ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಲ್ಲಿ ಸುರಕ್ಷತೆಯ ಖಾತರಿ

Update: 2024-07-15 09:52 GMT

ಮಂಗಳೂರು: ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಲ್ಲಿ ಸುರಕ್ಷತೆಯ ಖಾತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ವಿಶ್ವಾಸದ ಹೇಳಿಕೆಯ ಮಧ್ಯೆಯೂ ಸರಕಾರ ರೂಪಿಸಿದ ನಿಯಮಾವಳಿ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಶಾಲಾ ಮಕ್ಕಳನ್ನು ಕರೆದೊಯ್ಯುವ ಖಾಸಗಿ ವಾಹನಗಳ ಬೇಕಾಬಿಟ್ಟಿ ಓಡಾಟಕ್ಕೆ ಕಡಿವಾಣ ಹಾಕಲು ಸರಕಾರ ನಿಯಮಾವಳಿ ರೂಪಿಸಿದೆ. ಆದರೆ ಪ್ರಸಕ್ತ (2024-25ನೇ ಸಾಲಿನ) ಶೈಕ್ಷಣಿಕ ವರ್ಷ ಆರಂಭಗೊಂಡು ಒಂದೂವರೆ ತಿಂಗಳಾಗುತ್ತಾ ಬಂದಿದ್ದರೂ ಈ ನಿಟ್ಟಿನಲ್ಲಿ ವ್ಯವಸ್ಥಿತ ಕ್ರಮವಾಗಿಲ್ಲ ಎಂಬ ದೂರು ಕೇಳಿ ಬರುತ್ತಿದೆ.

ದಿನನಿತ್ಯ ಬೆಳಗ್ಗೆ ನಿಗದಿತ ಸಮಯಕ್ಕೆ ಶಾಲೆಗೆ ತಲುಪಬೇಕಾದ ಧಾವಂತವು ಮಕ್ಕಳು ಮತ್ತು ಪೋಷಕರಿಗೆ ಮಾತ್ರವಲ್ಲ, ಖಾಸಗಿ ವಾಹನ ಚಾಲಕರಿಗೂ ಎದುರಾಗಿದೆ. ಸಂಜೆ ಶಾಲೆ ಬಿಟ್ಟೊಡನೆ ಟ್ಯೂಷನ್, ಡ್ಯಾನ್ಸ್, ಕರಾಟೆ ಇತ್ಯಾದಿ ತರಗತಿಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಒತ್ತಡವೂ ಚಾಲಕರ ಮೇಲೆ ಇದೆ ಎನ್ನಲಾಗುತ್ತಿದೆ. ಈ ಧಾವಂತ ಮತ್ತು ಒತ್ತಡದ ಮಧ್ಯೆ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಮತ್ತು ಕರೆತರುವ ಜವಾಬ್ದಾರಿಯು ವಾಹನ ಚಾಲಕರಿಗೆ ಸವಾಲಾಗಿ ಪರಿಣಮಿಸಿದೆ.

ಜಿಲ್ಲೆಯ ಬಹುತೇಕ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಇದೆ. ಇತರ ಖಾಸಗಿ ವಾಹನಗಳಲ್ಲಿ ಕೂಡ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯಲಾಗುತ್ತದೆ. ಇಂತಹ ವಾಹನಗಳ ಚಾಲಕರು, ನಿರ್ವಾಹಕರು ಸುರಕ್ಷತೆಯನ್ನು ಖಾತರಿಪಡಿಸುವ ಬಹುದೊಡ್ಡ ಜವಾಬ್ದಾರಿ ಹೊಂದಿರುತ್ತಾರೆ. ಇದಕ್ಕೆ ಪೂರಕವಾಗಿ ಸರಕಾರ ಕೂಡ ನಿಯಮಾವಳಿಗಳನ್ನು ರೂಪಿಸಿದೆ. ಅಪಾಯ, ಅವಘಡಗಳು ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮಕ್ಕಳ ಸುರಕ್ಷತೆಗೆ ನಿರಂತರ ಎಚ್ಚರ ವಹಿಸುವುದು ಅಗತ್ಯ ಎಂಬ ಮಾತು ಕೇಳಿ ಬರುತ್ತಿದೆ.

2013ರಲ್ಲಿ ಸರಕಾರ ಹೊರಡಿಸಿರುವ ಆದೇಶದಂತೆ ಶಾಲಾ ವಾಹನಗಳನ್ನು ಹೊಂದಿರುವ ಪ್ರತಿಯೊಂದು ಶಾಲೆಯಲ್ಲೂ ಕಡ್ಡಾಯವಾಗಿ ಶಾಲಾ ವಾಹನ ಸುರಕ್ಷಾ ಸಮಿತಿಇರಬೇಕು. ಸಮಿತಿಯಲ್ಲಿ ಹೆತ್ತವರು, ವಾಹನಗಳಿಗೆ ಸಂಬಂಧಿಸಿದ ಪ್ರತಿನಿಧಿಗಳು ಮತ್ತು ಶಾಲಾ ಸಿಬ್ಬಂದಿಯ ಪ್ರಾತಿನಿಧ್ಯವಿರಬೇಕು. ಸಮಿತಿಯು ವಾಹನದ ದಾಖಲಾತಿ, ವಾಹನದಲ್ಲಿರುವ ಸುರಕ್ಷಾ ಕ್ರಮಗಳನ್ನು ನಿರಂತರವಾಗಿ ಪರಿಶೀಲಿಸುತ್ತಿರಬೇಕು.

ಶಾಲಾ ವಾಹನಗಳಲ್ಲದೆ ಇತರ ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುವುದಾದರೆ ಮೋಟರ್ ವಾಹನ ಕಾಯ್ದೆ ಸೆಕ್ಷನ್ 74ರಂತೆ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಪರವಾನಿಗೆಯನ್ನು ಪಡೆದಿರಬೇಕು. ವಾಹನದ ಮುಂದೆ ಹಾಗೂ ಹಿಂದೆ ಶಾಲಾ ವಾಹನ ಎಂಬ ಫಲಕವಿರಬೇಕು. ಪ್ರತೀ ವಾಹನದಲ್ಲೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಅಗ್ನಿಶಮನ ಯಂತ್ರಗಳು ಇರಬೇಕು. ಮಕ್ಕಳನ್ನು ನಿಗದಿತ ಸಂಖ್ಯೆಗಿಂತ ಹೆಚ್ಚು ಹಾಕಬಾರದು. ಆದರೆ, ಬಹುತೇಕ ಖಾಸಗಿ ವಾಹನಗಳಲ್ಲಿ ಈ ನಿಯಮ ಜಾರಿಯಲ್ಲಿಲ್ಲ.

ಶಾಲೆಗಳಿಂದ ಕಾರ್ಯಾಚರಿಸುವ ವಾಹನಗಳು, ಇತರ ಬಾಡಿಗೆ ವಾಹನಗಳು, ಆಟೊ ರಿಕ್ಷಾಗಳನ್ನು ಹೊರತುಪಡಿಸಿ ಕೆಲವು ಹೆತ್ತವರು ಅಥವಾ ಮಕ್ಕಳ ಮನೆಯವರು ಅವರದ್ದೇ ಆದ ದ್ವಿಚಕ್ರ ಮತ್ತಿತರ ವಾಹನಗಳಲ್ಲಿ ಕರೆದೊಯ್ಯುತ್ತಾರೆ. ಆದರೆ ಸರಕಾರದ ನಿಯಮಗಳು ಇಲ್ಲೂ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಅಧಿಕ ಸಂಖ್ಯೆಯ ವಿದ್ಯಾರ್ಥಿಗಳನ್ನು ಖಾಸಗಿ ವಾಹನಗಳಲ್ಲಿ ಕರೆದೊಯ್ಯಲಾಗುತ್ತದೆ. ವೇಗವಾಗಿ ಸಂಚರಿಸುತ್ತವೆ. ಮಕ್ಕಳನ್ನು ಹತ್ತಿಸುವಾಗ ಮತ್ತು ಇಳಿಸುವಾಗ ಧಾವಂತ ತೋರಲಾಗುತ್ತದೆ ಎಂಬ ಆರೋಪದ ಮಧ್ಯೆ ಕೆಲವು ವಾಹನಗಳಲ್ಲಿ ಚಾಲಕರು ಮಾತ್ರ ಇರುತ್ತಾರೆ. ನಿರ್ವಾಹಕರು ಅಥವಾ ಇತರ ಸಿಬ್ಬಂದಿ ವರ್ಗವಿರುವುದಿಲ್ಲ. ಕೆಲವು ಶಾಲೆಗಳು ರೆಗ್ಯೂಲರ್ ಚಾಲಕರನ್ನು ಕೂಡ ಇಟ್ಟುಕೊಳ್ಳುವುದಿಲ್ಲ. ಅನುಭವ ಇಲ್ಲದವರಿಂದಲೂ ಚಾಲನೆ ಮಾಡಿಸಲಾಗುತ್ತದೆ. ವಾಹನಗಳನ್ನು ಶಾಲೆಯ ಪಕ್ಕದ ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದರಿಂದ ಇತರ ವಾಹನಗಳ ಚಾಲನೆಗೆ, ಮಕ್ಕಳ ಸುರಕ್ಷತೆಗೆ ಅಡ್ಡಿಯಾಗುತ್ತದೆ ಎಂಬ ದೂರು ವ್ಯಾಪಕವಾಗಿವೆ.

ಅಟೊರಿಕ್ಷಾಗಳಲ್ಲಿ ಸಾಮಾನ್ಯವಾಗಿ ಮೂವರು ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಒಂದೂವರೆ ಪಟ್ಟು ಅಂದರೆ ಗರಿಷ್ಠ ಐದು ಮಕ್ಕಳ ಪ್ರಯಾಣಕ್ಕೆ ಅವಕಾಶವಿದೆ. ನಿಯಮ ಮೀರಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೆಲವು ರಿಕ್ಷಾಗಳಲ್ಲಿ ಏಳೆಂಟು ಮಕ್ಕಳು ಮತ್ತವರ ಬ್ಯಾಗ್, ಟಿಫಿನ್, ವಾಟರ್ ಬಾಟಲ್‌ಗಳನ್ನು ತುಂಬಿಸಿಕೊಂಡು ಹೋಗಲಾಗುತ್ತಿದ್ದು, ಮಕ್ಕಳಿಗೆ ಈ ಪ್ರಯಾಣವು ಪ್ರಯಾಸವಾಗಲಿದೆ ಎಂಬ ಆರೋಪವಿದೆ.

ಮಕ್ಕಳನ್ನು ಸಾಗಿಸುವ ವಾಹನಗಳಲ್ಲಿ ನಿಯಮ ಉಲ್ಲಂಘಿಸಿದರೆ ಶಾಲೆಗಳು ಹಾಗೂ ವಾಹನ ಚಾಲಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಶಾಲಾ ಮುಖ್ಯಸ್ಥರಿಗೆ, ವಾಹನ ಚಾಲಕರಿಗೆ ಈಗಾಗಲೇ ಸಭೆ ನಡೆಸಿ ಸೂಚನೆ ನೀಡಲಾಗಿದೆ. ಪೊಲೀಸ್ ಮತ್ತು ಸಾರಿಗೆ ಇಲಾಖೆಯು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲಿದೆ. ವಾಹನ ಚಾಲಕರ ಮಾಹಿತಿ ಆಯಾ ಠಾಣಾ ಮಟ್ಟದಲ್ಲಿ ದಾಖಲಿಸಲು ಸೂಚಿಸಲಾಗಿದೆ.

 -ಅನುಪಮ್ ಅಗ್ರವಾಲ್, ಪೊಲೀಸ್ ಆಯುಕ್ತರು, ಮಂಗಳೂರು ನಗರ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News