ಮಂಗಳೂರು: ಸೆ.9 ರಂದು ‘ಮೊದಲ ಸ್ವಾತಂತ್ರ್ಯ ಸಂಗ್ರಾಮ, 1857 - ಜಂಟಿ ಬಲಿದಾನಗಳು’ ವಿಷಯದಲ್ಲಿ ಡಾ. ಶಂಸುಲ್ ಇಸ್ಲಾಂ ಉಪನ್ಯಾಸ

Update: 2023-09-06 09:30 GMT

ಡಾ. ಶಂಸುಲ್ ಇಸ್ಲಾಂ

ಮಂಗಳೂರು: ಈ ವರ್ಷದ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸವನ್ನು ಸೆಪ್ಟೆಂಬರ್ 9 ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರು ವಿವಿ ಆವರಣದಲ್ಲಿರುವ ರವೀಂದ್ರ ಕಲಾಭವನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ನಿವೃತ್ತ ಸಹಪ್ರಾಧ್ಯಾಪಕ, ಸಂಶೋಧಕ, ಲೇಖಕ ಹಾಗೂ ಜನಕಲಾ ಸಂಘಟಕರಾದ ಡಾ. ಶಂಸುಲ್ ಇಸ್ಲಾಂ ಅವರು ಮೊದಲ ಸ್ವಾತಂತ್ರ್ಯ ಸಂಗ್ರಾಮ, 1857 - ಜಂಟಿ ಬಲಿದಾನಗಳು, ಜಂಟಿ ವಾರಿಸುದಾರಿಕೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಭಾರತ ಕಮ್ಯೂನಿಸ್ಟ್ ಪಕ್ಷ ಹಾಗೂ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ) ನಾಯಕರಾಗಿದ್ದ ಬಿವಿ ಕಕ್ಕಿಲ್ಲಾಯರು (1919-2012) ಕರ್ನಾಟಕ ಏಕೀಕರಣ ಚಳುವಳಿಯಲ್ಲೂ ಮುಂದಾಳತ್ವ ವಹಿಸಿದ್ದರು.

ರಾಜ್ಯಸಭೆ ಹಾಗೂ ಕರ್ನಾಟಕ ವಿಧಾನಸಭೆಗಳ ಸದಸ್ಯರೂ ಆಗಿದ್ದ ಕಕ್ಕಿಲ್ಲಾಯರು ಪ್ರಶಸ್ತಿ ವಿಜೇತ ಲೇಖಕರು ಹಾಗೂ ಚಿಂತಕರಾಗಿದ್ದರು. ಅವರ ಗೌರವಾರ್ಥ, ದೇಶದ ಬಹು ಪಾಲು ಜನರನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಪರ್ಯಾಯ ಚಿಂತನೆಯನ್ನೂ, ಮಾರ್ಗೋಪಾಯಗಳನ್ನೂ ಪ್ರಚೋದಿಸುವ ಉದ್ದೇಶದಿಂದ ಪ್ರತೀ ವರ್ಷ ಬಿವಿ ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ವರ್ಷದ ಉಪನ್ಯಾಸವನ್ನು ಬೆಂಗಳೂರಿನ ಹೊಸತು ಮಾಸ ಪತ್ರಿಕೆ ಹಾಗೂ ಎಂಎಸ್ ಕೃಷ್ಣನ್ ಟ್ರಸ್ಟ್ ಮತ್ತು ಮಂಗಳೂರಿನ ಸಮದರ್ಶಿ ವೇದಿಕೆ ಇವುಗಳು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದಲ್ಲಿ ಜಂಟಿಯಾಗಿ ಆಯೋಜಿಸುತ್ತಿವೆ.

ಇದೇ ಕಾರ್ಯಕ್ರಮದಲ್ಲಿ ಡಾ. ಬಿ. ಆರ್. ಮಂಜುನಾಥ್ ಅವರು ಅನುವಾದಿಸಿ, ನವಕರ್ನಾಟಕ ಪ್ರಕಾಶನವು ಪ್ರಕಟಿಸಿರುವ ಡಾ. ಶಂಸುಲ್ ಇಸ್ಲಾಂ ಅವರ ಕೃತಿ ‘ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ 1857 - ಹೇಳದೇ ಉಳಿದ 1857ರ ಅದ್ಭುತ ಕಥೆಗಳು’ ಪುಸ್ತಕವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಡಾ. ಜಯರಾಜ್ ಅಮೀನ್ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಅಲ್ಲದೆ, ಡಾ. ಶಂಸುಲ್ ಇಸ್ಲಾಂ ಅವರು ರಾಷ್ಟ್ರೀಯ ಪತ್ರಾಗಾರಗಳಿಂದ ಸಂಗ್ರಹಿಸಿರುವ, ಹಿಂದೆಂದೂ ಪ್ರಕಟಿಸಲ್ಪಡದೇ ಉಳಿದಿರುವ, ಮೊದಲ ಸ್ವಾತಂತ್ರ್ಯ ಸಂಗ್ರಾಮದ 1857-58ರ ಕಾಲದ ಕರ್ನಾಟಕದ ಎಲ್ಲಾ ಜಾತಿ, ಮತ, ಪಂಥ, ಸಾಮಾಜಿಕ-ಆರ್ಥಿಕ ಸ್ತರಗಳಿಗೆ ಸೇರಿದ್ದ 128 ಹುತಾತ್ಮರ ಹೆಸರುಗಳನ್ನು ಇದೇ ಮೊದಲಿಗೆ ಪ್ರಕಟಿಸಿ ಆ ಹುತಾತ್ಮರ ಚೇತನಗಳಿಗೆ ಹೃತ್ಪೂರ್ವಕ ನಮನಗಳನ್ನು ಸಲ್ಲಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಮಂಗಳೂರಿನ ಖ್ಯಾತ ವೈದ್ಯ ಹಾಗೂ ಬಿವಿ ಕಕ್ಕಿಲ್ಲಾಯರ ಮಗ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಸಾರ್ವಜನಿಕರನ್ನು ಆಹ್ವಾನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News