ಬೋಳಿಯಾರ್‌ನಲ್ಲಿ ಮೀಲಾದುನ್ನಬಿ| ಹಿಂದೂ, ಕ್ರೈಸ್ತರಿಂದ ಸಿಹಿತಿಂಡಿ-ಪಾನೀಯ ವಿತರಣೆ: ಸ್ಪೀಕರ್ ಯು.ಟಿ.ಖಾದರ್ ಶ್ಲಾಘನೆ

Update: 2024-09-16 12:17 GMT

ಮಂಗಳೂರು: ಬೋಳಿಯಾರ್ ಮಸೀದಿಯ ಮೀಲಾದುನ್ನಬಿ ಮೆರವಣಿಗೆಯಲ್ಲಿ ಹಿಂದೂ, ಕ್ರೈಸ್ತರು ಸಿಹಿತಿಂಡಿ-ಪಾನೀಯ ವಿತರಿಸಿದ್ದು ಇದನ್ನು ಸ್ಥಳೀಯ ಶಾಸಕ, ಸ್ಪೀಕರ್ ಯು.ಟಿ.ಖಾದರ್ ಶ್ಲಾಘಿಸಿದ್ದಾರೆ.


ಕಳೆದ ಜೂನ್ ನಲ್ಲಿ ಪ್ರಧಾನಿ ಮೋದಿಯವರ ಪದಗ್ರಹಣದ ಹಿನ್ನೆಲೆಯಲ್ಲಿ ಬೋಳಿಯಾರ್​ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯುತ್ತಿತ್ತು. ಮೆರವಣಿಗೆಯ ಒಂದೆರೆಡು ಕಡೆ ಪ್ರಚೋದನಕಾರಿ ಸ್ಲೋಗನ್ ಕೂಗಲಾಗಿತ್ತು. ರಾತ್ರಿ 8:45ರ ಸುಮಾರಿಗೆ ಈ ಮೆರವಣಿಗೆ ಮುಕ್ತಾಯವಾಗಿತ್ತು. ನಂತರ ಒಂದು ಬೈಕ್​ನಲ್ಲಿ ಬಂದ ಮೂವರು ಬೋಳಿಯಾರು ಮಸೀದಿ ಬಳಿ ಮತ್ತೆ ಪ್ರಚೋದನಕಾರಿ ಸ್ಲೋಗನ್ ಕೂಗಿ ಗಲಭೆಗೆ ಪ್ರಚೋದನೆ ನೀಡಿ ಮುಂದೆ ಹೋಗಿದ್ದಾರೆ. ಈ ವೇಳೆ ಕೆಲವು ಯುವಕರು ಅವರನ್ನು ಹಿಂಬಾಲಿಸಿದ್ದಾರೆ. ಬಾರೊಂದರ ಸಮೀಪ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಮಾತಿಗೆ ಮಾತು ಬೆಳೆದು ಇಬ್ಬರಿಗೆ ಚೂರಿಯಿಂದ ಇರಿಯಲಾಗಿತ್ತು. 


ಬೋಳಿಯಾರ್ ಮಸೀದಿ ಪರಿಸರದಲ್ಲಿ ಇಂದು ಮೀಲಾದುನ್ನಬಿ ಮೆರವಣಿಗೆಯಲ್ಲಿ ಹಿಂದುಗಳು ಸಿಹಿತಿಂಡಿ, ಪಾನೀಯ ವಿತರಿಸಿದ್ದಾರೆ. ಈ ಸಾಮರಸ್ಯದ ಆಶಯವನ್ನು ಶ್ಲಾಘಿಸಿರುವ ಸ್ಥಳೀಯ ಶಾಸಕ, ಸ್ಪೀಕರ್ ಯು.ಟಿ. ಖಾದರ್, "ಇಂದು ಮನಸ್ಸು-ಮನಸ್ಸುಗಳು ಒಂದುಗೂಡಿ ಸೌಹಾರ್ದತೆಯ ಭಾಷ್ಯವನ್ನು ದಾಖಲಿಸಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಎಲ್ಲರೂ ಸಹಬಾಳ್ವೆಯ ಮೀಲಾದುನ್ನಬಿ ಆಚರಿಸಿದ್ದಾರೆ. ಆ ಮೂಲಕ ಬೋಳಿಯಾರ್ ಜನತೆ ಎಲ್ಲರಿಗೂ ಮಾದರಿಯಾಗಿದ್ದಾರೆ. ಜಾತಿ ಮತ ಬೇಧವಿಲ್ಲದೇ ಪರಸ್ಪರ ಹಂಚಿ ತಿನ್ನುವ ಈ ಸೌಹಾರ್ದದ ನಡೆ ಹೀಗೇ ಮುಂದುವರಿಯಲಿ" ಎಂದು ಹೇಳಿದ್ದಾರೆ.








Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News