ಮಂಗಳೂರು: ಪಿಎಸಿಎಲ್ ಏಜೆಂಟರ ಸಮಾವೇಶ
ಮಂಗಳೂರು:‘ಪಿಎಸಿಎಲ್’ನಿಂದ ಆದ ಅನ್ಯಾಯದ ವಿರುದ್ದದ ಮುಂದಿನ ಹೋರಾಟದ ರೂಪುರೇಷೆಗಾಗಿ ‘ಪಿಎಸಿಎಲ್’ ಏಜೆಂಟರ ದ.ಕ.ಜಿಲ್ಲಾ ಸಮಾವೇಶವು ರವಿವಾರ ನಗರದ ಜಪ್ಪುಡಬಲ್ಗೇಟ್ ಬಳಿ ಇರುವ ಸಂತ ಜೋಸೆಫ್ ನಾಟಕ ಸಂಘದ ಸಭಾಂಗಣದಲ್ಲಿ ನಡೆಯಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಒಂದೊಂದು ಹೆಸರಲ್ಲಿ ಮಂಗಳೂರಿಗೆ ಆಗಮಿಸುತ್ತಿರುವ ಬ್ಲೇಡ್ ಕಂಪೆನಿಗಳು ಜನಸಾಮಾನ್ಯರ ಹಣವನ್ನು ಉಳಿತಾಯದ ಹೆಸರಿನ ಯೋಜನೆಯಲ್ಲಿ ಕೊಳ್ಳೆ ಹೊಡೆದು ಕೋಟ್ಯಂತರ ಹಣವನ್ನು ಮೋಸ ಮಾಡಿ ಬಾಗಿಲು ಮುಚ್ಚಿದ ಪ್ರಕರಣಗಳ ಬಗ್ಗೆ ಸಾಲು ಸಾಲು ಉದಾಹರಣೆಗಳಿವೆ. ಜನರ ಆರ್ಥಿಕ ಸಂಕಷ್ಟಗಳ ಪರಿಹಾರಕ್ಕೆಂದು ಮಂಗಳೂರಿಗೆ ಬರುವ ಇಂತಹ ಬ್ಲೇಡ್ ಕಂಪೆನಿಗಳ ಮೋಸದ ಜಾಲಕ್ಕೆ ಜನತೆ ಬಲಿಬೀಳಬಾರದು ಎಂದು ಕರೆ ನೀಡಿದರು.
ಪಿಎಸಿಎಲ್ ಕಂಪೆನಿ ೪೯ ಸಾವಿರ ಕೋ.ರೂ.ಗಳಷ್ಟು ಹಣವನ್ನು ವಂಚಿಸಿದೆ. ಈ ಹಿಂದೆಯೂ ನಗರದಲ್ಲಿ ಅನೇಕ ಬ್ಲೇಡ್ ಕಂಪೆನಿಗಳು ಜನರ ಹಣವನ್ನು ದೋಚಿ ಪರಾರಿಯಾಗಿದೆ. ಇಂತಹ ಕಂಪೆನಿಗಳು ಈ ರೀತಿ ರಾಜಾರೋಷವಾಗಿ ದೋಚಲು ಸರಕಾರಗಳೇ ಪರೋಕ್ಷ ಕಾರಣವಾಗಿವೆ. ಮುಂದೆ ಇಂತಹ ಬ್ಲೇಡ್ ಕಂಪೆನಿಗಳು ಕಾಲಿಡದಂತೆ ಜನರು ಎಚ್ಚರಿಕೆ ವಹಿಸಬೇಕಿದೆ ಎಂದು ಸಂತೋಷ್ ಬಜಾಲ್ ಹೇಳಿದರು.
ಸಿಐಟಿಯು ಜಿಲ್ಲಾ ನಾಯಕ ಸುನೀಲ್ ಕುಮಾರ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು. ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಮಾತನಾಡಿದರು. ವೇದಿಕೆಯಲ್ಲಿ ಕಾರ್ಮಿಕ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಪಿಎಸಿಎಲ್ ಏಜೆಂಟರ ಮುಖಂಡರಾದ ತೆಲ್ಮ ಮೊಂತೆರೋ, ಆಸುಂತ ಡಿಸೋಜ, ಶ್ಯಾಮಲಾ, ನ್ಯಾನ್ಸಿ ಫೆರ್ನಾಂಡಿಸ್, ರೊಸಲಿನ್ ಪಿಂಟೋ, ಚಿಂತಕ ದಾಮೋದರ ಉಳ್ಳಾಲರವರು ಉಪಸ್ಥಿತರಿದ್ದರು.
*ಮುಂದಿನ ದಿನಗಳಲ್ಲಿ ಪಿಎಎಸಿಎಲ್ ಕಂಪೆನಿಯಿಂದಾದ ಅನ್ಯಾಯದ ವಿರುದ್ಧ ಪ್ರಬಲ ಹೋರಾಟವನ್ನು ರೂಪಿಸಲು ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿಯನ್ನು ರಚಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಸುನೀಲ್ ಕುಮಾರ್ ಬಜಾಲ್, ಗೌರವ ಸಲಹೆಗಾರರಾಗಿ ಬಿಕೆ ಇಮ್ತಿಯಾಝ್, ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ದಾಮೋದರ ಉಳ್ಳಾಲ, ದಯಾನಂದ ಶೆಟ್ಟಿ, ಅಧ್ಯಕ್ಷರಾಗಿ ತೆಲ್ಮಾ ಮೊಂತೇರೋ, ಪ್ರಧಾನ ಕಾರ್ಯದರ್ಶಿಯಾಗಿ ಆಸುಂತಾ ಡಿಸೋಜ, ಖಜಾಂಚಿಯಾಗಿ ನಾನ್ಸಿ ಫೆರ್ನಾಂಡಿಸ್, ಉಪಾಧ್ಯಕ್ಷರಾಗಿ ರೋಸಲಿನ್ ಪಿಂಟೋ, ಶ್ಯಾಮಲಾ, ಅರುಣಾ ಕೋಟ್ಯಾನ್, ಜನಾರ್ದನ ಪುತ್ತೂರು, ಜೇಮ್ಸ್ ಪ್ರವೀಣ್, ಕಾರ್ಯದರ್ಶಿಗಳಾಗಿ ದೇವಿಕಾ ಮಂಗಳಾದೇವಿ, ವಾಯ್ಲೆಟ್ ಚೇಳೂರು, ಸುನೀತಾ ಬಜಾಲ್, ಶಾಲಿನಿ, ಪದ್ಮನಾಭ ತೋಕೂರು ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿಗೆ ೧೭ ಮಂದಿಯನ್ನು ಸದಸ್ಯರನ್ನಾಗಿ ಆರಿಸಲಾಯಿತು.