ಮಂಗಳೂರು ವಿವಿ ಪ್ರಾಧ್ಯಾಪಕ ಪ್ರೊ. ಉದಯ ಬಾರ್ಕೂರು ನಿಧನ

Update: 2023-08-11 15:41 GMT

ಪ್ರೊ.ಉದಯ ಬಾರ್ಕೂರು

ಕೊಣಾಜೆ: ಮಂಗಳೂರು ವಿವಿ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಉದಯ ಬಾರ್ಕೂರು(59) ಅವರು ಶುಕ್ರವಾರ ಸಂಜೆ‌ ನಿಧನರಾದರು.

ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ 34 ವರ್ಷಗಳಿಂದ (1989)ರಿಂದ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಅವರು ವಿಭಾಗದ ಅಧ್ಯಕ್ಷರಾಗಿ, ವಿವಿಯ ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್ ಆಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅಲ್ಲದೆ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು ಹಾಗೂ ಇತ್ತೀಚೆಗೆಯಷ್ಟೇ ವಿಶ್ವವಿದ್ಯಾಲಯದ ನೆಹರೂ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡಿದ್ದರು.

2017ರಲ್ಲಿ ಮಂಗಳೂರು ವಿವಿಯಿಂದ ಉತ್ತಮ ಪ್ರಾಧ್ಯಾಪಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಕಾಂಗ್ರೆಸ್, ಕರ್ನಾಟಕ ಹಿಸ್ಟರಿ ಕಾಂಗ್ರೆಸ್ ನ ಸದಸ್ಯರಾಗಿದ್ದ ಡಾ.ಉದಯ ಕುಮಾರ್ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿಚಾರಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ಇತಿಹಾಸ ತಜ್ಞನಾಗಿ ಗುರುತಿಸಿದ್ದ ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆದುಕೊಂಡಿದ್ದಾರೆ.

'ವಸಾಹತುಶಾಹಿ ಇತಿಹಾಸ ಚರಿತ್ರೆಯ ವಾಸ್ತವ : ಟಿಪ್ಪು- ಹೈದರಾಲಿ : ಇತಿಹಾಸ ಕಥನ' , 'ಹಿಸ್ಟರಿಯಾಗ್ರಫಿ ಆಫ್ ತುಳು ಕಲ್ಚರ್ ಆಂಡ್ ಹಿಸ್ಟರಿ', 'ಕೊಲೊನಿಯಲಿಸಂ ಆ್ಯಂಡ್ ನ್ಯಾಷನಲಿಸಂ ಇನ್ ಮಾಡರ್ನ್ ಏಷಿಯಾ' ಕೃತಿ ಸೇರಿದಂತೆ ಅನೇಕ ಅಮೂಲ್ಯ ಇತಿಹಾಸ ಗ್ರಂಥಗಳನ್ನು‌ ಇವರು ಪ್ರಕಟಿಸಿದ್ದಾರೆ.‌

ಇವರ ನಿಧನಕ್ಕೆ ಮಂಗಳೂರು ವಿವಿ ಕುಲಪತಿ, ಕುಲಸಚಿವರು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News