.

ಕಮ್ಯುನಿಸ್ಟ್ ಪಕ್ಷದ ಚಟುವಟಿಕೆಗಳಲ್ಲಿ ದುಡಿದಿರುವ ರಾಘವ ಅಂಚನ್ ರವರು ದುಡಿಯುವ ವರ್ಗದ ಚಳುವಳಿ ಹೋರಾಟಗಳು ಎಲ್ಲೇ ನಡೆಯಲಿ, ಅಲ್ಲಿ ಭಾಗವಹಿಸುತ್ತಾ ಇತರ ಸಂಗಾತಿಗಳಿಗೆ ಸ್ಪೂರ್ತಿ ತುಂಬುತ್ತಿದ್ದರು. 1973 ರಲ್ಲಿ ಭೂಮಸೂದೆ ಜಾರಿಗಾಗಿ ರೈತ ಸಂಘಟನೆ ಆಯೋಜಿಸಿದ ಮಂಗಳೂರಿನಿಂದ ಬೆಂಗಳೂರವರೆಗೆ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಯವ್ವನದ ಕಾಲದಲ್ಲಿ ಪಕ್ಕಲಡ್ಕ ಯುವಕ ಮಂಡಲದ ಕಾರ್ಯದರ್ಶಿಯಾಗಿದ್ದುಕೊಂಡು ಹಲವಾರು ಜನಪರ ಚಟುವಟಿಕೆಗಳನ್ನು ಹಮ್ಮಿಕೊಂಡು ನೇತೃತ್ವಹಿಸಿದ್ದ‌ ರಾಘವ ಅಂಚನ್ ಅವರು,  ಈವರೆಗೂ ಆ ಯುವಕ ಮಂಡಲದ ಹೊಸ ತಲೆಮಾರಿನ ನಾಯಕರುಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು.

  ರಾಘವ ಅಂಚನ್ ರವರು ಪತ್ನಿ ನಾಲ್ಕು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News