ಮಂಗಳೂರು : ಅಪಘಾತದಲ್ಲಿ ಸ್ಕೂಟರ್ ಸವಾರ ಮೃತ್ಯು; ಟ್ಯಾಂಕರ್ ಚಾಲಕನಿಗೆ ಜೈಲು ಶಿಕ್ಷೆ, ದಂಡ

Update: 2023-08-18 16:51 GMT

ಮಂಗಳೂರು, ಆ.18: ನಗರ ಹೊರವಲಯದ ಬೈಕಂಪಾಡಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ಚಾಲಕ ಪ್ರವೀಣ್ ಮಸೂತಿ ಎಂಬಾತನಿಗೆ ಜೆಎಂಎಫ್‌ಸಿ ನ್ಯಾಯಾಲಯವು 6 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

*ಪ್ರಕರಣ ವಿವರ: 2021ರ ನ.11ರಂದು ಬೆಳಗ್ಗೆ 9:20ಕ್ಕೆ ಅಬ್ದುಲ್ ರಹೀಂ ಎಂಬವರು ತನ್ನ ಸ್ಕೂಟರ್‌ನಲ್ಲಿ ಪಣಂಬೂರು ಜಂಕ್ಷನ್ ಕಡೆಯಿಂದ ಬೈಕಂಪಾಡಿಗೆ ತೆರಳುತ್ತಿದ್ದಾಗ ಅದೇ ದಾರಿಯಲ್ಲಿ ಬಂದ ಟ್ಯಾಂಕರ್ ಜೋಕಟ್ಟೆಯ ಬಳಿ ಢಿಕ್ಕಿ ಹೊಡೆದಿತ್ತು. ಇದರಿಂದ ಸ್ಕೂಟರ್ ಸವಾರ ರಹೀಂ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿಗೆ 6 ತಿಂಗಳ ಕಾಲ ಸಾದಾ ಶಿಕ್ಷೆ ಹಾಗೂ 6 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ನೀಡಿದೆ. ದಂಡ ತೆರಲು ತಪ್ಪಿದಲ್ಲಿ 3 ತಿಂಗಳು 10 ದಿನಗಳ ಕಾಲ ಸಾಧಾ ಶಿಕ್ಷೆ ಅನುಭವಿಸಲು ನ್ಯಾಯಾಧೀಶೆ ಅಂಜಲಿ ಶರ್ಮಾ ಆದೇಶಿಸಿದ್ದಾರೆ.

ಅಂದಿನ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರಕಾರದ ಪರವಾಗಿ ಸಹಾಯಕ ಅಭಿಯೋಜಕಿ ಗೀತಾ ರೈ ವಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News